ಬ್ರಿಟಿಷರಿಗೆ ಸಾವರ್ಕರ್ ಕ್ಷಮೆ ಕೋರಿದ್ದು ನಿಜ: ರಾಹುಲ್ ಹೇಳಿಕೆಗೆ ಮಹಾತ್ಮ ಗಾಂಧಿ ಮರಿಮೊಮ್ಮಗ ಬೆಂಬಲ
ನವದೆಹಲಿ, ನವೆಂಬರ್ 18: ಹಿಂದೂತ್ವವಾದಿ ವಿ.ಡಿ.ಸಾವರ್ಕರ್ ನಿಧನರಾಗಿ ಅರ್ಧ ಶತಮಾನ ಕಳೆದರೂ, ಭಾರತದ ರಾಜಕಾರಣದಲ್ಲಿ ವಿವಾದಗಳನ್ನು ಹುಟ್ಟುಹಾಕುತ್ತಲೇ ಇದ್ದಾರೆ. ಸಾವರ್ಕರ್ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಟೀಕೆ-ಪ್ರತಿಟೀಕೆಗಳನ್ನು ಮಾಡುತ್ತಲೇ ಇವೆ.
ವಿವಾದದ ಕೇಂದ್ರ ಬಿಂದುವಾಗಿರುವ ಸಾವರ್ಕರ್ ಅವರನ್ನು ಕಾಂಗ್ರೆಸ್ ನಾಯಕರು 'ಹೇಡಿ' ಎಂದು ಕರೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ಸಾವರ್ಕರ್ ಅವರನ್ನು 'ವೀರ'ನೆಂದು ಹೇಳಿಕೆ ನೀಡಿದ್ದಾರೆ.

ಸಾವರ್ಕರ್ ಕ್ಷಮೆಯಾಚನೆ ಪತ್ರ ಪ್ರದರ್ಶಿಸಿದ ರಾಹುಲ್
ಪ್ರಸ್ತುತ ಭಾರತ್ ಜೋಡೊ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ರಾಹುಲ್ ಗಾಂಧಿ, ಸಾವರ್ಕರ್ ಅವರ ಬಗ್ಗೆ ಮತ್ತೆ ಮಾತನಾಡಿದ್ದಾರೆ. ಸಾವರ್ಕರ್ ಅವರ ಬಗೆಗಿನ ರಾಹುಲ್ ಹೇಳಿಕೆ ಮಹಾರಾಷ್ಟ್ರದ ರಾಜಕಾರಣದಲ್ಲಿ ಕಲ್ಲೋಲಗಳನ್ನೇ ಸೃಷ್ಟಿಸಿದೆ. ಸಾವರ್ಕರ್ ಅವರು ಬ್ರಿಟಿಷರಿಗೆ ಕ್ಷಮೆ ಕೋರಿದ್ದರು ಎಂದು ರಾಹುಲ್ ಹೇಳಿದ್ದಾರೆ. ಬ್ರಿಟಿಷರಿಗೆ ಸಾವರ್ಕರ್ ಬರೆದ ಕ್ಷಮಾಪಣಾ ಪತ್ರವನ್ನೂ ಪ್ರದರ್ಶನ ಮಾಡಿದ್ದಾರೆ.
ಮಹಾರಾಷ್ಟ್ರದ ಅಕೋಲ ಜಿಲ್ಲೆಯ ವಡೇಗಾಂವ್ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್, 1920ರ ಸರ್ಕಾರಿ ದಾಖಲೆಗಳಲ್ಲಿನ ಸಾವರ್ಕರ್ ಬರೆದ ಪತ್ರವನ್ನು ಮಾಧ್ಯಮ ಪ್ರತಿನಿಧಿಗಳಿಗೆ ತೋರಿಸಿದ್ದರು.
'ನಿಮ್ಮ(ಬ್ರಿಟಿಷರ) ವಿಧೇಯ ಸೇವಕನಾಗಿ ಉಳಿಯಲು ನಾನು ಬಯಸುತ್ತೇನೆ' ಎಂದು ಹೇಳುವ ಸಾವರ್ಕರ್ ಪತ್ರದ ಕೊನೆಯ ಸಾಲನ್ನು ರಾಹುಲ್ ಓದಿದ್ದರು. ಇದಕ್ಕೆ ಸಾವರ್ಕರ್ ಸಹಿ ಹಾಕಿದ್ದನ್ನೂ ಅವರು ಪ್ರದರ್ಶಿಸಿದ್ದರು.

