ಗುಜರಾತ್ ಸೇತುವೆ ದುರಂತ: ಗುತ್ತಿಗೆದಾರರು ಅರ್ಹತೆ ಹೊಂದಿಲ್ಲ ಎಂದ ಪೊಲೀಸರು
ಅಹಮದಾಬಾದ್, ನವೆಂಬರ್ 2: ಗುಜರಾತ್ನ ಮೊರ್ಬಿಯಲ್ಲಿ ಭಾನುವಾರ ನಡೆದ ತೂಗು ಸೇತುವೆ ದುರಂತದಲ್ಲಿ 135ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊರ್ಬಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ಗಾಯಾಳುಗಳಿಗೆ ಸಾಂತ್ವನ ಹೇಳಿದ್ದಾರೆ. ಆದರೆ, ಮೊರ್ಬಿ ದುರಂತ ಗುಜರಾತ್ ಸರ್ಕಾರ ಹಾಗೂ ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದ ನಡೆದಿದೆ ಎಂಬ ಶಂಕೆಗಳು ದಟ್ಟವಾಗುತ್ತಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿಸಿರುವ ಒಂಬತ್ತು ಆರೋಪಿಗಳಲ್ಲಿ ನಾಲ್ವರನ್ನು ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಮತ್ತು ಉಳಿದ ಐವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಗುತ್ತಿಗೆದಾರರು ಅರ್ಹ ಎಂಜಿನಿಯರ್ಗಳಲ್ಲ
ಸೇತುವೆ ದುರಸ್ತಿ ಮಾಡಿರುವ ಒರೆವಾ ಕಂಪನಿಯ ಗುತ್ತಿಗೆದಾರರು 'ಅರ್ಹ ಎಂಜಿನಿಯರ್' ಗಳಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ತೂಗು ಸೇತುವೆ ದುರಸ್ತಿ ಹೆಸರಿನಲ್ಲಿ ಮರದ ನೆಲಹಾಸುಗಳನ್ನು ಅಲ್ಯುಮಿನಿಯಂ ಶೀಟ್ಗಳಿಂದ ಬದಲಾಯಿಸಲಾಗಿದೆ. ಆದರೆ, ಸೇತುವೆಯ ಕೇಬಲ್ಗಳನ್ನು ಹಾಗೆಯೇ ಬಿಡಲಾಗಿದೆ ಎಂದು ಪೊಲೀಸರು ಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ಕಳೆದ 2007ರಲ್ಲಿಯೇ ಸೇತುವೆ ನವೀಕರಣಗೊಂಡಿದೆ. ಸೇತುವೆಯ ಕೇಬಲ್ಗಳಲ್ಲಿಗೆ ಗುತ್ತಿಗೆದಾರರು ಎಣ್ಣೆ, ಗ್ರೀಸ್ ಕೂಡ ಬಳಿದಿಲ್ಲವೆಂದು ಹೇಳಿದ್ದಾರೆ.
ಸೇತುವೆ ಮರದ ನೆಲಹಾಸನ್ನು ಅಲ್ಯೂಮಿನಿಯಂ ಶೀಟ್ನಿಂದ ಬದಲಾಯಿಸಿದ್ದಾರೆ. ಈ ಕಾರಣ, ಸೇತುವೆಯು ಅಧಿಕ ತೂಕದಿಂದ ಮರಿದುಹೋಗಿದೆ ಎಂದು ಶಂಕಿಸಲಾಗಿದೆ. ಈ ಕುರಿತು ಸರ್ಕಾರಿ ಎಂಜಿನಿಯರ್ ಎಚ್.ಎಸ್. ಪಾಂಚಾಲ್ ನ್ಯಾಯಾಲಯದಲ್ಲಿ ವಾದಿಸಿದ್ದಾರೆ.
ದುರಸ್ತಿ ಕಾರ್ಯಗೊಂಡಿದ್ದ ಒರೆವಾ ಗ್ರೂಪ್ನ ಇಬ್ಬರು ಮ್ಯಾನೇಜರ್ಗಳು ಹಾಗೂ ಸಂಸ್ಥೆಯ ಇಬ್ಬರು ಗುತ್ತಿಗೆದಾರರನ್ನು ಹತ್ತು ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಲು ಪಾಂಚಾಲ್ ಕೋರಿದ್ದಾರೆ.
ನ್ಯಾಯಾಲಯದಲ್ಲಿ ಹೇಳಿಕೆ ನೀಡಿರುವ ತನಿಖಾಧಿಕಾರಿ, ಪೊಲೀಸ್ ಉಪ ಅಧೀಕ್ಷಕ, ಪಿ.ಎ.ಝಲಾ, 'ಆರೋಪಿತ ಇಬ್ಬರು ಗುತ್ತಿಗೆದಾರರು ಅರ್ಹ ಎಂಜಿನಿಯರ್ಗಳಲ್ಲ' ಎಂದು ಹೇಳಿದ್ದಾರೆ.
