Israel Attacks: ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿ: ಪ್ರಧಾನಿ ಮೋದಿಗೆ ಕರೆ ಮಾಡಿದ ನೆತನ್ಯಾಹು ಹೇಳಿದ್ದೇನು?
ಹಮಾಸ್ ಉಗ್ರರ ದಾಳಿಯನ್ನು ಖಂಡಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಬರೆದಿರುವ ಪ್ರಧಾನಿ ಮೋದಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಕರೆಯನ್ನು ಉಲ್ಲೇಖಿಸಿದ್ದಾರೆ. ಜೊತೆಗೆ ಭಾರತದ ಜನರು ಇಸ್ರೇಲ್ನೊಂದಿಗೆ ದೃಢವಾಗಿ ನಿಂತಿದ್ದಾರೆ ಎಂದು ಭರವಸೆ ನೀಡಿದ್ದಾರೆ.
ಹಮಾಸ್ ಉಗ್ರರ ಭೀಕರ ದಾಳಿಗೆ ಎಚ್ಚರಿಕೆ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಸ್ರೇಲ್ ಈ ಯುದ್ಧವನ್ನು ಪ್ರಾರಂಭಿಸಲಿಲ್ಲ. ಆದರೆ ಮುಗಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಶನಿವಾರ ಮುಂಜಾನೆ ಹಮಾಸ್ ಉಗ್ರರು ನಡೆಸಿದ ಅಚ್ಚರಿಯ ದಾಳಿಯಿಂದ ಇಸ್ರೇಲ್ ಇರುವರೆಗೆ 700ಕ್ಕೂ ಹೆಚ್ಚು ನಾಗರಿಕರು ಹಾಗೂ ಯೋಧರನ್ನು ಕಳೆದುಕೊಂಡಿದೆ. ಮೃತರಲ್ಲಿ ವಿದೇಶಿಗರು ಕೂಡ ಸಾವನ್ನಪ್ಪಿದವರಲ್ಲಿ ಇದ್ದಾರೆ. ಸುಮಾರು 2300 ಮಂದಿ ಗಾಯಗೊಂಡಿದ್ದಾರೆ.

ಹಮಾಸ್ ಉಗ್ರರ ವಿರುದ್ಧ ವಾಗ್ದಾಳಿ ನಡೆಸಿದ ನೆತನ್ಯಾಹು, ಈ ಹೇಯ ಕೃತ್ಯಕ್ಕೆ ಅವರು ತಕ್ಕ ಬೆಲೆ ತೆರಬೇಕಾಗಲಿದೆ ಮತ್ತು ಇದನ್ನು ಅವರು ಸುದೀರ್ಘ ಕಾಲ ನೆನಪಿಟ್ಟುಕೊಳ್ಳಬೇಕಾಗಲಿದೆ ಎಂದಿದ್ದಾರೆ.
I thank Prime Minister @netanyahu for his phone call and providing an update on the ongoing situation. People of India stand firmly with Israel in this difficult hour. India strongly and unequivocally condemns terrorism in all its forms and manifestations.
— Narendra Modi (@narendramodi) October 10, 2023
ಇಸ್ರೇಲ್ ಪ್ರಧಾನಿಯವರ ದೂರವಾಣಿ ಕರೆಯಲ್ಲಿ ನಡೆದ ಸಂಭಾಷಣೆಯ ಬಗ್ಗೆ ಎಕ್ಸ್ನಲ್ಲಿನ ಸಂದೇಶದಲ್ಲಿ ವಿವರಿಸಿದ ಮೋದಿ ಅವರು, "ಪ್ರಧಾನಿ ನೆತನ್ಯಾಹು ಅವರ ದೂರವಾಣಿ ಕರೆಗಾಗಿ ಮತ್ತು ನಡೆಯುತ್ತಿರುವ ಪರಿಸ್ಥಿತಿಯ ಕುರಿತು ಮಾಹಿತಿ ಒದಗಿಸಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಈ ಸಂಕಷ್ಟದ ಸಮಯದಲ್ಲಿ ಭಾರತದ ಜನರು ಇಸ್ರೇಲ್ ಜೊತೆ ದೃಢವಾಗಿ ನಿಂತಿದ್ದಾರೆ. ಭಾರತವು ಹಮಾಸ್ ಉಗ್ರರ ದಾಳಿಯನ್ನು ಬಲವಾಗಿ ಮತ್ತು ನಿಸ್ಸಂದಿಗ್ಧವಾಗಿ ಖಂಡಿಸುತ್ತದೆ" ಎಂದು ಪ್ರಧಾನಿ ಮೋದಿ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಶನಿವಾರ ಇಸ್ರೇಲಿ ನಾಗರಿಕರ ಮೇಲೆ ಹಮಾಸ್ ಉಗ್ರರ ದಾಳಿಯನ್ನು ಖಂಡಿಸಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ.
