ಗುಜರಾತ್ನಲ್ಲಿ ಕೇಜ್ರಿವಾಲ್, ಮಾನ್ ಅಬ್ಬರದ ಪ್ರಚಾರ: ಕಮಲ, ಕೈಗೆ ಎಎಪಿ ಸವಾಲು
ಅಹಮದಾಬಾದ್, ಅಕ್ಟೋಬರ್ 28: ಗುಜರಾತ್ ವಿಧಾನಸಭೆ ಚುನಾವಣೆಗೆ ಕೆಲ ದಿನಗಳು ಬಾಕಿ ಇವೆ. ಬಿಜೆಪಿ, ಕಾಂಗ್ರೆಸ್ ಹಾಗೂ ಎಎಪಿ ನಾಯಕರು ಪ್ರಚಾರ ಕೈಗೊಂಡಿದ್ದಾರೆ. ಕಳೆದ ಎರಡು ದಶಕಗಳಿಂದ ಅಧಿಕಾರದ ಗದ್ದುಗೆ ಏರಿದ್ದ ಬಿಜೆಪಿಗೆ ಈಗ ಎರಡು ಸವಾಲುಗಳನ್ನು ಎದುರಿಸುವ ಸಂಕಷ್ಟ ಬಂದೊದಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ಒಂದೇ ಸವಾಲಾಗಿತ್ತು. ಆದರೆ, ಈ ಬಾರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ದೊಡ್ಡ ಸವಾಲಾಗಿ ಪರಿಣಮಿಸಿದೆ.
ದೆಹಲಿ ಹಾಗೂ ಪಂಜಾಬ್ನಲ್ಲಿ ಸ್ಪಷ್ಟ ಬಹುಮತದಿಂದ ಆರಿಸಿ ಬಂದಿರುವ ಎಎಪಿಯ ಕಣ್ಣು ಗುಜರಾತ್ ಮೇಲೆ ಬಿದ್ದಿದೆ. ಪ್ರಧಾನಿ ಮೋದಿ ವರ್ಚಸ್ಸು ಹಾಗೂ ಹಿಂದುತ್ವದ ತಂತ್ರಗಳನ್ನು ಬಳಸಲು ಬಿಜೆಪಿ ಮತ್ತೆ ಮುಂದಾಗಿದೆ. ಆದರೆ, ಈ ಹಳೆಯ ತಂತ್ರಗಳಿಗೆ ಬಿಜೆಪಿಯ ಜನರು ಮತ್ತೆ ಮಣೆ ಹಾಕಲಿದ್ದಾರಾ ಎಂಬುದೀಗ ಕೌತುಕದ ಪ್ರಶ್ನೆಯಾಗಿದೆ.
ಗುಜರಾತ್ನತ್ತ ಮುಖ ಮಾಡಿರುವ ಎಎಪಿ ಉತ್ಸಾಹದಿಂದಲೇ ಪ್ರಚಾರ ಮಾಡುತ್ತಿದೆ. ರಸ್ತೆ, ನೀರು, ಶಿಕ್ಷಣ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಎಎಪಿ ನಾಯಕರು ಮಾತನಾಡುತ್ತಿದ್ದಾರೆ. ಹಿಂದುತ್ವದ ವರಸೆಯನ್ನೂ ಎಎಪಿ ಕೈಬಿಟ್ಟಿಲ್ಲ. ಹಿಂದುತ್ವದ ಪ್ರಯೋಗ ಶಾಲೆಯಂತಿರುವ ಗುಜರಾತ್ನಲ್ಲಿ ಹಿಂದುತ್ವವನ್ನೂ ಮುನ್ನೆಲೆಗೆ ತರಲು ಎಎಪಿ ಯತ್ನಿಸಿದೆ.

ನೋಟಿನಲ್ಲಿ ದೇವತೆಗಳ ಚಿತ್ರಗಳನ್ನು ಮುದ್ರಿಸಬೇಕೆಂದು ಪ್ರಧಾನಿಗೆ ಅರವಿಂದ ಕೇಜ್ರಿವಾಲ್ ಮನವಿ ಮಾಡಿದ್ದರು. ಈ ಮೂಲಕ ಗುಜರಾತ್ನ ಚುನಾವಣೆಯನ್ನು ಹಿಂದುತ್ವದ ನೆಲೆಯಲ್ಲಿ ನೋಡುವ ತಂತ್ರವನ್ನು ಕೇಜ್ರಿವಾಲ್ ಬಳಸಿದ್ದಾರೆ. ಆದರೆ, ಈ ತಂತ್ರಗಾರಿಕೆಯಲ್ಲಿ ಕೇಜ್ರಿವಾಲ್ಗೆ ಎಷ್ಟು ಲಾಭವಾಗಲಿದೆ ಎಂಬುದು ಚುನಾವಣೆ ಫಲಿತಾಂಶಗಳೇ ಹೇಳಬೇಕು.
ಕೇಜ್ರಿವಾಲ್, ಭಗವಂತ ಮಾನ್ ಅಬ್ಬರದ ಪ್ರಚಾರ
ಎಎಪಿ ನಾಯಕರಾದ ಅರವಿಂದ ಕೇಜ್ರಿವಾಲ್ ಹಾಗೂ ಭಗವಂತ ಮಾನ್ ಅವರು ಮೂರು ದಿನಗಳ ಕಾಲ ಗುಜರಾತ್ ಪ್ರವಾಸವನ್ನು ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕ ರ್ಯಾಲಿಗಳನ್ನು ಮಾಡಲಿದ್ದಾರೆ. ಮನೆಮನೆ ಪ್ರಚಾರವನ್ನೂ ಕೈಗೊಳ್ಳಬಹುದು ಎಂದು ಗುಜರಾತ್ನ ಎಎಪಿ ನಾಯಕರು ಹೇಳಿದ್ದಾರೆ.

