ಗುಜರಾತ್ ಚುನಾವಣೆ: ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
ಅಹಮದಾಬಾದ್, ನ.17: ಗುಜರಾತ್ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಎರಡು ಹಂತದ ಗುಜರಾತ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕಾಂಗ್ರೆಸ್ 37 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಐವರು ಹಾಲಿ ಶಾಸಕರನ್ನು ಕೈಬಿಟ್ಟು ಇತರ ಏಳು ಮಂದಿಯನ್ನು ಉಳಿಸಿಕೊಂಡಿದೆ. ಇದರೊಂದಿಗೆ ತಾನು ಸ್ಪರ್ಧಿಸಲಿರುವ ಎಲ್ಲ ಅಭ್ಯರ್ಥಿಗಳ ಆಯ್ಕೆಯ ಕಸರತ್ತನ್ನು ಕಾಂಗ್ರೆಸ್ ಮುಗಿಸಿದೆ.
Gujarat Election 2022: ಬಿಜೆಪಿ, ಎಎಪಿ ನಡುವೆ ಜಟಾಪಟಿ- ಅಪಹರಣ ಆರೋಪ
ಕಾಂಗ್ರೆಸ್ ಪಕ್ಷವು ತಮ್ಮ ಚುನಾವಣಾ ಪೂರ್ವ ಮೈತ್ರಿಯ ಭಾಗವಾಗಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಕ್ಕೆ (NCP) ಉಮ್ರೇತ್, ನರೋಡಾ ಮತ್ತು ದೇವಗಢ್ ಬರಿಯಾ ಎಂಬ ಮೂರು ವಿಧಾನಸಭಾ ಸ್ಥಾನಗಳನ್ನು ಬಿಟ್ಟುಕೊಟ್ಟಿದೆ.
ಗುಜರಾತ್ನ ಎಲ್ಲಾ 182 ಕ್ಷೇತ್ರಗಳಿಗೆ ಡಿಸೆಂಬರ್ 1 ರಂದು 89 ಸ್ಥಾನಗಳಿಗೆ ಮತ್ತು ಡಿಸೆಂಬರ್ 5 ರಂದು 93 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.
ಏಳು ಮಂದಿ ಹಾಲಿ ಶಾಸಕರಿಗೆ ಕಾಂಗ್ರೆಸ್ ಟಿಕೆಟ್
ಅಂತಿಮ ಪಟ್ಟಿಯಲ್ಲಿ ಕಾಂಗ್ರೆಸ್, ಬೇಚರಾಜಿ ಕ್ಷೇತ್ರದ ಭಾರತ್ಜಿ ಠಾಕೋರ್, ಬಯಾದ್ ಕ್ಷೇತ್ರದ ಜಶುಭಾಯಿ ಪಟೇಲ್, ಧಂಧೂಕಾ ವಿಧಾನಸಭಾ ಕ್ಷೇತ್ರದ ರಾಜೇಶ್ ಗೊಹಿಲ್, ಪೆಟ್ಲಾಡ್ ಕ್ಷೇತ್ರದ ನಿರಂಜನ್ ಪಟೇಲ್ ಮತ್ತು ದಹೋಡ್ ವಿಧಾನಸಭಾ ಕ್ಷೇತ್ರದ ಶಾಸಕ ವಾಜಸಿಂಗ್ ಪನಾಡ ಅವರನ್ನು ಪಟ್ಟಿಯಿಂದ ಕೈಬಿಟ್ಟಿದೆ.
ಇತ್ತ, ಪಾಲನ್ಪುರ್ದಿಂದ ಮಹೇಶ್ ಪಟೇಲ್, ದೇವದಾರ್ನ ಶಿವ ಭೂರಿಯಾ, ವಿರಮ್ಗಮ್ನ ಲಖಾ ಭಾರವಾಡ್, ಥಾಸ್ರಾದ ಕಾಂತಿ ಪರ್ಮಾರ್, ಕಪದ್ವಾಂಜ್ ಕ್ಷೇತ್ರದ ಕಲಾಭಾಯ್ ದಾಭಿ, ಬಾಲಸಿನೋರ್ ಕ್ಷೇತ್ರದ ಅಜಿತ್ಸಿನ್ಹ್ ಚೌಹಾನ್ ಮತ್ತು ಪಾದ್ರಾ ವಿಧಾನಸಭಾ ಕ್ಷೇತ್ರದ ಜಶ್ಪಾಲ್ಸಿನ್ಹ ಪಾಧಿಯಾರ್ ಎಂಬ ಏಳು ಶಾಸಕರನ್ನು ಉಳಿಸಿಕೊಂಡಿದೆ.
