Tirupati Rain: ತಿರುಪತಿಗೆ ಹೋಗುವ ಭಕ್ತರೇ ಗಮನಿಸಿ: ತಿರುಮಲದಲ್ಲಿ ಭಾರೀ ಮಳೆ- ಟಿಟಿಡಿ ಅಲರ್ಟ್
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪ್ರಭಾವದಿಂದಾಗಿ ತಿರುಪತಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ಮಧ್ಯರಾತ್ರಿಯಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳೆಲ್ಲ ಜಲಾವೃತಗೊಂಡಿವೆ. ರಸ್ತೆಯ ಮೇಲೆ ಮೊಣಕಾಲು ಆಳದ ನೀರು ಹರಿಯುತ್ತಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಎಲ್ಲಿ ನೋಡಿದರೂ ರಸ್ತೆಗಳಲ್ಲಿ ನೀರು ತುಂಬಿಕೊಂಡಿರುವ ದೃಶ್ಯ ಕಾಣಿಸುತ್ತಿದ್ದು ಜನ ಜೀವನ ಅಸ್ತವ್ಯಸ್ಥವಾಗಿದೆ. ಇದರಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜು, ಅಂಗನವಾಡಿ ಕೇಂದ್ರಗಳಿಗೆ ಗುರುವಾರ (ಡಿ.12) ರಜೆ ಘೋಷಿಸಲಾಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಒಂದು ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಉಸ್ತುವಾರಿ ಜಿಲ್ಲಾಧಿಕಾರಿ ಶುಭಂ ಬನ್ಸಲ್ ಕಳೆದ ದಿನವೇ ತಿಳಿಸಿದ್ದಾರೆ.

ಇನ್ನೂ ನಿನ್ನೆಯಿಂದ ತಿರುಮಲದಲ್ಲಿ ಭಾರಿ ಮಳೆ ದಾಖಲಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ಚಂಡಮಾರುತದಿಂದಾಗಿ ನಿನ್ನೆ ಮಧ್ಯರಾತ್ರಿಯಿಂದ ಸತತವಾಗಿ ಮಳೆ ಸುರಿಯುತ್ತಿದೆ. ಧಾರಾಕಾರ ಮಳೆಯಿಂದಾಗಿ ತಿರುಮಲದ ತಗ್ಗು ಪ್ರದೇಶಗಳೆಲ್ಲ ಜಲಾವೃತಗೊಂಡಿವೆ. ಅಲ್ಲದೆ ಭಾರೀ ಮಳೆಗೆ ದೇವಸ್ಥಾನದ ನಾಲ್ಕು ಬೀದಿಗಳು ಜಲಾವೃತಗೊಂಡಿದ್ದು ದೇವಸ್ಥಾನಕ್ಕೆ ಪ್ರವಾಹದ ನೀರು ನುಗ್ಗಿದೆ. ಸ್ವಾಮಿಯ ದರ್ಶನಕ್ಕೆ ತೆರಳಿದ್ದ ಭಕ್ತರು, ಸ್ವಾಮಿಯ ದರ್ಶನ ಪಡೆದ ಬಳಿಕ ವಾಪಸ್ ತಮ್ಮ ದೂರ ದೂರುಗಳಿಗೆ ತೆರಳಲು ಪರದಾಡಿದ್ದು ಕಂಡು ಬಂದಿದೆ.
ಜಲಾಶಯಗಳು ಭರ್ತಿ
ಅಲ್ಲದೆ ಭಾರೀ ಮಳೆಯಿಂದಾಗಿ ತಿರುಮಲದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಿರುಮಲದಲ್ಲಿನ ಐದು ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಪಾಪವಿನಾಶನಂ, ಆಕಾಶಗಂಗಾ, ಗೋಗರ್ಭಂ, ಕುಮಾರಧಾರ ಮತ್ತು ಕುಮಲಧಾರ ಜಲಾಶಯಗಳು ತಿರುಮಲದ ಪ್ರಮುಖ ನೀರಿನ ಮೂಲಗಳಾಗಿವೆ. ಐದು ಜಲಾಶಯಗಳಲ್ಲಿ ನೀರಿನ ಮಟ್ಟ ಬಹುತೇಕ ಭರ್ತಿಯಾಗಿದೆ.

