ಜಾಟ್ - ಬಿಜೆಪಿ ಸಂಘರ್ಷಕ್ಕೆ ಬೆಚ್ಚಿದ ಹರ್ಯಾಣ, ಇಂಟರ್ನೆಟ್ ಸ್ಥಗಿತ
ಚಂಡೀಗಢ, ನವೆಂಬರ್ 25: ಹರ್ಯಾಣ ಸರಕಾರ ಶುಕ್ರವಾರದಿಂದ ಆರಂಭಿಸಿ ಮೂರು ದಿನಗಳ ಕಾಲ ಅಂದರೆ ಭಾನುವಾರ ಮಧ್ಯರಾತ್ರಿವರೆಗೆ 13 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಯಶ್ಪಾಲ್ ಮಲಿಕ್ ನೇತೃತ್ವದ 'ಆಲ್ ಇಂಡಿಯಾ ಜಾಟ್ ಆರಕ್ಷಣ್ ಸಂಘರ್ಷ ಸಮಿತಿ' ಭಾನುವಾರ ರೋಹ್ಟಕ್ ಜಿಲ್ಲೆಯ ಜಾಸ್ಸಿಯಾ ಗ್ರಾಮದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದೆ. ಅದೇ ದಿನ ಚಿತ್ರಕೂಟ ಬಿಜೆಪಿ ಸಂಸದ ರಾಜ್ ಕುಮಾರ್ ಸೈನಿ ಜಿಂದ್ ನಲ್ಲಿ ಮತ್ತೊಂದು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.

ರಾಜ್ ಕುಮಾರ್ ಸೈನಿ ಸಮಾವೇಶವನ್ನು ಜಾಟರು ವಿರೋಧಿಸಿದ್ದು ಈಗಾಗಲೇ ಪೊಲೀಸರ ಜತೆ ಸಂಘರ್ಷಕ್ಕೆ ಇಳಿದಿದ್ದಾರೆ. ಸದ್ಯ ಜಿಂದ್ ನಲ್ಲಿ ಜಿಂದ್-ಚಂಡೀಗಢ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿದ್ದಾರೆ.
ಒಟ್ಟಾರೆ ಹರ್ಯಾಣ ಬೂದಿ ಮುಚ್ಚಿದ ಕೆಂಡದಂತಾಗಿದ್ದು ಪರಿಸ್ಥಿತಿ ಯಾವಾಗ ಕೈ ಮೀರಲಿದೆಯೋ ಗೊತ್ತಿಲ್ಲ. ಈ ಹಿನ್ನಲೆಯಲ್ಲಿ ಗೃಹ ಕಾರ್ಯದರ್ಶಿ ಎಸ್.ಎಸ್ ಪ್ರಸಾದ್ ಹೇಳಿಕೆ ನೀಡಿದ್ದು, "ಮೊಬೈಲ್ ಕರೆಗಳನ್ನು ಹೊರತುಪಡಿಸಿ ಇಂಟರ್ನೆಟ್ ಸೇವೆಯನ್ನು 13 ಜಿಲ್ಲೆಗಳಲ್ಲಿ ಸ್ಥಗಿತಗೊಳಿಸಲಾಗಿದೆ," ಎಂದು ಹೇಳಿದ್ದಾರೆ.
ಬಾಬಾ ಗುರ್ಮೀತ್ ರಾಮ್ ರಹೀಂ ಸಿಂಗ್ ಬಂಧನದ ವೇಳೆ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಹರ್ಯಾಣ ಈಗ ಮತ್ತೊಂದು ಹಿಂಸಾಚಾರಕ್ಕೆ ಗುರಿಯಾಗುವ ಸಾಧ್ಯತೆ ಇದೆ.












Click it and Unblock the Notifications