ಕಾಜಿರಂಗದ ತುಂಬ ವನ್ಯಪ್ರಾಣಿಗಳ ಮೌನ ರೋದನ
ಕಾಜಿರಂಗ(ಅಸ್ಸಾಂ): ಜುಲೈ 14: ಅಸ್ಸಾಂ ರಾಜ್ಯದಾದ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಇದುವರೆಗೂ 44 ಜನ ಮೃತಪಟ್ಟಿದ್ದು, 24 ಜಿಲ್ಲೆಯ 17 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದ ಪರಿಣಾಮ ಎದುರಿಸುತ್ತಿದ್ದಾರೆ.
ಇಲ್ಲಿನ ಜಗತ್ಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನವೂ ಜಲಾವೃತಗೊಂಡಿದ್ದು, ಇಲ್ಲಿದ್ದ ಅಪರೂಪದ ಪ್ರಭೇದದ ಪ್ರಾಣಿ ಪಕ್ಷಿಗಳ ಸ್ಥಿತಿ ಚಿಂತಾಜನಕವಾಗಿದೆ. ಜನರಿಗಾದರೆ ನಿರಾಶ್ರಿತ ಶಿಬಿರಗಳಲ್ಲಿ ಊಟ, ವಸತಿಯ ವ್ಯವಸ್ಥೆ ಮಾಡಲಾಗಿದೆ. ಆದರೆ ಪ್ರಾಣಿ-ಪಕ್ಷಿಗಳ ಕತೆಯೇನು? ಅದಕ್ಕೆಂದೇ ಅಸ್ಸಾಂ ಸರ್ಕಾರ ವನ್ಯಪ್ರಾಣಿಗಳಿಗೂ ಸಂತ್ರಸ್ತ ಶಿಬಿರವನ್ನು ಆರಂಭಿಸಿದ್ದು, ಶಿಬಿರಗಳ ಮೂಲಕ ಪ್ರವಾಹದಿಂದ ರಕ್ಷಿಸಿದ ಪ್ರಾಣಿಗಳಿಗೆ ಆಹಾರ ಒದಗಿಸಲಾಗುತ್ತಿದೆ.
ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಶೇ.75 ರಷ್ಟು ಭಾಗ ಮುಳುಗಿ ಹೋಗಿದ್ದು, ಇಲ್ಲಿದ್ದ ಪ್ರಾಣಿಗಳೆಲ್ಲ ದಿಕ್ಕಾಪಾಲಾಗಿ ಓಡುತ್ತಿವೆ. ಪ್ರಾಣಿಗಳು ನೀರಿನಲ್ಲಿ ತೇಲಿಬರುತ್ತಿರುವ ದೃಶ್ಯವೇ ಎಲ್ಲೆಲ್ಲೂ ಕಾಣಸಿಗುತ್ತಿದೆ.
ಅಸ್ಸಾಂ ಸರ್ಕಾರ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಪ್ರಾಣಿಗಳ ನನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಎನ್ ಜಿಟಿ ಅಸ್ಸಾಂ ಸರ್ಕಾರಕ್ಕೆ ಹೇಳಿದೆ. ರಾಷ್ಟ್ರೀಯ ಉದ್ಯಾನವನ ಮುಕ್ಕಾಲು ಭಾಗ ಮುಳುಗಿರುವುದರಿಂದ ಪ್ರಾಣಿಗಳೆಲ್ಲ ಕಾಡು ಬಿಟ್ಟು ರಸ್ತೆಗೆ ಬರುತ್ತಿವೆ.
ಈಗಾಗಲೇ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಪ್ರಾಣಿಗಳ ರಕ್ಷಣೆಯನ್ನು ಇಲ್ಲಿನ ಸರ್ಕಾರ ಆರಂಭಿಸಿದ್ದು, ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಹಲವು ಪ್ರಾಣಿಗಳನ್ನು ರಕ್ಷಿಸಲಾಗಿದೆ. ಇದುವರೆಗೂ 23-25 ಪ್ರಾಣಿಗಳು ಪ್ರವಾಹಕ್ಕೆ ಸಿಕ್ಕು ಸಾವನ್ನಪ್ಪಿವೆ ಎಂದು ಇಲ್ಲಿನ ಅರಣ್ಯ ಇಲಾಖೆ ಹೇಳಿದೆ.
ವಿಶ್ವ ಪಾರಂಪರಿಕ ತಾಣವಾಗಿಯೂ ಪ್ರಸಿದ್ಧಿ ಪಡೆದ ಕಾಜಿರಂಗ ಅರಣ್ಯದ ದಯನೀಯ ಸ್ಥಿತಿಗೆ ಸಾಕ್ಷಿಯಾಗುವ ಕೆಲವು ದೃಶ್ಯಗಳು ಇಲ್ಲಿವೆ. (ಚಿತ್ರಕೃಪೆ: ಪಿಟಿಐ)

