ಹಿಜಾಬ್ ವಿವಾದ: 'ಇದು ಯೋಜಿತ ಪಿತೂರಿ' ಎಂದ ಸಚಿವ ನಖ್ವಿ
ನವದೆಹಲಿ, ಫೆಬ್ರವರಿ 14: ಕರ್ನಾಟಕದ ಹಿಜಾಬ್ ವಿವಾದವು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಕಾರಣವಾಗುತ್ತಿದೆ. ಈಗಾಗಲೇ ಹಲವಾರು ಮಂದಿ ರಾಷ್ಟ್ರೀಯ ನಾಯಕರು ಹಿಜಾಬ್ ಪರವಾಗಿ ಹಾಗೂ ವಿರೋಧವಾಗಿ ಹೇಳಿಕೆ ನೀಡಿದ್ದಾರೆ. ಈ ನಡುವೆ ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, "ಹಿಜಾಬ್ ವಿವಾದವು ಯೋಜಿತ ಪಿತೂರಿ," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ನಾಯಕ, ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, "ಹಿಜಾಬ್ ವಿವಾದವು ಯೋಜಿತ ಪಿತೂರಿ ಎಂಬುವುದು ಸ್ಪಷ್ಟವಾಗಿದೆ. ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣವನ್ನು ಹೇಗೆ ನಿಲ್ಲಿಸುವುದು ಎಂಬ ಮನಸ್ಥಿತಿ ಇದರ ಹಿಂದೆ ಇದೆ," ಎಂದು ಆರೋಪ ಮಾಡಿದ್ದಾರೆ. ಹಾಗೆಯೇ ಈ ಪಿತೂರಿ ಯಶಸ್ವಿಯಾಗದು ಎಂದು ಕೂಡಾ ಹೇಳಿದ್ದಾರೆ.
ಹಿಜಾಬ್ ವಿವಾದ: ರಾಷ್ಟ್ರ ಮಟ್ಟಕ್ಕೆ ಹರಡಬೇಡಿ ಎಂದ ಸುಪ್ರೀಂ
Recommended Video
"ಇದು ಯೋಜಿತ ಪಿತೂರಿ ಆಗಿದೆ. ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣವನ್ನು ಹೇಗೆ ನಿಲ್ಲಿಸುವುದು ಎಂಬ ಪಿತೂರಿ ಇದಾಗಿದೆ. ಆದರೆ ಈ ಹಿಜಾಬ್ ವಿವಾದ ಸೃಷ್ಟಿಯ ಪಿತೂರಿ ಯಶಸ್ವಿ ಆಗದು. ಹಿಜಾಬ್ ತಮ್ಮ ಸಾಂವಿಧಾನಿಕ ಹಕ್ಕು ಎಂದು ಹಲವರು ಹೇಳುತ್ತಿದ್ದಾರೆ. ಆದರೆ ನಿಮ್ಮ ಕರ್ತವ್ಯಗಳ ಬಗ್ಗೆ ಏನು ಹೇಳುವಿರಿ," ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಪ್ರಶ್ನೆ ಮಾಡಿದ್ದಾರೆ.
ವಸ್ತ್ರ ಸಂಹಿತೆಯನ್ನು ನಾವು ಅಲ್ಲಗಳೆಯುವಂತಿಲ್ಲ ಎಂದ ಮುಖ್ತಾರ್ ಅಬ್ಬಾಸ್ ನಖ್ವಿ
ಶಿಕ್ಷಣ ಸಂಸ್ಥೆಗಳ ವಸ್ತ್ರ ಸಂಹಿತೆಯನ್ನು ನಾವು ಅಲ್ಲಗಳೆಯುವಂತಿಲ್ಲ ಎಂದು ಕೂಡಾ ಬಿಜೆಪಿ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ಒತ್ತಿ ಹೇಳಿದ್ದಾರೆ. "ಸಾಂವಿಧಾನಿಕ ಹಕ್ಕುಗಳ ಬಗ್ಗೆ ಮಾತನಾಡುವವರು ತಮ್ಮ ಸಾಂವಿಧಾನಿಕ ಕರ್ತವ್ಯಗಳ ಬಗ್ಗೆಯೂ ಮಾತನಾಡಬೇಕು. ಶಿಕ್ಷಣ ಸಂಸ್ಥೆಗಳ ವಸ್ತ್ರ ಸಂಹಿತೆಯನ್ನು ಕೂಡಾ ನಾವು ನಿರಾಕರಿಸುವಂತಿಲ್ಲ. ಸಂವಿಧಾನವು ಈ ಎರಡೂ ವಿಷಯಗಳ ಬಗ್ಗೆ ಮಾತನಾಡುತ್ತದೆ. ಸಂವಿಧಾನವು -ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಮಾತನಾಡುತ್ತದೆ," ಎಂದು ತಿಳಿಸಿದ್ದಾರೆ.
