ಪಾಟೀದಾರ್ ಸಂಘಟನೆಗೆ ಹಾರ್ದಿಕ್ ಪಟೇಲ್ ಆಪ್ತ ರಾಜೀನಾಮೆ
ಅಹಮದಾಬಾದ್, ಡಿಸೆಂಬರ್ 8: ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಒಂದು ದಿನ ಬಾಕಿ ಇರುವಾಗ ಮಿಂಚಿನ ಬೆಳವಣಿಗೆಯಲ್ಲಿ 'ಪಾಸ್'ಗೆ ದಿನೇಶ್ ಬಂಭಾನಿಯಾ ರಾಜೀನಾಮೆ ನೀಡಿದ್ದಾರೆ.
ಹಾರ್ದಿಕ್ ಪಟೇಲ್ ಆಪ್ತ ದಿನೇಶ್ ಬಂಭಾನಿಯಾ ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿಯಿಂದ ಹೊರ ಬಂದಿದ್ದಾರೆ.
ಈ ಮೂಲಕ ಪಾಸ್ ತೊರೆದ ನಾಲ್ಕನೇ ನಾಯಕರಾಗಿ ದಿನೇಶ್ ಬಂಭಾನಿಯಾ ಗುರುತಿಸಿಕೊಂಡಿದ್ದಾರೆ. ದಿನೇಶ್ ಬಂಭಾನಿಯಾ ಹಾರ್ದಿಕ್ ಪಟೇಲ್ ಗೆ ತೀರಾ ಆಪ್ತರಾಗಿದ್ದರು. ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಜತೆ ಮೀಸಲಾತಿಗೆ ಸಂಬಂಧಿಸಿದಂತೆ ನಡೆದ ಸಭೆಗಳಲ್ಲಿ ಅವರು ಪಾಸ್ ತಂಡವನ್ನು ಪ್ರತಿನಿಧಿಸಿದ್ದರು.
ಇದೀಗ ಅವರೇ ಹಾರ್ದಿಕ್ ಪಟೇಲ್ ರಿಂದ ದೂರ ಸರಿದು 'ಪಾಸ್' ಸಂಘಟನೆಗೆ ರಾಜೀನಾಮೆ ನೋಡಿ ಹೊರ ನಡೆದಿದ್ದಾರೆ.
ಕಳೆದ ತಿಂಗಳು ಹಾರ್ದಿಕ್ ಪಟೇಲ್ ಆಪ್ತರಾದ ಅಮರೀಶ್ ಮತ್ತು ಕೇತನ್ ಪಟೇಲ್ ಪಾಸ್ ತೊರೆದು ಬಿಜೆಪಿ ಸೇರಿದ್ದರು.
ಇವರಲ್ಲಿ ಕೇತನ್ ಪಟೇಲ್ ಅವರಂತೂ 2015ರ ಮೀಸಲಾತಿ ಹೋರಾಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದರು. ಹಾರ್ದಿಕ್ ಪಟೇಲ್ ಜತೆ ಅವರೂ ದೇಶದ್ರೋಹದ ಪ್ರಕರಣವನ್ನು ಎದುರಿಸುತ್ತಿದ್ದರು.
ಇನ್ನೋರ್ವ ಹಾರ್ದಿಕ್ ಪಟೇಲ್ ಆಪ್ತ ಚಿರಾಗ್ ಪಟೇಲ್ ಕೂಡಾ ಪಾಸ್ ತೊರೆದು ಬಿಜೆಪಿ ಸೇರಿರುವುದನ್ನು ಇಲ್ಲಿ ಸ್ಮರಿಸಬಹುದು.