ಬಿಜೆಪಿ ವಿರುದ್ದ ಎಲ್ಲಾ ಪಕ್ಷಗಳನ್ನು ಒಗ್ಗೂಡಿಸುವ ರಾಹುಲ್ ಪ್ರಯತ್ನಕ್ಕೆ ಭಾರೀ ಹಿನ್ನಡೆ?
ಕರ್ನಾಟಕ ಅಸೆಂಬ್ಲಿ ಚುನಾವಣೆಯ ಅತಂತ್ರ ಫಲಿತಾಂಶ ಹೊರಬೀಳುತ್ತಿದ್ದಂತೇ, ಕಾಂಗ್ರೆಸ್ ನಾಯಕರು ದೇವೇಗೌಡರ ಮನೆಬಾಗಿಲು ಬಡಿದಾಗಲೇ, ಹೈಕಮಾಂಡಿನ ದೂರಾಲೋಚನೆ ಏನು ಎನ್ನುವುದು ಅರ್ಥವಾಗದ ರಾಜಕೀಯವೇನೂ ಅಲ್ಲ.
ಆದರೆ, ಪ್ರಾದೇಶಿಕ ಪಕ್ಷಗಳು ಮತ್ತು ಬಿಜೆಪಿಯೇತರ ಪಕ್ಷಗಳು ಕಾಂಗ್ರೆಸ್ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಸಿದ್ದವಿದೆಯಾ? ಸೋನಿಯಾ ಗಾಂಧಿ ಕರಗತ ಮಾಡಿಕೊಂಡಷ್ಟು ರಾಜಕೀಯವನ್ನು ರಾಹುಲ್ ಗಾಂಧಿ ಅರಿತುಕೊಂಡಿದ್ದಾರಾ? ಪ್ರಶ್ನೆ ಇರುವುದೇ ಇಲ್ಲಿ..
ಎನ್ಡಿಎ ಮೈತ್ರಿಕೂಟದಲ್ಲಿದ್ದ ತೆಲುಗುದೇಶಂ ಈಗಾಗಾಲೇ ಹೊರಗೆ ಬಂದಾಗಿದೆ, ಶಿವಸೇನೆ ಹೆಚ್ಚುಕಮ್ಮಿ ಹೊರಬಂದಂತೇ, ನಿತೀಶ್ ಕುಮಾರಿಗೂ ಏನೋ ಅಸಮಾಧಾನ... ಈ ವೇಳೆಯಲ್ಲಿ ಬಿಜೆಪಿ ವಿರುದ್ದ ಎಲ್ಲಾ ಪಕ್ಷಗಳನ್ನು ಒಂದು ಗೂಡಿಸಲು ಪ್ರಯತ್ನಿಸುತ್ತಿರುವ ರಾಹುಲ್ ಗಾಂಧಿಗೆ ನಿರೀಕ್ಷಿತ ಬೆಂಬಲ ಇತರ ಪಕ್ಷಗಳಿಂದ ಸಿಗುತ್ತಿದೆಯೇ ಎನ್ನುವ ಪ್ರಶ್ನೆಗೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಮಾತು 'ಇಲ್ಲ' ಎನ್ನುವುದು.
ತೃತೀಯ ರಂಗ ಮತ್ತು ಯುಪಿಎ ಮೈತ್ರಿಕೂಟದ ಕೆಲವು ಪಕ್ಷಗಳು ರಾಹುಲ್ ಗಾಂಧಿಯವರ ಮುಂದಾಳುತ್ವದಲ್ಲಿ ಚುನಾವಣೆಗೆ ಹೋಗಲು ಅಪಸ್ವರ ಎತ್ತಿರುವುದು, ಕಾಂಗ್ರೆಸ್ಸಿಗೆ ಸದ್ಯದ ಪರಿಸ್ಥಿತಿಯಲ್ಲಿ ಆಗಿರುವ ಬಹುದೊಡ್ಡ ಹಿನ್ನಡೆ.
ಆರ್ಜೆಡಿ ಮುಖಂಡ ಮತ್ತು ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಕೆಲವು ದಿನಗಳ ಹಿಂದೆ ರಾಹುಲ್ ನಾಯಕತ್ವವನ್ನು ಬೆಂಬಲಿಸಿದ್ದರು, ಇದರ ಬೆನ್ನಲ್ಲೇ ಸಿಪಿಐ(ಎಂ) ಮುಖಂಡರು ಯುವರಾಜರ ನಾಯಕತ್ವವನ್ನು ಪ್ರಶ್ನಿಸಿದ್ದು, ಕಾಂಗ್ರೆಸ್ಸಿಗೆ ಮುಜುಗರವನ್ನು ತಂದೊಡ್ಡಿದೆ. ಮುಂದೆ ಓದಿ..

ಕಾಂಗ್ರೆಸ್ಸಿಗೆ ಬಲತುಂಬ ಬೇಕಾಗಿರುವುದೇ ಪ್ರಾದೇಶಿಕ ಪಕ್ಷಗಳು
ಪಶ್ಚಿಮ ಬಂಗಾಳ, ಕರ್ನಾಟಕ, ಆಂಧ್ರ, ತೆಲಂಗಾಣ, ಬಿಹಾರ, ತಮಿಳುನಾಡು, ಉತ್ತರಪ್ರದೇಶ ಮುಂತಾದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಕಾರುಬರು. ದಕ್ಷಿಣದ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ನೇರ ಎದುರಾಳಿ ಎನ್ನುವುದನ್ನು ಬಿಟ್ಟರೆ, ಮಿಕ್ಕೆಲ್ಲಾ ಕಡೆ ಕಾಂಗ್ರೆಸ್ಸಿಗೆ ಬಲತುಂಬ ಬೇಕಾಗಿರುವುದೇ ಪ್ರಾದೇಶಿಕ ಪಕ್ಷಗಳು.

