Gyanvapi Mosque Survey: ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಆಗಸ್ಟ್ 3ರ ವರೆಗೂ ತಡೆ ನೀಡಿದ ಅಲಹಾಬಾದ್ ಹೈಕೋರ್ಟ್
ಅಲಹಾಬಾದ್, ಜುಲೈ 27: ಜ್ಞಾನವಾಪಿ ಮಸೀದಿ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್ಐ) ವಾರಣಾಸಿ ಜಿಲ್ಲಾ ನ್ಯಾಯಾಲಯ ಸೂಚಿಸಿತ್ತು. ಈ ಆದೇಶದ ವಿರುದ್ಧದ ಅರ್ಜಿಯ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ಗುರುವಾರ ಕಾಯ್ದಿರಿಸಿದೆ.
ಸಮೀಕ್ಷೆ ಮೇಲಿನ ತಡೆಯಾಜ್ಞೆ ಆಗಸ್ಟ್ 3 ರ ವರೆಗೆ ಮುಂದುವರಿಯಲಿದೆ. ಇದೇ ದಿನದಂದು ಜಿಲ್ಲಾ ನ್ಯಾಯಾಲಯದ ಆದೇಶದ ಕುರಿತು ಅಲಹಾಬಾದ್ ನ್ಯಾಯಾಲವು ತೀರ್ಪು ನೀಡಲಿದೆ.

ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮನವಿಯ ಮೇರೆಗೆ ಅಲಹಾಬಾದ್ ನ್ಯಾಯಾಲಯ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಿಟಿಂಕರ್ ದಿವಾಕರ್ ಅವರು ಇಂದು ವಿಚಾರಣೆಯನ್ನು ಪುನರಾರಂಭಿಸಿದ್ದಾರೆ.
ಈ ವೇಳೆ, ಮಸೀದಿ ಸಮಿತಿಯ ಪರ ವಕೀಲ ಎಸ್ಎಫ್ಎ ನಖ್ವಿ ಅವರು ತಮ್ಮ ವಾದವನ್ನು ಮಂಡಿಸಿದ್ದಾರೆ. ಐವರು ಫಿರ್ಯಾದಿದಾರರು ಸುಪ್ರೀಂ ಕೋರ್ಟ್ನಲ್ಲಿ ದಾವೆ ಹೂಡಿದ್ದಾರೆ. ಮಸೀದಿ ನಿರ್ವಹಣೆಗೆ ಸಂಬಂಧಿಸಿದ ದಾವೆಯು ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಉಳಿದಿದೆ ಎಂದು ಹೇಳಿದರು.
ಜ್ಞಾನವಾಪಿ ಮಸೀದಿಯನ್ನು ದೇವಾಲಯದ ಮೇಲೆ ಕಟ್ಟಲಾಗಿದೆ ಎಂಬ ಆರೋಪವಿದೆ. ಈ ವಿಚಾರವಾಗಿ ದೇಶದ ವಿವಿಧ ಭಾಗಗಳ ಜನರು ಪ್ರತ್ಯೇಕ ಮೊಕದ್ದಮೆಗಳನ್ನು ಹೂಡಿದ್ದಾರೆ. ಇದರ ಬದಲು ದೇವಾಲಯದ ಟ್ರಸ್ಟ್ ಅಥವಾ ಉಸ್ತುವಾರಿಗಳು ಮೊಕದ್ದಮೆಯನ್ನು ಹೂಡಿಲ್ಲ. ಇದು ಹಲವು ಗೊಂದಲಗಳಿವೆ ಎಡೆ ಮಾಡಿಕೊಟ್ಟಿದೆ ಎಂದು ನಖ್ವಿ ಹೇಳಿದ್ದಾರೆ.

ಮಸೀದಿ ಆವರಣವನ್ನು ತಲುಪಿದಾಗ ಎಎಸ್ಐ ಹೊಂದಿದ್ದ ವಿವಿಧ ಅಗೆಯುವ ಸಲಕರಣೆಗಳ ಫೋಟೊಗಳನ್ನು ನಾವು ಲಗತ್ತಿಸಿದ್ದೇವೆ. ಅವರು ಸ್ಥಳವನ್ನು ಅಗೆಯುವ ಉದ್ದೇಶವನ್ನು ಹೊಂದಿದ್ದರು ಎಂಬುದನ್ನು ಇದು ತೋರಿಸುತ್ತದೆ ಎಂದು ನಖ್ವಿ ನ್ಯಾಯಾಲಯಕ್ಕೆ ತಿಳಿಸಿದರು.
ಬುಧವಾರ ನಡೆದ ವಿಚಾರಣೆ ವೇಳೆ ಹಿರಿಯ ಎಎಸ್ಐ ಅಧಿಕಾರಿಯೊಬ್ಬರು ನ್ಯಾಯಾಲಯದಲ್ಲಿ ಹಾಜರಾಗಿದ್ದರು. ಎಎಸ್ಐ ತಂಡವು ಯಾವುದೇ ರೀತಿಯಲ್ಲಿ ಮಸೀದಿಯ ರಚನೆಯನ್ನು ನಾಶಮಾಡಲು ಮುಂದಾಗಿಲ್ಲ ಎಂದು ಅಧಿಕಾರಿ ನ್ಯಾಯಾಲಯಕ್ಕೆ ತಿಳಿಸಿದರು.
ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು ಮಸೀದಿಯ ಎಎಸ್ಐ ಸಮೀಕ್ಷೆಗೆ ಸಲ್ಲಿಸಿದ ಅರ್ಜಿಯನ್ನು ಓದಿದರು. ಪ್ರಸ್ತುತ ಕಟ್ಟಡದ ಗೋಡೆಗಳ ಮೇಲೆ ಹಿಂದೂ ಧರ್ಮದ ವಿವಿಧ ಚಿಹ್ನೆಗಳು ಇವೆ. ಮಸೀದಿಯ ಒಳಗೆ ಮತ್ತು ಪಶ್ಚಿಮ ಗೋಡೆಯ ಮೇಲೆ ಹಲವಾರು ಹಿಂದೂ ಕಲಾಕೃತಿಗಳಿವೆ ಎಂದು ಜೈನ್ ಹೇಳಿದರು.

ಮೊಘಲ್ ಚಕ್ರವರ್ತಿ ಔರಂಗಜೇಬ್ ದೇವಾಲಯವನ್ನು ಕೆಡವಿ ಹೊಸದಾಗಿ ಮಸೀದಿಯನ್ನು ನಿರ್ಮಿಸಿಲ್ಲ. ಹಳೆಯ ದೇವಾಲಯದ ಅವಶೇಷಗಳ ಮೇಲೆ ಮಸೀದಿಯನ್ನು ಕಟ್ಟಿದ್ದಾರೆ ಎಂದು ತಿಳಿಸಿದರು.
ಎಎಸ್ಐನ ಹೆಚ್ಚುವರಿ ನಿರ್ದೇಶಕ ಅಲೋಕ್ ತ್ರಿಪಾಠಿ ಅವರು ಸರ್ವೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ.












Click it and Unblock the Notifications