ಬ್ರಿಟಿಷರಿಗೆ ಸಹಾಯ ಮಾಡಿದ್ದ ಸಾವರ್ಕರ್
ನಿಮ್ಮ ವಿಧೇಯ ಸೇವಕನಾಗಿ ಉಳಿಯಲು ಬಯಸುತ್ತೇನೆ ಎಂದು ಹೇಳುವ ಮೂಲಕ ಸಾವರ್ಕರ್ ಅವರು ಬ್ರಿಟಿಷ್ ಅಧಿಕಾರಿಗಳಿಗೆ ಸಹಾಯ ಮಾಡಿದ್ದರು ಎಂದು ರಾಹುಲ್ ಆರೋಪಿಸಿದ್ದರು. ಕ್ಷಮೆ ಕೇಳುವ ಮೂಲಕ ಮಹಾತ್ಮ ಗಾಂಧಿ, ಸರ್ಧಾರ್ ಪಟೇಲ್, ನೆಹರೂ ಸೇರಿದಂತೆ ಹಲವಾರು ಸ್ವಾತಂತ್ರ್ಯ ಹೋರಾಟಗಾರರಿಗೆ ಸಾವರ್ಕರ್ ಅವಮಾನ ಮಾಡಿದ್ದಾರೆ ಎಂದು ಪ್ರತಿಪಾದಿಸಿದ್ದರು.

ಭಾರತ್ ಜೋಡೊ ಯಾತ್ರೆ ತಡೆಯಲಿ: ರಾಹುಲ್ ಸವಾಲು
ಸಾವರ್ಕರ್ ಬಗೆಗಿನ ಅಭಿಪ್ರಾಯಗಳಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಆರ್ಎಸ್ಎಸ್ ಹಾಗೂ ಬಿಜೆಪಿಯವರಿಗೆ ಸಾವರ್ಕರ್ ಸಂಕೇತವಾಗಿದ್ದಾರೆ. ಆದರೆ, ಅವರೊಬ್ಬ ಹೇಡಿಯಾಗಿದ್ದು, ಬ್ರಿಟಿಷರಿಗೆ ಸಹಾಯ ಮಾಡಿದ್ದಾರೆ. ಸಾವರ್ಕರ್ ಅವರ ವಿಚಾರಧಾರೆಯ ಪ್ರತಿಪಾದಕರು ಬೇಕಿದ್ದರೆ ಭಾರತ್ ಜೋಡೊ ಯಾತ್ರೆಯನ್ನು ತಡೆಯಲಿ ಎಂದು ರಾಹುಲ್ ಸವಾಲು ಎಸೆದಿದ್ದರು. ರಾಹುಲ್ ಗಾಂಧಿ ವಿರುದ್ಧ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಹರಿಹಾಯ್ದಿದ್ದರು.

ಭಾರತ್ ಜೋಡೊ ಯಾತ್ರೆಗೆ ಜೊತೆಯಾದ ಮಹಾತ್ಮ ಗಾಂಧಿ ಮರಿಮೊಮ್ಮಗ
ಮಹಾರಾಷ್ಟ್ರದ ಶೆಗಾವೊಯಿನ್ನಲ್ಲಿ ಸಾಗಿದ ಭಾರತ್ ಜೋಡೊ ಯಾತ್ರೆಯಲ್ಲಿ ಮಹಾತ್ಮ ಗಾಂಧಿ ಮರಿಮೊಮ್ಮಗ ತುಷಾರ್ ಗಾಂಧಿ ಪಾಲ್ಗೊಂಡರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ವಿ.ಡಿ.ಸಾವರ್ಕರ್ ಬ್ರಿಟಿಷರ ಸ್ನೇಹಿತರಾಗಲು ಬಯಸಿದ್ದು ನಿಜ. ಅವರು ಜೈಲಿನಿಂದ ಹೊರಬರಲು ಬ್ರಿಟಿಷ್ ಅಧಿಕಾರಿಗಳ ಬಳಿ ಕ್ಷಮೆಯಾಚಿಸಿದ್ದರು. ಇದಕ್ಕೆ ಚರಿತ್ರೆಯಲ್ಲಿ ದಾಖಲೆಗಳಿವೆ. ಇತಿಹಾಸದಲ್ಲಿ ಪುರಾವೆಗಳಿವೆ. ಈ ಮಾಹಿತಿಗಳನ್ನು ವಾಟ್ಸಾಪ್ ಯುನಿವರ್ಸಿಟಿಯಿಂದ ಪಡೆದಿಲ್ಲ' ಎಂದು ಹೇಳಿದರು.
ಸಾವರ್ಕರ್ ಅವರ ಕುರಿತು ಗುರುವಾರ ಟ್ವೀಟ್ ಮಾಡಿದ್ದ ತುಷಾರ್ ಗಾಂಧಿ, 'ಸಾವರ್ಕರ್ ಅವರು ಎರಡನೇ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷರಿಗೆ ಸಹಾಯ ಮಾಡಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಐಎನ್ಎ ಬ್ರಿಟಿಷರ ವಿರುದ್ಧ ಹೋರಾಡುತ್ತಿದೆ ಎಂದು ತಿಳಿದ ನಂತರವೂ, ಅವರು ಸಹಾಯ ಮಾಡುವುದನ್ನು ಮುಂದುವರೆಸಿದರು. ಇದು ನಿರಾಕರಿಸಲಾಗದ ಐತಿಹಾಸಿಕ ಸತ್ಯ' ಎಂದು ತಿಳಿಸಿದ್ದರು.












Click it and Unblock the Notifications