'ಅಹ್ಮದ್ ಪಟೇಲ್ ಗೆ 25 ಲಕ್ಷ ಲಂಚ ಸಂದಾಯ', ಇಡಿಗೆ ಸಿಕ್ಕಿದೆ ಸಾಕ್ಷಿ!
ಬೆಂಗಳೂರು, ಆಗಸ್ಟ್ 05: ಹಿರಿಯ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ, ಸೋನಿಯಾ ಗಾಂಧಿ ಕುಟುಂಬದ ಆಪ್ತ ಅಹ್ಮದ್ ಪಟೇಲ್ ಅವರಿಗೆ ಲಂಚದ ರೂಪದಲ್ಲಿ 25 ಲಕ್ಷ ರು ಸಂದಾಯವಾಗಿದೆ ಎಂದು ದೆಹಲಿ ನ್ಯಾಯಲಯಕ್ಕೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ.
ಅಹ್ಮದ್ ಪಟೇಲ್ ಅವರ ಆಪ್ತರ ಮನೆಗಳ ಮೇಳೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು 2017ರ ನವೆಂಬರ್ 30ರಂದು ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ರಂಜಿತ್ ಮಲೀಕ್ ಅವರ ವಿಚಾರಣೆ ನಡೆಸಲು ಕಸ್ಟಡಿಗೆ ನೀಡಬೇಕೆಂದು ಕೋರ್ಟಿಗೆ ಅರ್ಜಿ ಸಲ್ಲಿಸುವಾಗ ಈ ವಿಷಯ ತಿಳಿಸಿದ್ದಾರೆ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ರಂಜಿತ್ ರನ್ನು ಬಂಧಿಸಲಾಗಿದೆ. ಸ್ಟರ್ಲಿಂಗ್ ಬಯೋಟೆಕ್, ಗುಜರಾತಿನ ಫಾರ್ಮಾಸ್ಯೂಟಿಕಲ್ ಸಂಸ್ಥೆಯು ನಕಲಿ ದಾಖಲೆ ನೀಡಿ 5,000 ಕೋಟಿ ರು ಸಾಲ ಪಡೆದ ಪ್ರಕರಣ ಇದಾಗಿದೆ.

ರಂಜಿತ್ ಅವರಿಗೆ ರಾಕೇಶ್ ಚಂದ್ರ ಎಂಬಾತ ನೆರವಾಗಿದ್ದು, ಅಹ್ಮದ್ ಪಟೇಲ್ ಅವರ 23, ಮದರ್ ಕ್ರೆಸೆಂಟ್ ರಸ್ತೆಯಲ್ಲಿರುವ ಅವರ ಅಧಿಕೃತ ನಿವಾಸಕ್ಕೆ 25 ಲಕ್ಷ ರು ಸಂದಾಯ ಮಾಡಿದ್ದಾಗಿ ಹೇಳಿಕೆ ನೀಡಿದ್ದಾನೆ.
ಆದರೆ, ಈ ಆರೋಪವನ್ನು ಅಹ್ಮದ್ ಪಟೇಲ್ ತಳ್ಳಿ ಹಾಕಿದ್ದಾರೆ. ಅಗಸ್ಟಾ ವೆಸ್ಟ್ ಲ್ಯಾಂಡ್ ಕೇಸಿನಂತೆ ಇದು ಕೂಡಾ ಆಧಾರ ರಹಿತ ಆರೋಪ ಎಂದಿದ್ದಾರೆ. ಆದರೆ, ಆರೋಪಿಯ ಹೇಳಿಕೆಯಲ್ಲದೆ, ಆರ್ಥಿಕ ವ್ಯವಹಾರ ಕುರಿತಂತೆ ನಡೆದಿರುವ ಟೆಲಿಫೋನ್ ಮಾತುಕತೆಯ ಸಾಕ್ಷ್ಯವನ್ನು ಕೂಡಾ ಜಾರಿ ನಿರ್ದೇಶನಾಲಯ ಕಲೆ ಹಾಕಿದೆ.
2011ರಲ್ಲಿ ಈ ಫಾರ್ಮಾಸ್ಯೂಟಿಕಲ್ ಕಂಪನಿ ಮೇಲೆ ದಾಳಿ ಮಾಡಿದಾಗ ಸಿಕ್ಕ ಡೈರಿಯಲ್ಲಿ ಹಲವಾರು ರಾಜಕೀಯ ನಾಯಕರು, ಸರ್ಕಾರಿ ಅಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಆಧಿಕಾರಿಗಳ ಹೆಸರು ಕಂಡು ಬಂದಿತ್ತು. ಸಿಬಿಐ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದೆ.
2017ರಲ್ಲಿ ಪಟೇಲ್ ಆಪ್ತ ಸಂಜೀವ್ ಮಹಾಜನ್, ಚೇತನ್ ಜಯಂತಿಲಾಲ್ ಸಂದೇಸಾರಾ, ದೀಪ್ತಿ ಚೇತನ್ ಸಂದೇಸಾರಾ, ನಿತಿನ್ ಜಯಂತಿಲಾಲ್ ಮತ್ತು ಇತರ ಉದ್ಯಮಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಲಾಗಿತ್ತು. ಸಂದೇಸಾರಾ ಗ್ರೂಪ್ ಗೆ ಸಂಬಂಧಿಸಿದ ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿಗಳನ್ನು ನಡೆಸಲಾಗಿತ್ತು. ಸರಿ ಸುಮಾರು 4,700 ಕೋಟಿ ರು ಜಪ್ತಿ ಮಾಡಲಾಗಿತ್ತು.












Click it and Unblock the Notifications