ನನ್ನ ಬಂಧನ ರಾಜಕೀಯ ಪಿತೂರಿ ಎಂದ ಪಿಎಂಒ ಅಧಿಕಾರಿಯಂತೆ ಪೋಸ್ ಕೊಟ್ಟ Gujarat ವಂಚಕ
ಚಾಲಕಿ ಗುಜರಾತ್ ವಂಚಕ ಜಮ್ಮು ಮತ್ತು ಕಾಶ್ಮೀರದ ಭದ್ರತಾ ಸಿಬ್ಬಂದಿಯ ಭದ್ರತೆಯನ್ನು ಪಡೆದು ಸುತ್ತಾಡುವ ಫೋಟೋಗಳು ವೈರಲ್ ಆಗಿದ್ದು ಆತನ ಬಂಧನ ರಾಜಕೀಯ ಪಿತೂರಿ ಎಂದು ಆರೋಪಿ ಪರ ವಕೀಲ ರೆಹಾನ್ ಗೌಹರ್ ಆರೋಪಿಸಿದ್ದಾರೆ.
ಶ್ರೀನಗರ ಮಾರ್ಚ್ 18: ಪಿಎಂಒ ಅಧಿಕಾರಿಯಂತೆ ಪೋಸ್ ಕೊಟ್ಟ ಗುಜರಾತ್ ವಂಚಕ ಕಿರಣ್ ಭಾಯಿ ಪಟೇಲ್ ತಮ್ಮ ಮೇಲಿರುವ ಆರೋಪ ರಾಜಕೀಯ ಪಿತೂರಿ ಎಂದು ದೂರಿದ್ದಾರೆ.
ಪ್ರಧಾನಿ ಕಚೇರಿಯಲ್ಲಿ ಕಾರ್ಯತಂತ್ರ ಮತ್ತು ಪ್ರಚಾರಕ್ಕಾಗಿ ಹೆಚ್ಚುವರಿ ನಿರ್ದೇಶಕರಂತೆ ನಟಿಸುತ್ತಿದ್ದ ಪಟೇಲ್ ಅವರನ್ನು ಮಾರ್ಚ್ 2 ರಂದು ಬಂಧಿಸಲಾಯಿತು. ಆದರೆ ಅವರ ಬಂಧನವನ್ನು ಪೊಲೀಸರು ರಹಸ್ಯವಾಗಿಟ್ಟಿದ್ದರು. ಗುರುವಾರ ಮ್ಯಾಜಿಸ್ಟ್ರೇಟ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ನಂತರ ಅವರ ಬಂಧನದ ವಿವರಗಳು ಹೊರಬಂದಿವೆ.
ಇದೊಂದು ರಾಜಕೀಯ ಪಿತೂರಿ ಎಂದು ಪಟೇಲ್ ಪರ ವಕೀಲ ರೆಹಾನ್ ಗೌಹರ್ ಆರೋಪಿಸಿದ್ದಾರೆ. ಮಾತ್ರವಲ್ಲದೆ ಕಿರಣ್ ಪಟೇಲ್ ಅವರ ಜೊತೆಗಿದ್ದ ಇನ್ನೂ ಇಬ್ಬರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ ಎಂದು ವಕೀಲರು ವಾದಿಸಿದ್ದಾರೆ. "ಕಿರಣ್ ಜೊತೆ ಗುಜರಾತ್ನ ಇನ್ನೂ ಇಬ್ಬರು ವ್ಯಕ್ತಿಗಳು ಇದ್ದರು. ಪೊಲೀಸರು ಸೆಕ್ಷನ್ 164ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಅವರ ಹೇಳಿಕೆಯನ್ನು ದಾಖಲಿಸಿದ್ದಾರೆ. ಬಳಿಕ ಇಬ್ಬರನ್ನೂ ಪೊಲೀಸರು ಬಿಡುಗಡೆ ಮಾಡಿದ್ದಾರೆ" ಎಂದು ವಕೀಲರು ಹೇಳಿದರು.

ಗುಪ್ತಚರ ಅಧಿಕಾರಿಗಳಿಂದ ವಂಚಕನ ಬಂಧನ
ಬುದ್ಗಾಮ್ ಜಿಲ್ಲೆಗೆ ಅಧಿಕೃತ ಪ್ರವಾಸಕ್ಕೆ ತನ್ನೊಂದಿಗೆ ಬರಲು ಹಿರಿಯ ಅಧಿಕಾರಿಯನ್ನು ಕೇಳಿಕೊಂಡ ನಂತರ ಪಟೇಲ್ ಮೇಲೆ ಅನುಮಾನ ಬಂದಿತು ಎಂದು ಮೂಲಗಳು ಹೇಳುತ್ತವೆ. ಮೂಲಗಳ ಪ್ರಕಾರ, ಕಿರಣ್ ಉನ್ನತ ಸಿಐಡಿ ಅಧಿಕಾರಿಯನ್ನು ಸಂಪರ್ಕಿಸಿದ್ದಾರೆ. ಬಳಿಕ ಗುಪ್ತಚರ ಅಧಿಕಾರಿಗಳು ವಂಚಕನನ್ನು ಬಂಧಿಸಿದ್ದಾರೆ.
