ಯಾರನ್ನೋ ಮೆಚ್ಚಿಸಲು ಸಾಹಿತಿಗಳು ಪ್ರಶಸ್ತಿ ಹಿಂದಿರುಗಿಸುತ್ತಿದ್ದಾರೆ: ವೆಂಕಯ್ಯ ನಾಯ್ಡು
ಬೆಂಗಳೂರು, ನ 14: ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಪ್ರಶಸ್ತಿ ಹಿಂದಿರುಗಿಸುತ್ತಿರುವ ಸಾಹಿತಿಗಳು, ಚಿತ್ರೋದ್ಯಮದ ಕೆಲವರು ಯಾವ ಕಾರಣಕ್ಕಾಗಿ ಅಥವಾ ಯಾರನ್ನು ಮೆಚ್ಚಿಸಲು ಈ ಕೆಲಸ ಮಾಡುತ್ತಿದ್ದಾರೆಂದು ಮೊದಲು ತಿಳಿಸಲಿ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಆಗ್ರಹಿಸಿದ್ದಾರೆ.
ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ವೇಳೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಅದೆಷ್ಟೋ ಜನರ ಮಾರಣಹೋಮ ನಡೆಯಿತು. ಆಗ ಅದ್ಯಾವ ಸಾಹಿತಿಗಳು ಪ್ರಶಸ್ತಿಯನ್ನು ಹಿಂದಿರುಗಿಸಿದರು ಎಂದು ನಾಯ್ಡು ಪ್ರಶ್ನಿಸಿದ್ದಾರೆ.
ಪ್ರಶಸ್ತಿ ವಾಪಸ್ ಮಾಡುತ್ತಿರುವುವರು ಒಂದು ವಿಷಯವನ್ನು ಗಮನದಲ್ಲಿ ಇಟ್ಟು ಕೊಳ್ಳಬೇಕು. ಸಾರ್ವತ್ರಿಕ ಚುನಾವಣೆಯಲ್ಲಿ ಜನ ಅಭೂತಪೂರ್ವವಾಗಿ ಮೋದಿ ನೇತೃತ್ವದ ಬಿಜೆಪಿಯನ್ನು ಆರಿಸಿ ಕಳುಹಿಸಿದೆ. ದೇಶದ ಜನತೆ ಮೋದಿ ನಾಯಕತ್ವಕ್ಕೆ ಜನಾದೇಶ ನೀಡಿದೆ.
ಇನ್ನೊಬ್ಬರನ್ನು ಮೆಚ್ಚಿಸಲು ಸಾಹಿತಿಗಳು ಪ್ರಶಸ್ತಿ ಹಿಂದಿರುಗಿಸುತ್ತಿದ್ದಾರೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಸಹಿಷ್ಣುತೆಯ ಬಗ್ಗೆ ಮಾತನಾಡದ ಸಾಹಿತಿಗಳು ಬಿಜೆಪಿ ಸರಕಾರದ ಅವಧಿಯಲ್ಲಿ ಪ್ರಶಸ್ತಿ ವಾಪಸ್ ಮಾಡುತ್ತಿರುವ ಉದ್ದೇಶವೇನು ಎನ್ನುವುದನ್ನು ದೇಶದ ಜನತೆಗೆ ಸ್ಪಷ್ಟ ಪಡಿಸಲಿ ಎಂದು ನಾಯ್ಡು ಸಂಬಂಧ ಪಟ್ಟವರಿಗೆ ಸವಾಲೆಸೆದಿದ್ದಾರೆ.
ಈಗ ಅಸಹಿಷ್ಣುತೆಯ ಬಗ್ಗೆ ಮಾತಾನಾಡುವ ಸಾಹಿತಿಗಳು ಮತ್ತುಇತರರು, ಸಿಖ್ಖರ ಮಾರಣಹೋಮ ನಡೆದಾಗ ಎಲ್ಲಿದ್ದರು. ಬಿಜೆಪಿ ಎಲ್ಲೂ ಅಸಹಿಷ್ಣುತೆಯನ್ನು ಸಹಿಸುವುದಿಲ್ಲ, ಈ ಸಂಬಂಧ ಯಾವುದೇ ಮುಕ್ತ ಚರ್ಚೆಗೆ ನಾವು ಸಿದ್ದರಿದ್ದೇವೆ ಎಂದು ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಪಕ್ಷದ ಆಂತರಿಕ ಸಮಸ್ಯೆಯ ಬಗ್ಗೆ ನಾಯ್ಡು ಹೇಳಿದ್ದು, ಮುಂದೆ ಓದಿ..