ಯಾವುದೇ ಅನಾಹುತ ಸಂಭವಿಸಿದಾಗ ಜೀವರಕ್ಷಕರ ವ್ಯವಸ್ಥೆ ಇರಬೇಕು. ಅದನ್ನು ಒರೆವ ಕಂಪನಿ ವ್ಯವಸ್ಥೆ ಮಾಡಿರಲಿಲ್ಲ. ಇದು ಕಂಪನಿಯ ತೀವ್ರ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದಿದ್ದಾರೆ.
ಬಂಧಿತರಾಗಿರುವ ಆರೋಪಿಗಳಿಬ್ಬರು ವೆಲ್ಡಿಂಗ್ ಹಾಗೂ ಎಲೆಕ್ಟ್ರಿಕಲ್ ಕೆಲಸದಲ್ಲಿ ಮಾತ್ರ ತೊಡಗಿಸಿಕೊಂಡಿದ್ದಾರೆ. ಅವರಿಗೂ ಸೇತುವೆ ದುರಸ್ತಿ ಅರ್ಹತಾ ಪತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಆರೋಪಿಗಳ ಪರ ವಕೀಲರು ವಾದಿಸಿದ್ದಾರೆ.
ಬಂಧಿತವಾಗಿರುವ ಆರೋಪಿಗಳು ಗಡಿಯಾರ ತಯಾರಿಸುವ ಕಂಪನಿಯೊಂದಿಗೆ ಕೆಲಸ ಮಾಡುತ್ತಾರೆ. ಅವರಿಗೆ ಸೇತುವೆಯ ದುರಸ್ತಿ ಕೆಲಸದ ಬಗ್ಗೆ ಯಾವುದೇ ಜ್ಞಾನವಿಲ್ಲ ಎಂದು ಹೇಳಿದ್ದಾರೆ.
ಈ ಎಲ್ಲ ವಾದಗಳನ್ನು ಆಲಿಸಿದ ನ್ಯಾಯಾಲಯವು ನಾಲ್ವರು ಆರೋಪಿಗಳನ್ನು ನವೆಂಬರ್ 5ರ ವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಇಬ್ಬರು ಟಿಕೆಟ್ ಕ್ಲರ್ಕ್ಗಳು ಹಾಗೂ ಮೂವರು ಭದ್ರತಾ ಸಿಬ್ಬಂದಿ ಸೇರಿದಂತೆ ಐವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮನ್ಸುಖ್ ಟೋಪಿಯಾ, ಮಹಾದೇವ್ ಸೋಲಂಕಿ, ಅಲ್ಪೇಶ್ ಗೋಹಿಲ್, ದಿಲೀಪ್ ಗೋಹಿಲ್ ಮತ್ತು ಮುಖೇಶ್ ಚೌಹಾಣ್ ನ್ಯಾಯಾಂಗ ಬಂಧನಕ್ಕೆ ಒಳಗಾದ ಆರೋಪಿಗಳು.
ಪ್ರಕಾಶ್ ಪಾರ್ಮರ್, ದೇವಾಂಗ್ ಪಾರ್ಮರ್, ದೀಪಕ್ ಪರೇಖ್ ಹಾಗೂ ದಿನೇಶ್ ದಾವೆ ಪೊಲೀಸ್ ಕಸ್ಟಡಿಯಲ್ಲಿರುವ ನಾಲ್ವರು ಆರೋಪಿಗಳು.
ಗಡಿಯಾರ ತಯಾರಿಸುವ ಕಂಪನಿ
ಒರೆವಾ ಕಂಪನಿಯು ಗೋಡೆ ಗಡಿಯಾರಗಳನ್ನು ತಯಾರಿಸಲು ಹೆಸರುವಾಸಿಯಾಗಿದೆ. ಇಬೈಕ್ ತಯಾರಿಕೆ ಹಾಅಗೂ ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳು ವ್ಯಾಪಾರದಲ್ಲಿ ತೊಡಗಿಕೊಂಡಿದೆ. ಬ್ರಿಟಿಷರ ಕಾಲದ ಮೊರ್ಬಿ ಸೇತುವೆಯ ದುರಸ್ತಿ ಕಾರ್ಯ ಹಾಗೂ ನಿರ್ವಹಣೆಯನ್ನು ಗುತ್ತಿಗೆ ಪಡೆದುಕೊಂಡಿತ್ತು. ಈ ಗುತ್ತಿಗೆಗೆ ಯಾವುದೇ ಟೆಂಡರ್ ಪ್ರಕ್ರಿಯೆ ನಡೆದಿರಲಿಲ್ಲ. ಯಾವುದೇ ಟೆಂಡರ್ ಪ್ರಕ್ರಿಯೆ ಇಲ್ಲದೆಯೇ ಮೊರ್ಬಿ ಪುರಸಭೆಯು ಕಂಪನಿಗೆ ಗುತ್ತಿಗೆ ನೀಡಿದೆ ಎಂದು ಹೇಳಲಾಗುತ್ತದೆ.