ಮುಂಗಾರಿನೊಂದಿಗೆ ವಾಯುಭಾರ ಕುಸಿತ; ಈ ರಾಜ್ಯಗಳಲ್ಲಿ ಭಾರೀ ಮಳೆ ಸೂಚನೆ
ನವದೆಹಲಿ, ಸೆಪ್ಟೆಂಬರ್ 11: ಮುಂಗಾರು ಪ್ರಭಾವದಿಂದಾಗಿ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಭಾರೀ ಮಳೆ ಮುಂದುವರೆಯುತ್ತಿದೆ. ಇದರೊಂದಿಗೆ, ಶನಿವಾರ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಒಡಿಶಾದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ.
ಬಂಗಾಳ ಕೊಲ್ಲಿಯ ಪಶ್ಚಿಮ ಮಧ್ಯ ಭಾಗದಲ್ಲಿ ವಾಯುಭಾರ ಕುಸಿತದಿಂದ ಪ್ರಭಾವದಿಂದ ಭಾರೀ ಮಳೆಯಾಗುವ ಸೂಚನೆಯನ್ನು ಭುವನೇಶ್ವರ ಹವಾಮಾನ ಇಲಾಖೆ ನೀಡಿದೆ.
ಶನಿವಾರ ಬೆಳಿಗ್ಗೆ ಸೃಷ್ಟಿಯಾಗಿರುವ ವಾಯುಭಾರ ಕುಸಿತದ ಪ್ರಭಾವದಿಂದಾಗಿ ಅಧಿಕ ಮಳೆಯಾಗಲಿದ್ದು, ಒಡಿಶಾದ ಪುರಿ, ಖೋರ್ದಾ, ಜಗತ್ಸಿಂಗಪುರ, ಕೇಂದ್ರಪಾರಾ, ಗಂಜಾಂ, ನಯಾಗರ, ಭದ್ರಾಕ್, ಜೈಪುರದಲ್ಲಿ ಭಾನುವಾರ ಅಧಿಕ ಮಳೆಯಾಗುವುದಾಗಿ ತಿಳಿಸಿದೆ.

ಈ ವಾರದ ಆರಂಭದಲ್ಲಿ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿತ್ತು. ಇದರಿಂದ ದೇಶದ ಮಧ್ಯ ಭಾಗದಲ್ಲಿ ವಾರದಿಂದಲೂ ಅತಿ ಹೆಚ್ಚಿನ ಮಳೆಯಾಗುತ್ತಿದೆ. ಇದರಿಂದಾಗಿ ಗುಜರಾತ್ನಲ್ಲಿ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗುವುದಾಗಿ ತಿಳಿಸಿದೆ.
ಉತ್ತರ ಕೊಂಕಣ, ದಕ್ಷಿಣ ಗುಜರಾತ್, ಒಡಿಶಾ, ಛತ್ತೀಸ್ಗಡದಲ್ಲಿ ಸೆಪ್ಟೆಂಬರ್ 12 ಹಾಗೂ 13ರಂದು ಭಾರೀ ಮಳೆಯಾಗುವುದಾಗಿ ತಿಳಿಸಿದೆ. ಛತ್ತೀಸ್ಗಡ, ಕೊಂಕಣ ಹಾಗೂ ಗೋವಾದಲ್ಲಿ ಸೆಪ್ಟೆಂಬರ್ 11ರಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಸೆಪ್ಟೆಂಬರ್ 13ರವರೆಗೂ ಒಡಿಶಾ ಹಾಗೂ ಕೊಂಕಣ ಭಾಗದಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಸೆಪ್ಟೆಂಬರ್ 14ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಸೆಪ್ಟೆಂಬರ್ 11ರಿಂದ 14ರವೆಗೂ ಗುಜರಾತ್ನಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕರಾವಳಿ ಕರ್ನಾಟಕ, ತೆಲಂಗಾಣ, ಕೇರಳ, ಉತ್ತರ ಪ್ರದೇಶ, ಜಮ್ಮು- ಕಾಶ್ಮೀರ, ಲಡಾಖ್, ಹರಿಯಾಣ, ದೆಹಲಿ, ಪಂಜಾಬ್, ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ, ವಿದರ್ಭ, ಕೊಂಕಣ ಮತ್ತು ಗೋವಾದಲ್ಲಿ ಶನಿವಾರ ಮಳೆಯಾಗುವ ಸಾಧ್ಯತೆಯಿದೆ ಇದೆ ಎಂದು ಇಲಾಖೆ ತಿಳಿಸಿದೆ.