ದಕ್ಷಿಣ ಕಾಶ್ಮೀರದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ಐಎಎಸ್ ಅಧಿಕಾರಿಯೊಬ್ಬರು 'ಹಿರಿಯ ಪಿಎಂಒ ಅಧಿಕಾರಿ'ಯ (ವಂಚಕ ಕಿರಣ್ ಭಾಯಿ ಪಟೇಲ್) ಭೇಟಿಯ ಬಗ್ಗೆ ಪೊಲೀಸರ ಭದ್ರತಾ ವಿಭಾಗಕ್ಕೆ ಮಾಹಿತಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಭದ್ರತಾ ವಿಭಾಗದಿಂದ ಅವರಿಗೆ Z ಪ್ಲಸ್ ಭದ್ರತೆಯನ್ನು ನೀಡಲಾಯಿತು ಮತ್ತು ಅಕ್ಟೋಬರ್ನಿಂದ ನಾಲ್ಕು ಪ್ರವಾಸಗಳ ಸಮಯದಲ್ಲಿ ಅವರು ಭೇಟಿ ನೀಡಿದಲ್ಲೆಲ್ಲಾ ಸ್ಥಳೀಯ ಪೊಲೀಸರು ವಂಚಕ ಕಿರಣ್ ಭಾಯಿ ಪಟೇಲ್ ಜೊತೆಗೆ ಇರುತ್ತಾರೆ.
ಮಾತ್ರವಲ್ಲದೆ ವಂಚಕ ಕಿರಣ್ ಭಾಯ್ ಪಟೇಲ್ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದರು ಮತ್ತು ಗಡಿ ನಿಯಂತ್ರಣ ರೇಖೆಯ ಸಮೀಪವಿರುವ ಮುಂದಿನ ಪ್ರದೇಶಗಳಿಗೆ ಭೇಟಿ ನೀಡಿದರು ಈ ವೇಳೆ ತೆಗೆದ ಫೋಟೋಗಳನ್ನು ಪೋಸ್ಟ್ ಮಾಡಿದರು.

ಕಿರಣ್ ಭಾಯಿ ಪಟೇಲ್ ಯಾರು?
ಪಟೇಲ್ ಅವರು ಟ್ವಿಟರ್ನಲ್ಲಿ ಬಿಜೆಪಿ ಗುಜರಾತ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ಸಿನ್ಹ್ ವಘೇಲಾ ಸೇರಿದಂತೆ ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಅವರು ಕಾಶ್ಮೀರದಲ್ಲಿ ಅರೆಸೈನಿಕ ಗಾರ್ಡ್ಗಳೊಂದಿಗಿನ ಹಲವಾರು ವಿಡಿಯೊಗಳು ಮತ್ತು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಕೊನೆಯದು ಮಾರ್ಚ್ 2 ರಂದು ಪೋಸ್ಟ್ ಆಗಿದೆ.
ಅವರ ಟ್ವಿಟ್ಟರ್ ಬಯೋದಲ್ಲಿ ಅವರು ವರ್ಜೀನಿಯಾದ ಕಾಮನ್ವೆಲ್ತ್ ವಿಶ್ವವಿದ್ಯಾಲಯದಿಂದ ಪಿಎಚ್ಡಿ, ಐಐಎಂ ತಿರುಚ್ಚಿಯಿಂದ ಎಂಬಿಎ, ಹಾಗೆಯೇ ಕಂಪ್ಯೂಟರ್ ಸೈನ್ಸ್ನಲ್ಲಿ ಎಂಟೆಕ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ನಲ್ಲಿ ಬಿಇ ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಪಟೇಲ್ ತನ್ನನ್ನು "ಚಿಂತಕ, ತಂತ್ರಜ್ಞ, ವಿಶ್ಲೇಷಕ ಮತ್ತು ಪ್ರಚಾರ ನಿರ್ವಾಹಕ" ಎಂದು ಬರೆದಿದ್ದಾರೆ.

ನಕಲಿ ಪಿಎಂಒ ಅಧಿಕಾರಿ ಫೋಟೋ ಪೋಸ್
ಕಳೆದ ವರ್ಷ ಅಕ್ಟೋಬರ್ 27 ರಂದು ಕಣಿವೆಗೆ ಕಳ್ಳನ ಮೊದಲ ಭೇಟಿಯಾಗಿತ್ತು. ಆತ ತನ್ನ ಕುಟುಂಬದೊಂದಿಗೆ ತೆರಳಿದ್ದನು. ನಂತರದ ಭೇಟಿಗಳಲ್ಲಿ "PMO ತಂಡದ" ಇತರ ಸದಸ್ಯರು ಅವರೊಂದಿಗೆ ಸೇರಿಕೊಂಡರು. ವಂಚಕನಿಗೆ ಜಮ್ಮು ಮತ್ತು ಕಾಶ್ಮೀರ ಆಡಳಿತ ಮತ್ತು ಭದ್ರತಾ ರಚನೆಯ ಝಡ್-ಪ್ಲಸ್ ಭದ್ರತೆ, ಬುಲೆಟ್ ಪ್ರೂಫ್ ಮಹೀಂದ್ರಾ ಸ್ಕಾರ್ಪಿಯೊ ಎಸ್ಯುವಿ, ಪಂಚತಾರಾ ಹೋಟೆಲ್ನಲ್ಲಿ ಅಧಿಕೃತ ವಸತಿ ಮತ್ತು ಇನ್ನೂ ಹೆಚ್ಚಿನದನ್ನು ನೀಡಲಾಗಿತ್ತು.