ಈ ವರ್ಷದ ಜನವರಿಯಲ್ಲಿ ರಾಜ್ಯದ ಉಡುಪಿ ಜಿಲ್ಲೆಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದಕ್ಕೆ ತರಗತಿಗಳಿಗೆ ಹಾಜರಾಗದಂತೆ ನಿರ್ಬಂಧಿಸಲಾಗಿದೆ ಎಂದು ಆರೋಪಿಸಿ ಕಾಲೇಜಿನ ಹೊರಗೆ ಪ್ರತಿಭಟನೆ ಆರಂಭ ಮಾಡಿದ್ದಾರೆ. ಈ ಬಳಿಕ ರಾಜ್ಯದಲ್ಲಿ ಹಿಜಾಬ್ ವಿವಾದವು ಭುಗಿಳೆದ್ದಿದೆ. ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದ ಕಾರಣದಿಂದಾಗಿ ಕಾಲೇಜಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ.
ಉತ್ತಮ ಮುಸ್ಲಿಂ ಎಂದು ಸಾಬೀತುಪಡಿಸಲು ಹಿಜಾಬ್ ಧರಿಸಬೇಕಾಗಿಲ್ಲ: ಕಾಶ್ಮೀರದ 12 ನೇ ತರಗತಿ ಟಾಪರ್
ಈ ನಡುವೆ ಹಲವಾರು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು, ಅವರು ಹಿಜಾಬ್ ಧರಿಸಿದರೆ ನಾವು ಕೇಸರಿ ಶಲ್ಯ ಧರಿಸುತ್ತೇವೆ ಎಂದು ಹೇಳಿಕೊಂಡು ಕೇಸರಿ ಶಲ್ಯವನ್ನು ಧರಿಸಿ ಬರಲು ಆರಂಭ ಮಾಡಿದ್ದಾರೆ. ಈ ಬೆನ್ನಲ್ಲೇ ಈ ವಿವಾದವು ರಾಷ್ಟ್ರ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಈ ನಡುವೆ ಶಾಲಾ ಆಡಳಿತ ಮಂಡಳಿ ಅನುಮೋದಿಸಿದ ಸಮವಸ್ತ್ರವನ್ನು ಮಾತ್ರವೇ ವಿದ್ಯಾರ್ಥಿಗಳು ಧರಿಸಬಹುದು ಮತ್ತು ಇತರೆ ಯಾವುದೇ ಧಾರ್ಮಿಕ ಆಚರಣೆಗಳಿಗೆ ಕಾಲೇಜುಗಳಲ್ಲಿ ಅವಕಾಶ ನೀಡುವುದಿಲ್ಲ ಎಂದು ವಿವಿ ಪೂರ್ವ ಶಿಕ್ಷಣ ಮಂಡಳಿ ಸುತ್ತೋಲೆ ಹೊರಡಿಸಿತ್ತು.
ಈ ನಡುವೆ ರಾಜ್ಯದಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ವಿವಿಧ ಅರ್ಜಿಗಳನ್ನು ಆಲಿಸಿ ಕರ್ನಾಟಕ ಹೈಕೋರ್ಟ್ ಸಾರ್ವಜನಿಕರಿಗೆ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವಂತೆ ಹೈಕೋರ್ಟ್ ಮನವಿ ಮಾಡಿದೆ. ಹಾಗೆಯೇ ಮಧ್ಯಂತರ ತೀರ್ಪು ನೀಡಿದ್ದು, ಮುಂದಿನ ತೀರ್ಪಿನವರೆಗೆ ಯಾವುದೇ ಧಾರ್ಮಿಕ ಸಂಕೇತಗಳನ್ನು ಕಾಲೇಜುಗಳಲ್ಲಿ ಧರಿಸುವಂತಿಲ್ಲ ಎಂದು ಹೇಳಿದೆ. ಹೈಕೋರ್ಟ್ನ ಈ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಆದರೆ ಸುಪ್ರೀಂ ಈ ಪ್ರಕರಣದ ತುರ್ತು ವಿಚಾರಣೆಗೆ ನಕಾರ ಎಂದಿದೆ. ಹಾಗೆಯೇ ಈ ವಿಚಾರವನ್ನು ರಾಷ್ಟ್ರ ಮಟ್ಟಕ್ಕೆ ತರದಂತೆ ಮನವಿ ಮಾಡಿದೆ. (ಒನ್ಇಂಡಿಯಾ ಸುದ್ದಿ)