ಎಎಪಿ ಹಂಚಿಕೊಂಡಿರುವ ಮಾಹಿತಿಗಳ ಪ್ರಕಾರ, ಇಂದು ಕೇಜ್ರಿವಾಲ್ ಹಾಗೂ ಮಾನ್ ಅವರು ಪಂಚಮಹಲ್ ಜಿಲ್ಲೆಯ ಮೊರ್ವಾ ಹದಾಫ್ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪಟಾನ್ ಜಿಲ್ಲೆಯ ಕಂಕೆರೆಜ್ ವಿಧಾನಸಭಾ ಕ್ಷೇತ್ರದಲ್ಲಿ ರ್ಯಾಲಿಯನ್ನೂ ನಡೆಸಲಿದ್ದಾರೆ.
ನವಸಾರಿ ಜಿಲ್ಲೆಯ ಚಿಖ್ಲಿ ಮತ್ತು ನರ್ಮದಾ ಜಿಲ್ಲೆಯ ದೇಡಿಯಾಪಾಡಾದಲ್ಲಿ ಸಾರ್ವಜನಿಕ ರ್ಯಾಲಿಗಳನ್ನು ಉದ್ದೇಶಿಸಿ ಶನಿವಾರ ಮಾತನಾಡಲಿದ್ದಾರೆ, ಭಾವನಗರ ಜಿಲ್ಲೆಯ ಗರಿಯಾಧರ್ ವಿಧಾನಸಭಾ ಕ್ಷೇತ್ರ ಮತ್ತು ರಾಜ್ಕೋಟ್ ಜಿಲ್ಲೆಯ ಧೋರಾಜಿಯಲ್ಲಿ ಸಾರ್ವಜನಿಕ ಪ್ರಚಾರವನ್ನು ಭಾನುವಾರ ಕೈಗೊಳ್ಳಲಿದ್ದಾರೆ.

ಎಎಪಿ ನಡೆಸಿರುವ ಆಂತರಿಕ ಸಮೀಕ್ಷೆಗಳ ಪ್ರಕಾರ, ಗುಜರಾತ್ನ 40 ರಿಂದ 50 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ. ನಗರ ಕೇಂದ್ರಿತ ಮತದಾರರನ್ನು ಎಎಪಿ ಸೆಳೆಯಬಹುದು ಎಂದು ವಿಶ್ಲೇಷಿಸಲಾಗಿದೆ. ಇದು ಬಿಜೆಪಿಗೆ ನಷ್ಟವೆಂದೇ ಪರಿಗಣಿಸಬಹುದು, ಕಾರಣ, ಗುಜರಾತ್ನ ನಗರ ಕೇಂದ್ರಿತ ಮತದಾರರು ಬಿಜೆಪಿ ಪರ ಮತ ಚಲಾಯಿಸಿದ್ದರು. ಈ ಯಾವ ಬೆಳವಣಿಗೆಗಳಿಗೂ ತಲೆ ಕೆಡಿಸಿಕೊಳ್ಳದ ಕಾಂಗ್ರೆಸ್ ಮೌನಕ್ಕೆ ಶರಣಾಗಿದೆ. ಗುಜರಾತ್ನ ಹಳ್ಳಿಗಳಲ್ಲಿ ಪ್ರಾಬಲ್ಯ ಹೊಂದಿರುವ ಕಾಂಗ್ರೆಸ್ ಕೆಳ ಹಂತದ ಪ್ರಚಾರ ಮಾಡುತ್ತಿದೆ.
ಪ್ರಸ್ತುತ ಗುಜರಾತ್ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. 182 ಸದಸ್ಯ ಬಲದ ವಿಧಾನಸಭೆಗೆ ಈ ವರ್ಷದ ಅಂತ್ಯದ ವೇಳೆಗೆ ಚುನಾವಣೆ ನಡೆಯಲಿದೆ. ಆದರೆ, ಚುನಾವಣೆಯ ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲ. 2017ರಲ್ಲಿ ನಡೆದಿದ್ದ ಗುಜರಾತ್ ಚುನಾವಣೆಯಲ್ಲಿ 99 ಕ್ಷೇತ್ರಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿತ್ತು. ಕಾಂಗ್ರೆಸ್ 77 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.












Click it and Unblock the Notifications