ಕಿರಣ್ ಪಟೇಲ್ ಅವರು ಕಾಶ್ಮೀರಕ್ಕೆ ಭೇಟಿ ನೀಡಿದ ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅರೆಸೇನಾ ಪಡೆ ಮತ್ತು ಪೊಲೀಸರು ಬೆಂಗಾವಲಾಗಿ ಅವರು ವಿವಿಧ ಸ್ಥಳಗಳಿಗೆ ಪ್ರಯಾಣಿಸುವ ಹಲವು ವಿಡಿಯೋಗಳಿವೆ. ಅವರು ಅರೆಸೈನಿಕ ಸಿಬ್ಬಂದಿಯೊಂದಿಗೆ ಬುದ್ಗಾಮ್ನ ದೂಧಪತ್ರಿಯಲ್ಲಿ ಹಿಮದಲ್ಲಿ ನಡೆಯುತ್ತಿರುವುದು ಕಂಡುಬಂದಿದೆ. ಶ್ರೀನಗರದ ಲಾಲ್ ಚೌಕ್ನ ಗಡಿಯಾರ ಗೋಪುರದ ಮುಂದೆ ಅವರು ಫೋಟೋಗೆ ಪೋಸ್ ನೀಡುತ್ತಿದ್ದಾರೆ.

ಕಳ್ಳನನ್ನು ಪಿಎಂಒ ಅಧಿಕಾರಿ ಎಂದು ಪರಿಚಯಿಸಿದ ಐಎಎಸ್ ಅಧಿಕಾರಿ
ಗುಜರಾತ್ನಿಂದ ಹೆಚ್ಚಿನ ಪ್ರವಾಸಿಗರನ್ನು ಕರೆತರುವ ಮಾರ್ಗಗಳು ಮತ್ತು ದೂಧಪತ್ರಿಯನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡುವ ಬಗ್ಗೆ ಚರ್ಚಿಸಲು ಪಟೇಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಮೂಲಗಳ ಪ್ರಕಾರ ಗುಜರಾತ್ನ ಅಮಿತ್ ಹಿತೇಶ್ ಪಾಂಡಿಯಾ ಮತ್ತು ಜೇ ಸಿತಾಪರಾ ಮತ್ತು ರಾಜಸ್ಥಾನದ ತ್ರಿಲೋಕ್ ಸಿಂಗ್ ಅವರು ಶ್ರೀನಗರದ ಪಂಚತಾರಾ ಹೋಟೆಲ್ನಲ್ಲಿ ಪಟೇಲ್ ಅವರೊಂದಿಗೆ ಉಳಿದುಕೊಂಡಿದ್ದರು ಎಂದು ಮೂಲಗಳು ಹೇಳುತ್ತವೆ.
ಈ ಪ್ರಕರಣದಲ್ಲಿ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಒಬ್ಬ ಐಎಎಸ್ ಒಬ್ಬ ಕಳ್ಳನನ್ನು ಪಿಎಂಒ ಅಧಿಕಾರಿಯಾಗಿ ಪರಿಚಯಿಸಿದ್ದು ಮತ್ತು ಪೊಲೀಸ್ ಮತ್ತು ಇತರ ಅಧಿಕಾರಿಗಳ ಭದ್ರತಾ ವಿಭಾಗವು ಅಧಿಕೃತ ಪ್ರೋಟೋಕಾಲ್ ಮತ್ತು ಝಡ್ ಪ್ಲಸ್ ಭದ್ರತೆಯನ್ನು ಇಷ್ಟು ದೀರ್ಘ ಕಾಲದವರೆಗೆ ಅವರಿಗೆ ನೀಡಿರುವುದು ಕಳವಳಕಾರಿಯಾಗಿದೆ.
ಕಿರಣ್ ಭಾಯಿ ಪಟೇಲ್ ಮೇಲೆ ಗುಜರಾತ್ನಲ್ಲೂ ವಂಚನೆಯ ಆರೋಪಗಳಿದ್ದು ಗುಜರಾತ್ ಪೊಲೀಸರ ತಂಡವೂ ತನಿಖೆಯಲ್ಲಿ ತೊಡಗಿದೆ ಮತ್ತು ಪಟೇಲ್ ಅವರನ್ನು ವಿಚಾರಣೆಗೆ ಒಳಪಡಿಸಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications