ಮುಂಬೈನಲ್ಲಿ ಧಾರಾಕರ ಮಳೆ: ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು, ರೈಲ್ವೆ ಹಳಿಗಳು ಜಲಾವೃತ
ಮುಂಬೈನಲ್ಲಿ ಧಾರಾಕರ ಮಳೆಯಾಗುತ್ತಿದ್ದು ಹಲವು ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಸಿದೆ. ಭಾರಿ ಮಳೆಯಿಂದಾಗಿ ಕೆಲವು ತಗ್ಗು ಪ್ರದೇಶಗಳು ಮತ್ತು ದಕ್ಷಿಣ ಮುಂಬೈನ ಮೆರೈನ್ ಲೈನ್ಸ್ ಬಳಿಯ ರೈಲು ಹಳಿಗಳು ಜಲಾವೃತವಾಗಿದೆ. ಹಲವು ಕಡೆಗಳಲ್ಲಿ ರಸ್ತೆಗಳು ಜಲಾವೃತವಾದ ಕಾರಣ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಮೆರೈನ್ ಲೈನ್ಸ್ ಮತ್ತು ಇತರ ಕೆಲವು ಸ್ಥಳಗಳಲ್ಲಿ ನೀರನ್ನು ಹೊರಹಾಕಲು ಬಿಎಂಸಿ ಪಂಪ್ಗಳನ್ನು ವ್ಯವಸ್ಥೆ ಮಾಡಿದೆ.
ಚರ್ಚ್ಗೇಟ್ ಮತ್ತು ಮೆರೈನ್ ಲೈನ್ಸ್ ನಿಲ್ದಾಣಗಳ ನಡುವಿನ ಹಳಿಗಳ ಮೇಲೆ ನೀರು ನಿಂತಿದೆ ಎಂದು ಪ್ರಯಾಣಿಕರು ದೂರಿದರು, ಆದರೆ ರೈಲು ಸೇವೆಗಳಿಗೆ ತೊಂದರೆಯಾಗಿಲ್ಲ ಎಂದು ಪಶ್ಚಿಮ ರೈಲ್ವೆ ಹೇಳಿದೆ. ಮಳೆಯಿಂದಾಗಿ ರಸ್ತೆಗಳಲ್ಲಿ ಹೊಂಡಗಳು ಬಿದ್ದಿದ್ದು, ಕೆಲವೆಡೆ ವಾಹನ ಸಂಚಾರ ಸ್ಥಗಿತಗೊಂಡಿದೆ. ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಮುಂಬೈ ಕೇಂದ್ರವು ಗುರುವಾರ ಮುಂಬೈ ಮತ್ತು ನೆರೆಯ ರಾಯಗಢ ಜಿಲ್ಲೆಗೆ 'ರೆಡ್' ಅಲರ್ಟ್ ನೀಡಿದ್ದು, ಕೆಲವು ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುರುವಾರ ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ದ್ವೀಪ ನಗರ, ಪೂರ್ವ ಮತ್ತು ಪಶ್ಚಿಮ ಉಪನಗರಗಳಲ್ಲಿ ಕ್ರಮವಾಗಿ 50.87 ಮಿಮೀ, 32.13 ಮಿಮೀ ಮತ್ತು 23.55 ಮಿಮೀ ಸರಾಸರಿ ಮಳೆಯಾಗಿದೆ. ಮುಂಬೈ ಪಕ್ಕದ ಥಾಣೆ ಮತ್ತು ಪಾಲ್ಘರ್ ಜಿಲ್ಲೆಗಳಿಗೆ, ಹವಾಮಾನ ಬ್ಯೂರೋ ಹಳದಿ ಎಚ್ಚರಿಕೆಯನ್ನು ನೀಡಿದೆ.
ಶುಕ್ರವಾರವೂ ಮುಂದುವರೆಯಲಿದೆ ಮಳೆ
ಶುಕ್ರವಾರ ಕೂಡ ಮುಂಬೈನಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಹಳದಿ ಎಚ್ಚರಿಕೆ ನೀಡಿದೆ. ನಗರದ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ವರದಿಯಲ್ಲಿ ತಿಳಿಸಿದೆ. ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಗುರುವಾರ ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿತ್ತು.
ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಕಾರಣ ಎಲ್ಲಾ ನಾಗರೀಕರು ಎಚ್ಚರಿಕೆಯಿಂದ ಇರಬೇಕು ಮತ್ತಿ ನೀಡುವ ಸೂಚನೆಗಳನ್ನು ಪಾಲಿಸಬೇಕು ಎಂದು ಬಿಎಂಸಿ ಮನವಿ ಮಾಡಿದೆ ಎಂದು ಮುಂಬೈ ಸಿವಿಕ್ ಕಮಿಷನರ್ ಮತ್ತು ಆಡಳಿತಾಧಿಕಾರಿ ಇಕ್ಬಾಲ್ ಸಿಂಗ್ ಚಾಹಲ್ ಹೇಳಿದ್ದಾರೆ.
ಮುಂಬೈ ಮಾತ್ರವಲ್ಲದ ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ರಾಜ್ಯದ ಹಲವು ಜಲಾಶಯಗಳು ಭರ್ತಿಯಾಗಿದ್ದು ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗಿದೆ. ರಾಧಾಕೃಷ್ಣ ಜಲಾಶಯದ ಎಲ್ಲಾ ಗೇಟುಗಳನ್ನು ತೆರೆಯಲಾಗಿದ್ದು ಅಪಾರ ಪ್ರಮಾಣದ ನೀರು ನದಿಗೆ ಹರಿಸಲಾಗುತ್ತಿದೆ.












Click it and Unblock the Notifications