ಭಾರೀ ಮಳೆಯಿಂದಾಗಿ ಗೋಗರ್ಭಂ, ಪಾಪವಿನಾಶನಂ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ನೀರನ್ನು ಹೊರ ಬಿಡಲಾಗುತ್ತಿದೆ. ನೀರು ರಬಸಗೊಂಡ ಪರಿಣಾಮ ಪಾಪವಿನಾಶನಂ ಮತ್ತು ಶ್ರೀವಾರಿ ಪಾಡಿಗೆ ಹೋಗುವ ರಸ್ತೆಗಳನ್ನು ಟಿಟಿಡಿ ತಾತ್ಕಾಲಿಕವಾಗಿ ಮುಚ್ಚಿದೆ.
ಟಿಟಿಡಿ ಎಚ್ಚರಿಕೆ
ಇನ್ನೂ ಎರಡೂ ಘಾಟ್ಗಳಲ್ಲೂ ಭಾರಿ ಮಳೆ ದಾಖಲಾಗಿರುವ ಹಿನ್ನೆಲೆಯಲ್ಲಿ ಟಿಟಿಡಿ ಎಚ್ಚರಿಕೆ ನೀಡಿದೆ. ಮಳೆಯಿಂದಾಗಿ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎರಡನೇ ಘಾಟಿ ರಸ್ತೆಯಲ್ಲಿ ಅಲ್ಲೊಂದು ಇಲ್ಲೊಂದು ಸಣ್ಣಪುಟ್ಟ ಭೂಕುಸಿತವಾಗಿದೆ. ಘಾಟ್ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಜಾಗೃತರಾಗಬೇಕು ಎಂದು ಟಿಟಿಡಿ ಅಧಿಕಾರಿಗಳು ಸೂಚಿಸಿದ್ದಾರೆ.
ಇನ್ನೂ ದರ್ಶನಕ್ಕಾಗಿ ಬರುವ ಭಕ್ತರು ಕೊಠಡಿಗಳು ಸಿಗದೆ ಹೊರಗೆ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಟಿಟಿಡಿ ಹಾಕಿರುವ ಶೆಡ್ಗಳಲ್ಲಿ ಭಕ್ತರು ಕೊಠಡಿಗಳಿಗಾಗಿ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿದೆ. ಎರಡನೇ ಘಾಟಿ ರಸ್ತೆಯಲ್ಲಿ ಅಲ್ಲೊಂದು ಇಲ್ಲೊಂದು ಭೂಕುಸಿತ ಉಂಟಾಗಿದ್ದು ವಾಹನ ಸವಾರರು ಪ್ರಾಣವನ್ನು ಅಂಗೈಯಲ್ಲಿ ಹಿಡಿದು ಸವಾರಿ ಮಾಡುವಂತಾಗಿದೆ.
ಕೆಲವೆಡೆ ಬೃಹತ್ ಮರಗಳೂ ಧರೆಗುರುಳಿವೆ. ಭಾರಿ ಭೂಕುಸಿತದ ಪರಿಸ್ಥಿತಿ ಇದೆ. ಎರಡನೇ ಘಾಟ್ ರಸ್ತೆಯ ಎರಡನೇ ತಿರುವಿನ ಬಳಿ ಬಂಡೆಗಳು ಮತ್ತು ಬೃಹತ್ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಮಾಹಿತಿ ಪಡೆದ ವಿಪತ್ತು ನಿರ್ವಹಣಾ ಸಿಬ್ಬಂದಿ ಮರಗಳು ಮತ್ತು ಬಂಡೆಗಳನ್ನು ತೆಗೆದುಹಾಕಿದ್ದು ವಾಹನ ಸಂಚಾರ ಸುಗಮಗೊಂಡಿದೆ.












Click it and Unblock the Notifications