ಕಾಂಗ್ರೆಸ್ ನೇತೃತ್ವ ವಹಿಸಿಕೊಳ್ಳುವುದು ಕೆಲವು ಪಕ್ಷಗಳಿಗೆ ಆಗಿ ಬರುತ್ತಿಲ್ಲ
ಯುಪಿಎ ಮೈತ್ರಿಕೂಟದಿಂದ ಹೊರತಾದ ಸಂಯುಕ್ತ ರಂಗ ಮತ್ತು ತೃತೀಯ ರಂಗವೂ ಬಲಾಢ್ಯವಾಗಿರುವಾಗ, ಚುನಾವಣೆಗೆ ಮುನ್ನವೇ ಕಾಂಗ್ರೆಸ್ ನೇತೃತ್ವ ವಹಿಸಿಕೊಳ್ಳುವುದು ಕೆಲವೊಂದು ಪಕ್ಷಗಳಿಗೆ ಆಗಿ ಬರುತ್ತಿಲ್ಲ. ಖಾಸಗಿ ವಾಹಿನಿಯೊಂದಕ್ಕೆ ಕಮ್ಯೂನಿಸ್ಟ್ ಮುಖಂಡ ಸೀತಾರಾಂ ಯೆಚೂರಿ ನೀಡಿದ ಸಂದರ್ಶನದ ಪ್ರಕಾರ, ಚುನಾವಣೋತ್ತರ ಮೈತ್ರಿಯ ಬಗ್ಗೆ ಅವರ ಒಲವಿದೆಯೇ ಹೊರತು ಚುನಾವಣಾಪೂರ್ವ ಮೈತ್ರಿಯ ಬಗ್ಗೆ ಅವರಿಗೆ ಒಪ್ಪಿಗೆ ಇದ್ದಂತಿಲ್ಲ.

ಕೊನೆಗೆ ನಿಲ್ಲುವುದೇ ನಂಬರ್ ಗೇಮ್
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೊನೆಗೆ ನಿಲ್ಲುವುದೇ ನಂಬರ್ ಗೇಮ್ ಆಗಿರುವುದರಿಂದ, ಚುನಾವಣಾ ಫಲಿತಾಂಶದ ನಂತರ ಬೇಕಿದ್ದಲ್ಲಿ ಮಾತ್ರ ಕಾಂಗ್ರೆಸ್ ಜೊತೆ ಕೈಜೋಡಿಸೋಣ ಎನ್ನುವುದು ಯೆಚೂರಿಯವರ ನಿಲುವು. ಅವರ ಪ್ರಕಾರ, ಸಂಯುಕ್ತ ರಂಗ, ಚತುರ್ಥ ರಂಗ ಮತ್ತು ತೃತೀಯ ರಂಗವೇ ಎನ್ಡಿಎ ವಿರುದ್ದ ಪೈಪೋಟಿ ನೀಡಲು ಸಮರ್ಥವಾಗಿವೆ ಎನ್ನುವ ವಿಶ್ವಾಸ ಯೆಚೂರಿಯವರದ್ದು. ಹಾಗಿದ್ದಾಗ, ಇವರಿಗೆ ಕಾಂಗ್ರೆಸ್ ಯಾಕೆ ಬೇಕು?

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕಲೆ
ಸೋನಿಯಾ ಗಾಂಧಿಯವರಿಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕಲೆ ಗೊತ್ತಿತ್ತು. ಹಾಗಾಗಿಯೇ, ಎರಡು ಅವಧಿಯಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿತ್ತು. ಇದೇ ಮಾತನ್ನು ರಾಹುಲ್ ಗಾಂಧಿ ವಿಚಾರದಲ್ಲಿ ಹೇಳಲು ಸಾಧ್ಯವಿಲ್ಲ ಎನ್ನುವ ಯೆಚೂರಿ, ಜನರ ನಾಡಿಮಿಡಿತ ಅರಿವುದು ಬಹಳ ಕಷ್ಟದ ಕೆಲಸ ಎನ್ನುತ್ತಾರೆ.

ಎಲ್ಲಾ ಪಕ್ಷಗಳನ್ನು ಒಗ್ಗೂಡಿಸುವ ರಾಹುಲ್ ಪ್ರಯತ್ನಕ್ಕೆ ಭಾರೀ ಹಿನ್ನಡೆ?
ಒಟ್ಟಿನಲ್ಲಿ, ಬಿಜೆಪಿ ವಿರುದ್ದ ಎಲ್ಲಾ ಪಕ್ಷಗಳನ್ನು ಒಗ್ಗೂಡಿಸುವ, ನರೇಂದ್ರ ಮೋದಿಯವರನ್ನು ಮತ್ತೊಂದು ಅವಧಿಗೆ ಪ್ರಧಾನಿಯಾಗದಂತೆ ರಾಜಕೀಯ ತಂತ್ರಗಾರಿಕೆ ರೂಪಿಸುವಲ್ಲಿ ಕಾರ್ಯೋನ್ಮುಖರಾಗಿರುವ ರಾಹುಲ್ ಗಾಂಧಿಗೆ, ತೇಜಸ್ವಿ ಯಾದವ್ ಮತ್ತು ಸೀತಾರಾಂ ಯೆಚೂರಿ ಹೇಳಿಕೆ ಮುಜುಗರದ ಜೊತೆಗೆ ಹಿನ್ನಡೆಯನ್ನೂ ತಂದೊಡ್ಡಿದೆ.












Click it and Unblock the Notifications