ದೆಹಲಿಯಲ್ಲಿ ಮತ್ತೆ ಮಳೆ ಆರಂಭ: ಮುಂಗಾರು ವಿರಾಮದ ನಂತರ ಮತ್ತೆ ದೆಹಲಿಯಲ್ಲಿ ಮಳೆ ಚುರುಕಾಗಿದೆ. ಶುಕ್ರವಾರ ಭಾರೀ ಮಳೆಯಾಗಿದ್ದು, 1000 ಮಿ.ಮೀ ಮಳೆ ದಾಖಲೆಯನ್ನು ಮೀರಿದೆ.
2010ರಿಂದ ಇದೇ ಮೊದಲ ಬಾರಿ 1000 ಎಂಎಂ ದಾಖಲೆ ಮೀರಿದೆ. ಜೂನ್ ಹಾಗೂ ಸೆಪ್ಟೆಂಬರ್ ತಿಂಗಳ ನಡುವೆ 1031.5 ಎಂಎಂ ಮಳೆಯನ್ನು ದೆಹಲಿ ಪಡೆದಿದೆ.
ಜೂನ್ ತಿಂಗಳಿನಿಂದ ಸೆಪ್ಟೆಂಬರ್ವರೆಗೆ ಸಾಮಾನ್ಯವಾಗಿ 648.9 ಎಂಎಂ ಮಳೆಯಾಗುತ್ತದೆಗಿ ಈ ಬಾರಿ 1031.5 ಎಂಎಂ ಮಳೆಯಾಗಿದೆ.
ದೆಹಲಿ, ಎನ್ಸಿಆರ್, ಬಹದ್ದೂರ್ಗಢ, ಗುರುಗ್ರಾಮ, ಲೋನಿ ದೇಹತ್, ಘಾಜಿಯಾಬಾದ್, ಇಂದಿರಾಪುರಂ, ರೋಟಕ್, ಚರ್ಕಿ ದಾದ್ರಿ, ಜಾಜರ್, ಜಿಂದ್, ಹಂಸಿ, ಮೀರತ್ ಸೇರಿದಂತೆ ಹಲವೆಡೆ ಮಳೆ ಮುಂದುವರೆಯಲಿದೆ.
ಕರ್ನಾಟಕದಲ್ಲಿ ಮಳೆ: ರಾಜ್ಯದಲ್ಲಿ ಸೆಪ್ಟೆಂಬರ್ 15ರವರೆಗೂ ಭಾರಿ ಮಳೆಯಾಗಲಿದ್ದು, 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.
19 ವರ್ಷಗಳಲ್ಲೇ ಈ ಬಾರಿ ಆಗಸ್ಟ್ನಲ್ಲಿ ಕನಿಷ್ಠ ಮಳೆ ಪ್ರಮಾಣ ದಾಖಲು
ಈ ಬಾರಿ ನೈಋತ್ಯ ಮುಂಗಾರಿನಲ್ಲಿ ಆಗಸ್ಟ್ ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಪ್ರಮಾಣ ದಾಖಲಾಗಿದ್ದು, 19 ವರ್ಷಗಳಲ್ಲೇ ದಾಖಲಾದ ಕನಿಷ್ಠ ಮಳೆ ಪ್ರಮಾಣ ಇದಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ತಿಳಿಸಿದೆ.
ಆಗಸ್ಟ್ ತಿಂಗಳ ಅವಧಿಯಲ್ಲಿ, ಇಡೀ ದೇಶಾದ್ಯಂತ ಮಳೆಯು ದೀರ್ಘಾವಧಿ ಸರಾಸರಿಗಿಂತ ಕಡಿಮೆ ಪ್ರಮಾಣದಲ್ಲಿ, ಅಂದರೆ 24% ಮಳೆ ಕೊರತೆ ಕಂಡುಬಂದಿದೆ. 2002ರ ನಂತರ, ಕಳೆದ 19 ವರ್ಷಗಳಲ್ಲಿ ದಾಖಲಾದ ಅತಿ ಕನಿಷ್ಠ ಮಳೆ ಪ್ರಮಾಣ ಇದಾಗಿದೆ.
ಜೂನ್ ತಿಂಗಳಿನಲ್ಲಿ ಶೇ 10ರಷ್ಟು ಅಧಿಕ ಮಳೆ ದಾಖಲಾಗಿತ್ತು. ಆದರೆ ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಮಳೆ ಕೊರತೆ ಕಂಡುಬಂದಿತ್ತು. ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ 7% ಮಳೆ ಕಡಿಮೆಯಾಗಿದ್ದರೆ, ಆಗಸ್ಟ್ ತಿಂಗಳಿನಲ್ಲಿ 24% ಕಡಿಮೆ ಮಳೆ ದಾಖಲಾಗಿದೆ.












Click it and Unblock the Notifications