ಲಸಿಕೆ ಅಭಿಯಾನದಿಂದ ಹೊರಗುಳಿದರೇ ನಿರ್ಗತಿಕರು; ಆರೋಗ್ಯ ಸಚಿವಾಲಯದ ಸ್ಪಷ್ಟನೆ
ನವದೆಹಲಿ, ಜೂನ್ 23: ಕೆಲವು ಕಾರಣಗಳಿಂದಾಗಿ ದೇಶದಲ್ಲಿ ನಿರ್ಗತಿಕರನ್ನು, ದುರ್ಬಲರನ್ನು ಲಸಿಕಾ ಕಾರ್ಯಕ್ರಮದಿಂದ ಹೊರಗುಳಿಸಲಾಗಿದೆ. ಲಸಿಕಾ ಅಭಿಯಾನದ ನೋಂದಣಿ ಸಾಧ್ಯವಾಗದೇ ಅವರನ್ನು ಕೈಬಿಡಲಾಗಿದೆ ಎಂಬ ಮಾಧ್ಯಮ ವರದಿಗಳ ಆರೋಪವನ್ನು ತಳ್ಳಿಹಾಕಿರುವ ಆರೋಗ್ಯ ಸಚಿವಾಲಯ ಇದಕ್ಕೆ ಸ್ಪಷ್ಟನೆ ನೀಡಿದೆ. ನಿರ್ಗತಿಕರಿಗೆ ಲಸಿಕೆ ನೀಡಲಾಗುತ್ತಿಲ್ಲ ಎನ್ನುವುದು ಆಧಾರರಹಿತ ವರದಿ ಎಂದು ಹೇಳಿದೆ.
ಡಿಜಿಟಲ್ ರೂಪದಲ್ಲಿ ನೋಂದಣಿ ಮಾಡಿಕೊಳ್ಳುವುದು, ಇಂಗ್ಲಿಷ್ ಭಾಷೆ ಹಾಗೂ ಕಂಪ್ಯೂಟರ್, ಮೊಬೈಲ್ ಈ ಅಂಶಗಳಿಂದಾಗಿ ಲಸಿಕೆ ಹಾಕಿಸಿಕೊಳ್ಳುವುದರಿಂದ ನಿರ್ಗತಿಕರು ವಂಚಿತರಾಗುತ್ತಿದ್ದಾರೆ. ಅವರು ಲಸಿಕಾ ಅಭಿಯಾನದಿಂದ ಹೊರಗುಳಿದಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.
ಈ ವರದಿ ತಳ್ಳಿಹಾಕಿರುವ ಕೇಂದ್ರ, ಈಗ ಲಸಿಕೆ ಪಡೆದುಕೊಳ್ಳಲು ಕೋವಿನ್ನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಲ್ಲ ಎಂಬುದನ್ನು ಗಮನಿಸಬೇಕು ಎಂದಿದೆ.

"ಮೊಬೈಲ್ ಫೋನ್ ಮಾಹಿತಿ ಕೊರೊನಾ ಲಸಿಕೆ ಪಡೆದುಕೊಳ್ಳಲು ಪೂರ್ವಾಪೇಕ್ಷಿತವಲ್ಲ. ಈಗ ವಿಳಾಸ ಪುರಾವೆ ಕೂಡ ಕಡ್ಡಾಯವಲ್ಲ. ಬಳಕೆದಾರರ ಅನುಕೂಲಕ್ಕಾಗಿ ಕೋವಿನ್ನಲ್ಲಿ ಹಿಂದಿ, ಮಲಯಾಳಂ, ತಮಿಳು, ತೆಲುಗು, ಕನ್ನಡ, ಮರಾಠಿ, ಗುಜರಾತ್, ಒಡಿಯಾ, ಬಂಗಾಳಿ, ಅಸ್ಸಾಮಿ, ಪಂಜಾಬಿ ಹಾಗೂ ಇಂಗ್ಲಿಷ್, 12 ಭಾಷೆಗಳಲ್ಲಿ ಮಾಹಿತಿ ನೀಡಲಾಗುತ್ತಿದೆ. ಇವೆಲ್ಲವೂ ಎಲ್ಲರಿಗೂ ಅನುಕೂಲವಾಗಲೆಂದು" ಎಂದಿದೆ.
ಕೋವಿನ್ ವೇದಿಕೆ ಒಂದು ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯಾಗಿದ್ದು, ದೇಶದ ಕುಗ್ರಾಮಗಳಿಗೆ, ದುರ್ಬಲರಾಗಿರುವವರಿಗೆ ಲಸಿಕೆ ನೀಡಲು ಅಗತ್ಯವಿರುವ ಎಲ್ಲಾ ಅಂಶಗಳು, ಮಾಹಿತಿಗಳನ್ನು ಹೊಂದಿದೆ ಎಂದು ಸಚಿವಾಲಯ ವಿವರಿಸಿದೆ.












Click it and Unblock the Notifications