ಕಾಂಗ್ರೆಸ್ ಬಿಟ್ಟು, ಬಿಜೆಪಿ, ಈಗ ಬಿಜೆಪಿ ಬಿಟ್ಟು ಕಾಂಗ್ರೆಸ್!
ಅಂತಿಮ ಪಟ್ಟಿಯಲ್ಲಿ ಬಯಾದ್ ಕ್ಷೇತ್ರಕ್ಕೆ ಕಾಂಗ್ರೆಸ್ ತನ್ನ ಮಾಜಿ ಶಾಸಕ ಮಹೇಂದ್ರಸಿಂಹ ವಘೇಲಾ ಅವರಿಗೆ ಟಿಕೆಟ್ ನೀಡಿದೆ.
ಮಾಜಿ ಮುಖ್ಯಮಂತ್ರಿ ಶಂಕರಸಿಂಹ ವಘೇಲಾ ಅವರ ಪುತ್ರ ಮಹೇಂದ್ರಸಿಂಹ ವಘೇಲಾ ಅವರು 2012 ರಲ್ಲಿ ಬಯಾದ್ನಿಂದ ಕಾಂಗ್ರೆಸ್ ಟಿಕೆಟ್ನಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಅವರು 2017 ರ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ಪಕ್ಷಾಂತರವಾಗಿದ್ದರು. ಆದರೆ ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಇತ್ತೀಚೆಗಷ್ಟೇ ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಸೇರಿದ್ದರು.
ಬಿಜೆಪಿ ಮಾಜಿ ಸಂಸದ ಪ್ರಭಾತ್ಸಿನ್ಹ ಚೌಹಾಣ್ಗೆ ಕಾಂಗ್ರೆಸ್ ಮಣೆ
ಪ್ರಸ್ತುತ ಬಿಜೆಪಿ ಪ್ರತಿನಿಧಿಸುವ ಪಂಚಮಹಲ್ ಜಿಲ್ಲೆಯ ಕಲೋಲ್ ಕ್ಷೇತ್ರಕ್ಕೆ, ಪಂಚಮಹಲ್ ಬಿಜೆಪಿ ಮಾಜಿ ಸಂಸದ ಪ್ರಭಾತ್ಸಿನ್ಹ ಚೌಹಾಣ್ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಪ್ರಭಾತ್ಸಿನ್ಹ ಚೌಹಾಣ್ ಅವರ ಸೊಸೆ ಪ್ರಸ್ತುತ ಇಲ್ಲಿ ಶಾಸಕೆರಾಗಿದ್ದಾರೆ. ಆದರೆ ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿ ಅವರನ್ನು ಮರುನಾಮಕರಣ ಮಾಡಿಲ್ಲ.
81 ವರ್ಷ ವಯಸ್ಸಿನ ಪ್ರಭಾತ್ಸಿನ್ಹ ಚೌಹಾಣ್ ಅವರು ಮುಂಬರುವ ಚುನಾವಣೆಯಲ್ಲಿ ಅತ್ಯಂತ ಹಿರಿಯ ಅಭ್ಯರ್ಥಿ. 2019 ರ ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ನಿರಾಕರಿಸಿದ ನಂತರ ಅವರು ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದರು.
ಬಿಜೆಪಿಯಿಂದ ಅಧಿಕಾರ ಪಡೆಯುವ ಸ್ಪರ್ಧೆಯಲ್ಲಿ ಕಾಂಗ್ರೆಸ್, ಆಪ್
ಗುಜರಾತ್ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಬಿಡುಗಡೆ ಮಾಡಿರುವ ತನ್ನ ಪ್ರಣಾಳಿಕೆಯಲ್ಲಿ ಗೃಹಿಣಿಯರು, ಯುವಕರು, ಶಿಕ್ಷಣ ಮತ್ತು ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಿದೆ.
ಕಾಂಗ್ರೆಸ್ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಪ್ರಣಾಳಿಕೆಯಲ್ಲಿ ಗೃಹಿಣಿಯರು, ಯುವಕರು ಮತ್ತು ಶಿಕ್ಷಣದಿಂದ ಆರೋಗ್ಯದವರೆಗೆ ಕಾಳಜಿ ವಹಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದರೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು. ಇದೇ ವೇಳೆ ಕೆಜಿಯಿಂದ ಪಿಜಿವರೆಗೆ ಉಚಿತವಾಗಿ ಶಿಕ್ಷಣ ನೀಡಲಾಗುವುದು ಎಂದು ಕಾಂಗ್ರೆಸ್ ಭರವಸೆ ನೀಡಿದೆ.
ಇನ್ನು, ಎರಡು ದಶಕಗಳಿಗೂ ಹೆಚ್ಚು ಕಾಲ ಬಿಜೆಪಿ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ಹವಣಿಸುತ್ತಿವೆ.