ಮುಂದಿನ ಗತಿಯೇನು?
ಉಕ್ಕಿ ಹರಿಯುತ್ತಿರುವ ಪ್ರವಾಹ ಕಂಡು ದಿಕ್ಕು ತೋಚದೆ ನಿಂತಿರುವ ಖಡ್ಗಮೃಗಗಳು, ಮುಂದಿನ ಗತಿಯೇನು ಎಂದು ಚಿಂತಿಸುತ್ತ ನಿಂತಿರುವಂತಿದೆ. ಕಾಜಿರಂಗ ಉದ್ಯಾನವನದ ಪ್ರಮುಖ ಆಕರ್ಷಣೆಗಳೇ ಈ ಖಡ್ಗಮೃಗಗಳಾಗಿದ್ದು, ಈ ಅಪರೂಪದ ಪ್ರಭೇದವನ್ನು ಹೊಂದಿರುವ ವಿಶ್ವದ ಕೆಲವೇ ಅಭಯಾರಣ್ಯಗಳಲ್ಲಿ ಕಾಜಿರಂಗ ಸಹ ಒಂದಾಗಿದೆ.

ರಸ್ತೆಗಿಳಿದ ಗಜಪಡೆ!
ಉದ್ಯಾನವನದಲ್ಲಿ ಪ್ರವಾಹ ಹೆಚ್ಚಿ, ಅರ್ಧಕ್ಕರ್ಧ ಉದ್ಯಾನವನ ಮುಳುಗುತ್ತಿದ್ದಂತೆಯೇ ಅಲ್ಲಿದ್ದ ಪ್ರಾಣಿಗಳೆಲ್ಲ ರಸ್ತೆಗೆ ಬರುತ್ತಿವೆ. ಇದರಿಂದಾಗಿ ಜನರೂ ಭಯಪಡುವಂತಾಗಿದೆ. ಆದರೆ ಜೀವ ಉಳಿಸಿಕೊಳ್ಳುವುದಕ್ಕೆ ವನಯಜೀವಿಗಳಿಗಾದರೂ ಬೇರೆ ದಾರಿ ಎಲ್ಲಿದೆ. ಗಜಪಡೆಯೊಂದು ಕಾಡಿನಿಂದ ರಸ್ತೆಗೆ ಬಂದ ದೃಶ್ಯ ಕಾಣಿಸಿದ್ದು ಹೀಗೆ.

ಎತ್ತರದ ಪ್ರದೇಶಕ್ಕೆ ಓಡುತ್ತಿವೆ...
ಅಭಯಾರಣ್ಯದೊಳಕ್ಕೆ ನೀರು ನುಗ್ಗುತ್ತಿದ್ದಂತೆಯೇ ಪ್ರಾಣಿಗಳೆಲ್ಲ ನೀರು ಬರಲಾಗದಂಥ ಎತ್ತರದ ಪ್ರದೇಶಕ್ಕೆ ಲಗ್ಗೆಯಿಡುತ್ತಿವೆ. ಬೆಟ್ಟ ಪ್ರದೇಶಕ್ಕೆ ಹೋಗಿ ನಿಂತು ಪ್ರವಾಹದಿಂದ ಬಚಾವಾದ ಎಮ್ಮೆಗಳು ಮತ್ತು ಖಡ್ಗಮೃಗ ಕಾಣಿಸಿದ್ದು ಹೀಗೆ.

