ಹಾರ್ದಿಕ್ ಪಟೇಲ್ ವಿರುದ್ಧ ದೇಶದ್ರೋಹದ ಆರೋಪ!
ಅಹಮದಾಬಾದ್, ಅ.19: ಆನಂದಿಬೇನ್ ಅವರ ಸರ್ಕಾರವನ್ನು ಅಲುಗಾಡಿಸುತ್ತಿರುವ 22 ವರ್ಷ ವಯಸ್ಸಿನ ಹಾರ್ದಿಕ್ ಪಟೇಲ್ ವಿರುದ್ಧ ದೇಶದ್ರೋಹದ ಆರೋಪ ಹೊರೆಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸೂರತ್ ಪೊಲೀಸರು ಎಫ್ ಐಆರ್ ಹಾಕಿದ್ದಾರೆ.
ಪಟೇಲ್ ಸಮುದಾಯಕ್ಕೆ ಒಬಿಸಿ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವವರ ಮುಂದಾಳತ್ವ ವಹಿಸಿಕೊಂಡಿರುವ ಹಾರ್ದಿಕ್ ಅವರು ಭಾನುವಾರದಂದು ರಾಜ್ ಕೋಟ್ ನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಭಾರತ- ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್ ಪಂದ್ಯಕ್ಕೆ ಅಡ್ಡಿ ಪಡಿಸಲು ಮುಂದಾದಾಗ ಹಾರ್ದಿಕ್ ಅವರನ್ನು ಬಂಧಿಸಲಾಗಿತ್ತು.[ಗುಜರಾತಿನ ಪಟೇಲರಿಗೆ ಮೀಸಲಾತಿ ಏಕೆ ಸಿಗುತ್ತಿಲ್ಲ?]

ಹಾರ್ದಿಕ್ ಪಟೇಲ್ ವಿರುದ್ಧ ಈಗ ದೇಶದ್ರೋಹ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ ಹೊರೆಸಲಾಗಿದೆ. ಪಟೇಲ್ ಸಮುದಾಯದ ಯುವಕರ ಮನಸ್ಸು ಕದಡಿದ್ದಾರೆ ಎನ್ನಲಾಗಿದೆ. [ಹಾರ್ದಿಕ್ ಪಟೇಲ್ ಯಾರು?]
ಗುಜರಾತ್ನ ಜಾಮ್ಗರ ಮತ್ತು ಮೊರ್ಬಿಯಲ್ಲಿ ನಡೆದ ಘಟನೆಯ ಬಳಿಕ ಹಾರ್ದಿಕ್ ಪಟೇಲ್ ಕೆಲ ದಿನಗಳ ಕಾಲ ತಲೆಮರೆಸಿಕೊಂಡು ಓಡಾಡುತ್ತಿದ್ದರು ಎನ್ನಲಾಗಿತ್ತು. ಅದರೆ, ರಾಜ್ ಕೋಟ್ ನಲ್ಲಿ ತನ್ನ ಬೆಂಬಲಿಗರೊಂದಿಗೆ ಪ್ರತ್ಯಕ್ಷರಾದ ಹಾರ್ದಿಕ್ ಅವರು ರಾಷ್ಟ್ರೀಯ ಧ್ವಜವನ್ನು ಹಿಡಿದು ಕಾರಿನಿಂದ ಕೆಳಗೆ ಇಳಿಯಲು ಯತ್ನಿಸಿದಾಗ ಅವರ ಪಾದಕ್ಕೆ ತ್ರಿವರ್ಣ ಧ್ವಜ ಸಿಕ್ಕಿಕೊಂಡಿದ್ದನ್ನು ಪೊಲೀಸರು ಗಮನಿಸಿದ್ದಾರೆ. [ಮೀಸಲಾತಿ ಅಗ್ಗಿಷ್ಟಿಕೆಯಲ್ಲಿ ಬೇಯುತ್ತಿರುವ ಗುಜರಾತ್ ]
ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದ ಆರೋಪದ ಮೇಲೆ ದೇಶದ್ರೋಹದ ಆರೋಪ ಹೊರೆಸಿ ಪ್ರಕರಣ ದಾಖಲಿಸಲಾಗಿದೆ ಎಂದು ರಾಜ್ ಕೋಟ್ ನ ಜಿಲ್ಲಾ ಎಸ್ಪಿ ಗಗನ್ ದೀಪ್ ಗಂಭೀರ್ ಹೇಳಿದ್ದಾರೆ.
ಪಟೇಲ್ ಸಮುದಾಯಕ್ಕೆ ಸೇರಿದವರಾದ ಮುಖ್ಯಮಂತ್ರಿ ಆನಂದಿಬೇನ್ ಪಟೇಲ್ ಅವರು ಪ್ರತಿಭಟನೆಗೆ ಜಗ್ಗಿಲ್ಲ. 1992ರ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ಯಾವುದೇ ರಾಜ್ಯವು ಶೇ.50ರಷ್ಟು ಮೀಸಲಾತಿ ನೀಡಲು ಅವಕಾಶವಿದೆ. ರಾಜ್ಯದಲ್ಲಿ ಒಬಿಸಿ ಶೇ.27, ಎಸ್ಟಿ-15 ಹಾಗೂ ಎಸ್ಸಿ -7 ಮೀಸಲಾತಿ ಹೊಂದಿದ್ದು, ಹೀಗಾಗಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಮೂಲಕ ಪ್ರಕಟಣೆ ಹೊರಡಿಸಲಾಗಿದೆ.











Click it and Unblock the Notifications