ಗುಜರಾತ್ನಲ್ಲಿ ಗೆಲ್ಲುವುದು ನಾವೇ: ಅರವಿಂದ್ ಕೇಜ್ರಿವಾಲ್ ವಿಶ್ವಾಸ
ನವದೆಹಲಿ, ನವೆಂಬರ್ 3: ಗುಜರಾತ್ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಎರಡು ಹಂತದಲ್ಲಿ ಮತದಾನ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಡಿಸೆಂಬರ್ 1 ಹಾಗೂ 5ರಂದು ಮತದಾನ ನಡೆಯಲಿದೆ. ಡಿಸೆಂಬರ್ 8ರಂದು ಫಲಿತಾಂಶ ಹೊರಬರಲಿದೆ.
ಚುನಾವಣಾ ದಿನಾಂಕಗಳು ಘೋಷಣೆಯಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಗುಜರಾತ್ನಲ್ಲಿ ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುಕೇಶ್ ಚಂದ್ರಶೇಖರ್ ಲಂಚ ಆರೋಪ ತಳ್ಳಿಹಾಕಿದ ಅರವಿಂದ ಕೇಜ್ರಿವಾಲ್
ಈ ವಿಚಾರವಾಗಿ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು, 'ತಮ್ಮ ಪಕ್ಷವು ಖಂಡಿತವಾಗಿಯೂ ಅಧಿಕಾರಕ್ಕೆ ಬರಲಿದೆ' ಎಂದು ಹೇಳಿದ್ದಾರೆ.
ಗುಜರಾತ್ ಜನತೆಗೆ ಪ್ರೀತಿಯ ಸಂದೇಶ ಕಳುಹಿಸಿರುವ ಅವರು, 'ನಾನು ನಿಮ್ಮ ಸಹೋದರ, ನಿಮ್ಮ ಕುಟುಂಬದ ಸದಸ್ಯ. ನನಗೆ ಒಂದು ಅವಕಾಶ ನೀಡಿ. ನಿಮಗೆ ಉಚಿತ ವಿದ್ಯುತ್ ನೀಡುತ್ತೇನೆ. ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸುತ್ತೇನೆ. ನಿಮ್ಮನ್ನು ಅಯೋಧ್ಯೆಯ ರಾಮಮಂದಿರಕ್ಕೆ ಕರೆದೊಯ್ಯುತ್ತೇನೆ' ಎಂದು ಕೇಜ್ರಿವಾಲ್ ಘೋಷಿಸಿದ್ದಾರೆ.
ದೆಹಲಿ ಹಾಗೂ ಪಂಜಾಬ್ನಲ್ಲಿ ಸ್ಪಷ್ಟ ಬಹುಮತದಿಂದ ಅಧಿಕಾರ ಗದ್ದುಗೆ ಹಿಡಿದಿರುವ ಆಮ್ ಆದ್ಮಿ ಪಕ್ಷವು ಗುಜರಾತ್ನಲ್ಲಿ ಗೆಲ್ಲುವ ಭರವಸೆ ವ್ಯಕ್ತಪಡಿಸುತ್ತಿದೆ.
ಸತತ 27 ವರ್ಷಗಳ ಕಾಲ ಆಡಳಿತ ನಡೆಸಿರುವ ಬಿಜೆಪಿಗೆ ಗುಜರಾತ್ನಲ್ಲಿ ಈ ಬಾರಿ ಎಎಪಿ ಎದುರಾಳಿ ಆಗಿದೆ.
ಬಹುಮತದೊಂದಿಗೆ ಅಧಿಕಾರ ಹಿಡಿಯುವ ಭರವಸೆ
ಗುಜರಾತ್ ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ಎಎಪಿಯಲ್ಲಿ ಉತ್ಸಾಹ ಇಮ್ಮಡಿಗೊಂಡಿದೆ. ಈ ವಿಚಾರವಾಗಿ 'ಎನ್ಡಿಟಿವಿ' ಜೊತೆ ಮಾತನಾಡಿರುವ ಎಎಪಿ ಮುಖ್ಯ ವಕ್ತಾರ ಸೌರಭ್ ಭಾರದ್ವಾಜ್, 'ನಾವು ಈಗ 90-95 ಸ್ಥಾನಗಳನ್ನು (182 ರಲ್ಲಿ) ಗೆಲ್ಲುತ್ತಿದ್ದೇವೆ. ಇದೇ ರೀತಿ ಜನಬೆಂಬಲ ಮುಂದುವರಿದರೆ, ನಾವು 140 ರಿಂದ 150 ಸ್ಥಾನಗಳನ್ನು ಗೆಲ್ಲುತ್ತೇವೆ' ಎಂದು ಹೇಳಿದ್ದಾರೆ.