ನಮ್ಮನ್ನು ಯಾರಾದರೂ ಕಾಪಾಡಿ...
ದೇಹದ ಮುಕ್ಕಾಲು ಭಾಗ ನೀರಿನಲ್ಲಿ ಮುಳುಗಿ ಹೋಗಿದ್ದು, ಮುಖವೊಂದನ್ನೇ ಹೊರಗೆ ಬಿಟ್ಟು ರಕ್ಷಣೆಗಾಗಿ ಮೂಕವಾಗಿಯೇ ಅಂಗಲಾಚುತ್ತಿದ್ದ ಎಮ್ಮೆಗಳು ಕಂಡಿದ್ದು ಹೀಗೆ.

ಮಾನವೀಯತೆಗೂ ಇದೆ ಜಾಗ!
ವನ್ಯಜೀವಿಗಳಿಗಾಗಿಯೇ ಕಾಜಿರಂಗದಲ್ಲಿ ಆರಂಭಿಸಿದ ಶಿಬಿರಗಳಲ್ಲಿ ವನ್ಯ ಪ್ರಾಣಿಗಳಿಗೆ ಆಹಾರ, ನೀರು ಒದಗಿಸುತ್ತಿರುವ ಜನರು. ಈ ಭೀಕರ ಪ್ರವಾಹದ ನಡುವಲ್ಲೂ ಮಾನವೀಯತೆ ಜೀವಂತವಾಗಿರುವುದು ಸಮಾಧಾನದ ಸಂಗತಿ.

ಬದುಕಿತು ಮರಿಜಿಂಕೆ
ಪ್ರವಾಹಕ್ಕೆ ಸಿಲುಕಿದ್ದ ಮರಿಜಿಂಕೆಯೊಂದನ್ನು ರಕ್ಷಿಸಿ ರಕ್ಷಣಾ ಶಿಬಿರಕ್ಕೆ ತಲುಪಿಸುತ್ತಿರುವ ವ್ಯಕ್ತಿ. ತಮ್ಮ ಬದುಕೇ ಚಿಂತಾಜನಕ ಎಂಬಂತಾಗಿದ್ದರೂ, ಜನರು ವನ್ಯ ಜೀವಿಗಳ ರಕ್ಷಣೆಗೆ ಆದ್ಯತೆ ನೀಡುತ್ತಿರುವುದು ಮತ್ತೊಂದು ಸಂತಸದ ಸಂಗತಿ.

ಮನಕಲಕುವ ದೃಶ್ಯ
ಕಾಜಿರಂಗದ ಪ್ರಮುಖ ಆಕರ್ಷಣೆಯಾದ ಖಡ್ಗಮೃಗವೊಂದು ನೀರಿನಲ್ಲಿ ಬಹುಪಾಲು ಮುಳುಗಿದ ಮನಕಲಕುವ ದೃಶ್ಯ ಕಾಣಿಸಿದ್ದು ಹೀಗೆ.

ಹಳ್ಳಿಯೇ ನೀರುಪಾಲು
ಕಾಜಿರಂಗ ಬಳಿಯ ಹಳ್ಳಿಯೊಂದು ಸಂಪೂರ್ಣ ನೀರು ಪಾಲಾಗಿದ್ದು, ಪ್ರಕೃತಿಯ ಮುನಿಸಿನೆದುರು ಹುಲು ಮಾನವರೆಲ್ಲ ಎಷ್ಟು ಅಸಹಾಯಕರು ಎಂಬುದಕ್ಕೆ ಇದಕ್ಕಿಂದ ಬೇರೆ ನಿದರ್ಶನ ಬೇಕಾ?












Click it and Unblock the Notifications