ಇಸ್ರೇಲ್ ವಾಯುಪಡೆಯಿಂದ ಪ್ರತಿಯಾಗಿ ಗಾಜಾ ಮೇಲೆ ದಾಳಿ
ಇಸ್ರೇಲ್ ಮಂಗಳವಾರ ಡೌನ್ಟೌನ್ ಗಾಜಾ ಸಿಟಿಯ ಮೇಲೆ ಸರಣಿ ಬಾಂಬ್ ದಾಳಿ ಮಾಡಿದೆ. ಇಸ್ರೇಲ್ನ ಪಡೆಗಳು ದಾಳಿ ಬಳಿಕ ತನ್ನ ದಕ್ಷಿಣ ಮತ್ತು ಗಡಿಯ ಮೇಲೆ ನಿಯಂತ್ರಣವನ್ನು ಮರಳಿ ಪಡೆದಿರುವುದಾಗಿ ಹೇಳಿಕೊಂಡಿವೆ. ಇಸ್ರೇಲ್ ಸೇನೆಯು ದಾಳಿ ಬಳಿಕ ಪ್ರದೇಶದಲ್ಲಿ 1,500 ಹಮಾಸ್ ಭಯೋತ್ಪಾದಕರ ಶವಗಳನ್ನು ಪತ್ತೆ ಮಾಡಿದೆ ಎಂದು ಹೇಳಿಕೊಂಡಿದೆ. ಸುಮಾರು 360,000 ಸೇನೆಯನ್ನು ಗಡಿ ಕಾಯಲು ಸಜ್ಜುಗೊಳಿಸಲಾಗಿದೆ ಎಂದು ಇಸ್ರೇಲಿ ಮಾಧ್ಯಮಗಳಲ್ಲಿನ ವರದಿಗಳು ಹೇಳಿವೆ.
ಇಸ್ರೇಲಿ ಸೇನೆಯು ಗಾಜಾ ನಗರದ ರಿಮಲ್ ನೆರೆಹೊರೆಯ ಜನನಿಬಿಡ ಪ್ರದೇಶದಲ್ಲಿ ಹಲವಾರು ಬಾರಿ ವೈಮಾನಿಕ ದಾಳಿ ನಡೆಸಿದೆ ಎಂದು ಹೇಳಿಕೊಂಡಿದೆ. ಈ ಉನ್ನತ ಮಟ್ಟದ ಜಿಲ್ಲೆಯು ಹಮಾಸ್, ವಿಶ್ವವಿದ್ಯಾನಿಲಯಗಳು, ಮಾಧ್ಯಮ ಸಂಸ್ಥೆಗಳು ಮತ್ತು ಮಾನವೀಯ ನೆರವು ಸಂಸ್ಥೆಗಳ ಪ್ರಧಾನ ಕಛೇರಿಯಿಂದ ನಿಯಂತ್ರಿಸಲ್ಪಡುವ ಸರ್ಕಾರಿ ಸಚಿವಾಲಯಗಳನ್ನು ಹೊಂದಿದೆ.
ಪ್ರತಿಕಾರಕ್ಕಾಗಿ ಇಸ್ರೇಲ್ ಸೇನೆಯ ಸಜ್ಜು
ಹಮಾಸ್ ವಿರುದ್ಧದ ಪ್ರತೀಕಾರದ ಭಾಗವಾಗಿ ಇಸ್ರೇಲ್ 3,00,000 ಸೈನಿಕರನ್ನು ಸಜ್ಜುಗೊಳಿಸಿದೆ. 1973 ರ ಯೋಮ್ ಕಿಪ್ಪೂರ್ ಯುದ್ಧದ ನಂತರ ಇಸ್ರೇಲ್ 400,000 ಸೈನಿಕರನ್ನು ಕರೆಸಿಕೊಂಡಿದ್ದು ಇದು ಅತಿದೊಡ್ಡ ಸೇನಾ ಸಜ್ಜುಗೊಳಿಸುವಿಕೆಯಾಗಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
"ಇಸ್ರೇಲ್ ಯುದ್ಧದ ಸ್ಥಿತಿಯಲ್ಲಿದೆ. ನಾವು ಈ ಯುದ್ಧವನ್ನು ಬಯಸಲಿಲ್ಲ. ಇದು ಅತ್ಯಂತ ಕ್ರೂರ ಮತ್ತು ಘೋರ ರೀತಿಯಲ್ಲಿ ನಮ್ಮ ಮೇಲೆ ಬಲವಂತವಾಗಿ ಹೇರಲ್ಪಟ್ಟಿದೆ. ಇಸ್ರೇಲ್ ಈ ಯುದ್ಧವನ್ನು ಪ್ರಾರಂಭಿಸದಿದ್ದರೂ, ಅದನ್ನು ಮುಗಿಸುತ್ತದೆ ಎಂದು ಮಂಗಳವಾರ ನೆತನ್ಯಾಹು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.












Click it and Unblock the Notifications