ಎಎಪಿ ಪಕ್ಷವು ಈ ಬಾರಿ ಗುಜರಾತ್ನ ಎಲ್ಲಾ 182 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ. 2017 ರಲ್ಲಿ ಸುಮಾರು 30 ಸ್ಥಾನಗಳಲ್ಲಿ ಎಎಪಿ ಸ್ಪರ್ಧಿಸಿದ್ದರೂ ಯಾವುದೇ ಪರಿಣಾಮ ಬೀರಿರಲಿಲ್ಲ.
ಗುಜರಾತ್ ಸೇತುವೆ ದುರಂತದಿಂದ ಬಿಜೆಪಿಗೆ ಹಿನ್ನೆಡೆ
ಗುಜರಾತ್ ಮೊರ್ಬಿಯಲ್ಲಿ ಭಾನುವಾರ ತೂಗು ಸೇತುವೆಯೊಂದು ಕುಸಿದ ಪರಿಣಾಮ 135 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶತಮಾನಗಳಷ್ಟು ಹಳೆಯದಾದ ಸೇತುವೆಯ ದುರಸ್ತಿ ಹಾಗೂ ನಿರ್ವಹಣೆಯ ಗುತ್ತಿಗೆ ಪಡೆದಿದ್ದ ಕಂಪನಿಯು ಅರ್ಹತಾ ಪ್ರಮಾಣ ಪತ್ರವನ್ನೇ ಪಡೆದಿರಲಿಲ್ಲ ಎಂಬುದು ತಿಳಿದುಬಂದಿದೆ.
ಈ ವಿಚಾರವನ್ನೇ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳಲು ಎಎಪಿ ಮುಂದಾಗಿದೆ. 'ಗುಜರಾತ್ನಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ಭ್ರಷ್ಟಾಚಾರ ಮಿತಿಮೀರಿದೆ. ಎಲ್ಲದರಲ್ಲೂ ಕಮಿಷನ್ ಪಡೆಯಲಾಗುತ್ತಿದೆ. ಇದಕ್ಕೆ ಮೊರ್ಬಿ ಸೇತುವೆ ದುರಂತವೇ ನಿದರ್ಶನ' ಎಎಪಿ ವಾಗ್ದಾಳಿ ನಡೆಸಿದೆ. ಇದೇ ವೇಳೆ, ಶಾಲೆ, ಶಿಕ್ಷಣ, ರಸ್ತೆ, ವಿದ್ಯುತ್, ಕುಡಿಯುವ ನೀರು ಹಾಗೂ ಇತರ ಮೂಲಭೂತ ಸೌಕರ್ಯಗಳ ಬಗ್ಗೆ ಎಎಪಿ ನಾಯಕರು ಮಾತನಾಡುತ್ತಿದ್ದಾರೆ. ಇದು ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ನಗರ ಕೇಂದ್ರಿತ ಮತದಾರರ ಮೇಲೆ ಎಎಪಿ ಕಣ್ಣು
ಬಿಜೆಪಿ ನೆಚ್ಚಿಕೊಂಡಿರುವ ನಗರ ಭಾಗದ ಮತದಾರರ ಮೇಲೆ ಎಎಪಿ ಕಣ್ಣಿಟ್ಟಿದೆ. ಗುಜರಾತ್ನ ನಗರ ಭಾಗದ ಜನರು ಬಿಜೆಪಿ ಜೊತೆಗಿರುವುದು ಸ್ಪಷ್ಟವಾಗಿತ್ತು. ಆದರೆ, ಈಗ ಎಎಪಿ ಕಡೆಗೆ ನಗರ ಭಾಗದ ಜನರು ವಾಲುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. ಗುಜರಾತ್ನ ಹಳ್ಳಿಗಳಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಅದು ಮೌನ ಪ್ರಚಾರದಲ್ಲಿ ತೊಡಗಿಕೊಂಡಿದೆ. ಆದರೆ, ಎಎಪಿ ಮಾತ್ರ ಬಿಜೆಪಿಯ ವೋಟ್ ಬ್ಯಾಂಕ್ ಮೇಲೆ ದಾಳಿ ಮಾಡುವ ಯತ್ನ ನಡೆಸಿದೆ. ಪ್ರಧಾನಿ ಮೋದಿ ಅವರ ತವರು ರಾಜ್ಯವಾದ ಗುಜರಾತ್ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಮೋದಿ ವರ್ಚಸ್ಸು ಹಾಗೂ ಹಿಂದುತ್ವವನ್ನು ನೆಚ್ಚಿಕೊಂಡಿರುವ ಬಿಜೆಪಿಯು ಎಎಪಿ ವಿರುದ್ಧ ಹೋರಾಡಲೇ ಬೇಕಿರುವ ಅನಿವಾರ್ಯತೆ ಸೃಷ್ಟಿಯಾಗಿದೆ.