ಗುಜರಾತ್ ಚುನಾವಣೆ: ರೈತರ ಸೆಳೆಯಲು 630 ಕೋಟಿ ರೂ. ಪ್ಯಾಕೇಜ್
ಅಹಮದಾಬಾದ್, ಅ.28: ಗುಜರಾತ್ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಬೆನ್ನಲ್ಲೇ ಬಿಜೆಪಿ ಸರ್ಕಾರ ಸಾಲು ಸಾಲು ಯೋಜನೆಗಳನ್ನು ಘೋಷಿಸುತ್ತಿದೆ. ಈ ಬಾರಿಯ ಮುಂಗಾರು ಮಳೆಯಿಂದಾಗಿ ನಷ್ಟ ಅನುಭವಿಸಿದ ರೈತರಿಗೆ ರಾಜ್ಯ ಸರ್ಕಾರ ಶುಕ್ರವಾರ 630.34 ಕೋಟಿ ರೂಪಾಯಿಯ ಪರಿಹಾರ ಪ್ಯಾಕೇಜ್ ಘೋಷಿಸಿದೆ. ಡಿಸೆಂಬರ್ನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯಿದೆ.
ಶುಕ್ರವಾರ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪರಿಹಾರ ಪ್ಯಾಕೇಜ್ ಅನ್ನು ಅಂಗೀಕರಿಸಲಾಗಿದೆ. 14 ಜಿಲ್ಲೆಗಳ 2,554 ಹಳ್ಳಿಗಳ ಎಂಟು ಲಕ್ಷ ರೈತರಿಗೆ ಈ ಪರಿಹಾರ ಪ್ಯಾಕೇಜ್ನಿಂದ ಪ್ರಯೋಜನವಾಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಛೋಟೌದೇಪುರ್, ನರ್ಮದಾ, ಪಂಚಮಹಲ್, ನವಸಾರಿ, ವಲ್ಸಾದ್, ಡ್ಯಾಂಗ್, ತಾಪಿ, ಸೂರತ್, ಕಚ್, ಜುನಾಗಢ್, ಮೋರ್ಬಿ, ಪೋರ್ ಬಂದರ್, ಆನಂದ್ ಮತ್ತು ಖೇಡಾ ಸೇರಿದಂತೆ 14 ಜಿಲ್ಲೆಗಳಲ್ಲಿ ಮುಂಗಾರು ಮಳೆಯಿಂದಾಗಿ ಉಂಟಾದ ನಷ್ಟದ ಮೌಲ್ಯಮಾಪನ ಸಮೀಕ್ಷೆ ನಡೆಸಿದ ನಂತರ ಪ್ಯಾಕೇಜ್ ಘೋಷಿಸಲಾಗಿದೆ.
ಹಿಂದಿನ ಖಾರಿಫ್ನಲ್ಲಿ ಅತಿವೃಷ್ಟಿಯಿಂದ ಬೆಳೆ ನಷ್ಟವು (ಬಾಳೆ ತೋಟವನ್ನು ಹೊರತುಪಡಿಸಿ) ಶೇಕಡಾ 33 ಕ್ಕಿಂತ ಹೆಚ್ಚಿದ್ದರೆ, ಪ್ಯಾಕೇಜ್ನ ಭಾಗವಾಗಿ ರೈತರಿಗೆ ಎರಡು ಹೆಕ್ಟೇರ್ಗಳ ಮಿತಿಯೊಂದಿಗೆ ಪ್ರತಿ ಹೆಕ್ಟೇರ್ಗೆ 6,800 ರೂಪಾಯಿ ಪರಿಹಾರವನ್ನು ನೀಡಲಾಗುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

"ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (ಎಸ್ಡಿಆರ್ಎಫ್) ಮತ್ತು ರಾಜ್ಯ ಬಜೆಟ್ನಿಂದ ರೈತರಿಗೆ ಪರಿಹಾರವನ್ನು ನೀಡಲಾಗುವುದು. ಬಾಳೆ ತೋಟದ ನಷ್ಟಕ್ಕೆ ಎರಡು ಹೆಕ್ಟೇರ್ಗಳ ಮಿತಿಯೊಂದಿಗೆ ಪ್ರತಿ ಹೆಕ್ಟೇರ್ಗೆ 30,000 ಪರಿಹಾರವನ್ನು ಘೋಷಿಸಲಾಗಿದೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶೇಕಡಾ 33 ಕ್ಕಿಂತ ಕಡಿಮೆ ಬೆಳೆ ನಷ್ಟವಾದರೂ ಕನಿಷ್ಠ ಪರಿಹಾರವನ್ನು 4 ಸಾವಿರಕ್ಕೆ ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಂತ್ರಸ್ತ ರೈತರು ತಮ್ಮ ಗ್ರಾಮಗಳಲ್ಲಿರುವ ಇ-ಗ್ರಾಂ ಕೇಂದ್ರಗಳ ಮೂಲಕ ಅಗತ್ಯವಿರುವ ಎಲ್ಲಾ ವಿವರಗಳು ಮತ್ತು ದಾಖಲೆಗಳೊಂದಿಗೆ ಆನ್ಲೈನ್ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ. ಅರ್ಜಿ ಸಲ್ಲಿಸಲು ರೈತರು ಯಾವುದೇ ಅರ್ಜಿ ಶುಲ್ಕ ಅಥವಾ ಬೇರೆ ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.
ಇನ್ನು, ಪ್ರಧಾನಮಂತ್ರಿ ನರೇಂದ್ರ ಮೋದಿ ತವರು ರಾಜ್ಯದಲ್ಲಿ ಟಾಟಾ ಮತ್ತು ಏರ್ಬಸ್ಗಳು ಮಿಲಿಟರಿಗಾಗಿ ಸಾರಿಗೆ ವಿಮಾನಗಳನ್ನು ಉತ್ಪಾದಿಸಲು 22,000 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಒಪ್ಪಂದ ಮಾಡಿಕೊಂಡಿವೆ.












Click it and Unblock the Notifications