ಗುಜರಾತ್: ಶಾಸಕರಿಗೆ ಬಿಜೆಪಿಯಿಂದ 10 ಕೋಟಿ ಆಫರ್ - ಕಾಂಗ್ರೆಸ್ ಆರೋಪ
ನವದೆಹಲಿ, ಜುಲೈ 28: ಗುಜರಾತ್ ನಲ್ಲಿ ಕಾಂಗ್ರೆಸ್ ಶಾಸಕರ ಕುದುರೆ ವ್ಯಾಪಾರಕ್ಕೆ ಕೋಟಿಗಟ್ಟಲೆ ದುಡ್ಡು ಸುರಿಯಲಾಗುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಗಂಭೀರ ಆರೋಪ ಮಾಡಿದ್ದಾರೆ.
ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು 6 ಶಾಸಕರು ಬಿಜೆಪಿ ಸೇರಿದ್ದು ಈ ಹಿನ್ನಲೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿರುವ ಅಭಿಷೇಕ್ ಮನು ಸಿಂಘ್ವಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಇದೇ ವೇಳೆ, 'ಗುಜರಾತ್ ಶಾಸಕ ಪುನಭಾಯಿ ಗಮಿತ್ ಗೆ ಬಿಜೆಪಿ 10 ಕೋಟಿ ರೂಪಾಯಿ ಆಫರ್ ನೀಡಿತ್ತು,' ಎಂದು ಸಿಂಘ್ವಿ ನೇರ ಆರೋಪ ಮಾಡಿದ್ದಾರೆ. "ಪಕ್ಷಾಂತರ ವಿರೋಧಿ ಕಾನೂನೇ ಸರ್ವೋಚ್ಚವಾದುದು. ಅಷ್ಟಲ್ಲದೆ ಸುಪ್ರಿಂ ಕೋರ್ಟ್ ಪದೇ ಪದೇ ಪಕ್ಷಾಂತರ ಸಾಂವಿಧಾನಿಕ ಅಪರಾಧ ಎಂದು ಹೇಳಿದೆ," ಎಂಬುದಾಗಿ ಸಿಂಘ್ವಿ ಹೇಳಿದ್ದಾರೆ.
ಆದರೆ, ಕಾಂಗ್ರೆಸ್ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಕಾಂಗ್ರೆಸ್ ಆರೋಪ ಸಂಪೂರ್ಣ ಸುಳ್ಳು, ಮತ್ತು ಹತಾಷೆಯಿಂದ ಕಾಂಗ್ರೆಸ್ ಹೀಗೆ ಮಾತನಾಡುತ್ತಿದೆ ಎಂದು ಹೇಳಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಶಾಸಕ ಶೈಲೇಶ್ ಪರ್ವಾರ್, "ತನ್ನ ಸೋಲನ್ನು ಮುಚ್ಚಿಕೊಳ್ಳಲು ಬಿಜೆಪಿ ಕಾಂಗ್ರೆಸ್ ಶಾಸಕರಿಗೆ ಹಣದ ಆಸೆ ತೋರಿಸಿ ಪೊಲೀಸರಿಂದ ಬೆದರಿಸಿ ರಾಜೀನಾಮೆ ಕೊಡಿಸುತ್ತಿದೆ," ಎಂದು ದೂರಿದ್ದಾರೆ.