ಅತ್ಯಾಚಾರವಾದ ಗುರುತು ತೋರಿಸೆಂದು ಬಾಲಕಿ ಬಟ್ಟೆ ಬಿಚ್ಚಿಸಿದ ಪೊಲೀಸರು!
ಹರ್ಯಾಣ ಡಿಜಿಪಿಗೆ ಘಟನೆಯ ಬಗ್ಗೆ ಕಟ್ಟುನಿಟ್ಟಿನ ತನಿಖೆ ನಡೆಸುವಂತೆ ನ್ಯಾಯಾಲಯ ಸೂಚಿಸಿದೆ. ಅದರ ಬೆನ್ನಲ್ಲೇ, ರಾಜ್ಯ ಸರ್ಕಾರವೂ ತನಿಖೆಗೆ ಆದೇಶಿಸಿದೆ.
ಚಂಡೀಗಢ, ಮೇ 2: ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ವಿಚಾರಣೆಗೊಳಪಡಿಸಿದ್ದ ಹರ್ಯಾಣ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಮುಂದೆ ವಿವಸ್ತ್ರಳಾಗಿ ಅತ್ಯಾಚಾರವಾದ ಕುರುಹುಗಳನ್ನು ತೋರಿಸು ಎಂದು ಹೇಳಿ, ಆಕೆಯನ್ನು ವಿವಸ್ತ್ರಳಾಗಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯು ಕೈತಾಳ್ ನಗರ ಠಾಣೆಯಲ್ಲಿ ನಡೆದಿದೆ.
ಈ ಬಗ್ಗೆ ನ್ಯಾಯಾಲಯಕ್ಕೆ ದೂರು ಸಲ್ಲಿಸಿರುವ 14 ವರ್ಷದ ಆ ಸಂತ್ರಸ್ಥೆಯ ಅಳಲನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ ಹರ್ಯಾಣ ಡಿಜಿಪಿಗೆ ಘಟನೆಯ ಬಗ್ಗೆ ಕಟ್ಟುನಿಟ್ಟಿನ ತನಿಖೆ ನಡೆಸುವಂತೆ ಸೂಚಿಸಿದೆ. ಅದರ ಬೆನ್ನಲ್ಲೇ, ರಾಜ್ಯ ಸರ್ಕಾರವೂ ತನಿಖೆಗೆ ಆದೇಶಿಸಿದೆ.

ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿಯನ್ನು ವಿಚಾರಣೆಗೊಳಿಸಲು ಆಕೆಯನ್ನು ಕೈತಾಳ ನಗರ ಠಾಣೆಗೆ ಕರೆಸಿಕೊಂಡ ಪೊಲೀಸರು, ಆಕೆಯನ್ನು ವಿವಸ್ತ್ರಳಾವಂತೆ ಹೇಳಿದ್ದಲ್ಲದೆ, ಅತ್ಯಾಚಾರವಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಆಕೆಯ ಖಾಸಗಿ ಭಾಗಗಳನ್ನು ಮುಟ್ಟಿದ್ದಾರೆಂದು ಬಾಲಕಿಯ ಪರವಾಗಿ ಆಕೆಯ ತಂದೆ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ಈ ದೂರಿನ ವಿಚಾರಣೆ ಕೈಗೊತ್ತಿಕೊಂಡ ನ್ಯಾಯಪೀಠ, ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತಲ್ಲದೆ, ಪ್ರಕರಣದ ತನಿಖೆ ನಡೆಸುವಂತೆ ಡಿಜಿಪಿಗೆ ಆದೇಶಿಸಿತು.












Click it and Unblock the Notifications