ಪತ್ನಿಯರನ್ನು ತ್ಯಜಿಸುವ ಎನ್ಆರ್ಐಗಳಿಗೆ ಕಾನೂನಿನ ಕುಣಿಕೆ
ನವದೆಹಲಿ, ಜುಲೈ 28: ಅನಿವಾಸ ಭಾರತೀಯರ ಮದುವೆ ವಿಚಾರದಲ್ಲಿ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ ಹೊಸ ಕಾನೂನು ರೂಪಿಸಲು ಮುಂದಾಗಿದೆ.
ಇದು ಅನಿವಾಸಿ ಭಾರತೀಯರು ತಮ್ಮ ಪತ್ನಿಯರನ್ನು ತೊರೆದಾಗ ಮತ್ತು ವಿದೇಶದಲ್ಲಿ ಅಕ್ರಮವಾಗಿ ಮದುವೆಯಾದಾಗ ಭಾರತದಲ್ಲಿನ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಅವಕಾಶವನ್ನು ಸಹ ಒದಗಿಸಲಿದೆ.
ಸಂಸತ್ನ ಮುಂದಿನ ಅಧಿವೇಶನದ ವೇಳೆಗೆ ವಿದೇಶದಲ್ಲಿ ನೆಲೆಸಿರುವ ಭಾರತೀಯರ ವಿರುದ್ಧ ಸಮನ್ಸ್ ಮತ್ತು ವಾರಂಟ್ ಕಳುಹಿಸಲು ಅನುಕೂಲವಾಗುವ ಕಾನೂನನ್ನು ಜಾರಿಗೆ ತರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
'ಎನ್ಆರ್ಐ ಮದುವೆಗಳು ಮತ್ತು ಮಹಿಳೆಯರು ಹಾಗೂ ಮಕ್ಕಳ ಕಳ್ಳಸಾಗಣೆ' ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಸುಷ್ಮಾ, ಮುಂದಿನ ಸಂಸತ್ ಅಧಿವೇಶನದಲ್ಲಿ ಸರ್ಕಾರವು ಹೊಸ ಕಾನೂನು ರೂಪಿಸಲಿದೆ.

ಭಾರತದಲ್ಲಿನ ತಮ್ಮ ಪತ್ನಿಯರನ್ನು ತೊರೆದ ಮತ್ತು ವಿದೇಶದಲ್ಲಿ ಅಕ್ರಮವಾಗಿ ಮದುವೆಯಾದ ಎನ್ಆರ್ಐಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ನೀಡುವಂತೆ ವಿದೇಶ ವಾಸಿ ಭಾರತೀಯರ ವಿರುದ್ಧ ಸಮನ್ಸ್ ಮತ್ತು ವಾರಂಟ್ ಹೊರಡಿಸಲು ಇದು ನೆರವಾಗಲಿದೆ ಎಂದು ಹೇಳಿದರು.
ಅಲ್ಲದೆ, ಈಗ ಭಾರತದಲ್ಲಿ ಪತ್ನಿಯರನ್ನು ತೊರೆದು ವಿದೇಶದಲ್ಲಿ ಅಕ್ರಮವಾಗಿ ವಿವಾಹವಾಗಿ ಸಮನ್ಸ್ ಹಾಗೂ ವಾರಂಟ್ ಹೊರಡಿಸಿರುವವರ ಮಾಹಿತಿಗಳನ್ನು ನೀಡಲೆಂದೇ ಪ್ರತ್ಯೇಕ ವೆಬ್ಸೈಟ್ ಆರಂಭಿಸಲಾಗುವುದು ಎಂದು ತಿಳಿಸಿದರು.
ಹೊಸ ಕಾನೂನಿನ ಅಡಿಯಲ್ಲಿ ಆಸ್ತಿ ಮುಟ್ಟುಗೋಲಿನ ಜತೆಯಲ್ಲಿ ಆ ವ್ಯಕ್ತಿಯ ಪಾಸ್ಪೋರ್ಟ್ ರದ್ದತಿಯ ಕ್ರಮವನ್ನೂ ತೆಗೆದುಕೊಳ್ಳಲು ಅವಕಾಶ ನೀಡಲಾಗುತ್ತದೆ.

ದೇಶಕ್ಕೆ ಮರಳದ ಅನಿವಾಸಿ ಭಾರತೀಯರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಅವರ ನೊಂದ ಪತ್ನಿಯರಿಗೆ ಹಣಕಾಸಿನ ನೆರವು ನೀಡಲು ಮಾರಾಟ ಮಾಡಲಾಗುವುದು.
ಅಪರಾಧ ಪ್ರಕ್ರಿಯೆ ಸಂಹಿತೆಯಲ್ಲಿ ನಾವು ಕೆಲವು ತಿದ್ದುಪಡಿಗಳನ್ನು ತರುವ ಅಗತ್ಯವಿದೆ ಎಂದರು.
ಕಳೆದ ಮೂರು ವರ್ಷಗಳಲ್ಲಿ ಎನ್ಆರ್ಐ ಪತಿಯರಿಂದ ತಿರಸ್ಕೃತರಾಗಿರುವ ಬಗ್ಗೆ 3,328 ದೂರುಗಳು ದಾಖಲಾಗಿವೆ ಎಂದು ಸಚಿವಾಲಯ ತಿಳಿಸಿದೆ.
ಇಂತಹ ಪ್ರಕರಣಗಳಲ್ಲಿ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ ಎಂದು ಮಂದಿ ಎನ್ಆರ್ಐ ಆರೋಪಿ ಪುರುಷರ ಪಾಸ್ಪೋರ್ಟ್ಗಳನ್ನು ರದ್ದುಗೊಳಿಸಿದ್ದೇವೆ. ಇವರೆಲ್ಲರೂ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಸುಷ್ಮಾ ತಿಳಿಸಿದರು.












Click it and Unblock the Notifications