ಬಿಹಾರ ಚುನಾವಣೆ
ಅಸೆಂಬ್ಲಿ ಚುನಾವಣೆಯು ರಾಷ್ಟ್ರ ರಾಜಕಾರಣದ ಮೇಲೆ ಪ್ರಭಾವ ಬೀರುವುದಿಲ್ಲ. ರಾಜ್ಯಗಳ ಚುನಾವಣೆ ಸಿಎಂ ಆಯ್ಕೆಗೆ ಹೊರತು ಪ್ರಧಾನಿಯವರ ಆಯ್ಕೆಗಲ್ಲ, ಆಯಾಯ ರಾಜ್ಯದಲ್ಲಿ ಪಕ್ಷ ಗೆದ್ದರೆ, ಸ್ಥಳೀಯ ಮುಖಂಡರೇ ಮುಖ್ಯಮಂತ್ರಿಗಳಾಗುತ್ತಾರೆ - ವೆಂಕಯ್ಯ ನಾಯ್ಡು.

ಚುನಾವಣೆಯಲ್ಲಿ ಸೋಲು, ಗೆಲುವು ಇದ್ದದ್ದೇ
ರಾಜಕೀಯ ಪಕ್ಷಗಳಿಗೆ ಚುನಾವಣೆಯಲ್ಲಿ ಸೋಲು, ಗೆಲುವುದು ಇದ್ದದ್ದೇ. ಇದಕ್ಕೆ ಬಿಜೆಪಿ ಕೂಡಾ ಹೊರತಾಗಿಲ್ಲ. ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದ ಮೇಲೆ ನಾವು ಹಲವು ಅಸೆಂಬ್ಲಿ ಚುನಾವಣೆ ಗೆದ್ದಿದ್ದೇವೆ, ಅದರಂತೆ ಬಿಹಾರ, ದೆಹಲಿಯಲ್ಲಿ ನಮ್ಮ ಪಕ್ಷಕ್ಕೆ ಸೋಲೂ ಆಗಿದೆ - ವೆಂಕಯ್ಯ ನಾಯ್ಡು

ಬಹಿರಂಗ ಹೇಳಿಕೆ ತಪ್ಪು
ಪಕ್ಷದ ಹಿರಿಯರು ತಮ್ಮ ಅಭಿಪ್ರಾಯ ತಿಳಿಸಲು ಮುಕ್ತರು, ಅವರ ಮಾರ್ಗದರ್ಶನ ನಮಗೆಲ್ಲರಿಗೂ ಬೇಕಾಗಿದೆ. ಆದರೆ ತಮ್ಮ ಅಭಿಪ್ರಾಯವನ್ನು ನಾಲ್ಕು ಗೋಡೆಯ ಮಧ್ಯೆ ಹೇಳದೇ, ಸಾರ್ವಜನಿಕವಾಗಿ ಮಾತನಾಡಿದ್ದು ತಪ್ಪು ಎಂದು ವೆಂಕಯ್ಯ ನಾಯ್ಡು ಬೇಸರ ವ್ಯಕ್ತ ಪಡಿಸಿದ್ದಾರೆ.

ಸಂಸದೀಯ ಮಂಡಳಿ
ಹಿರಿಯರು ತಮ್ಮ ಅಭಿಪ್ರಾಯವನ್ನು ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪಿಸಬಹುದಿತ್ತು. ಪಕ್ಷದ ಸಂಸದೀಯ ಮಂಡಳಿ ಎಲ್ಲ ಹೇಳಿಕೆಯನ್ನು ಗಮನಿಸಿದೆ. ಬಿಹಾರದ ಚುನಾವಣೆಯಲ್ಲಿ ನಮಗಾದ ಸೋಲಿಗೆ ಕಾರಣವೇನು ಎನ್ನುವುದನ್ನು ವಿಸ್ಕೃತವಾಗಿ ಚರ್ಚಿಸಲು ನಿರ್ಧರಿಸಲಾಗಿದೆ - ವೆಂಕಯ್ಯ ನಾಯ್ಡು.

ಅಡ್ವಾಣಿ ನಾಯಕತ್ವದಲ್ಲೂ ಸೋಲಾಗಿತ್ತು
ನಾನು 2004ರಲ್ಲಿ ಪಕ್ಷದ ಅಧ್ಯಕ್ಷನಾಗಿದ್ದಾಗ, ವಾಜಪೇಯಿ ಪಕ್ಷದ ನಾಯಕತ್ವ ವಹಿಸಿದ್ದರು. ಚುನಾವಣೆಯಲ್ಲಿ ನಮಗೆ ಸೋಲಾಗಿತ್ತು. 2009ರಲ್ಲಿ ಅಡ್ವಾಣಿ ಅವರು ನಾಯಕತ್ವ ವಹಿಸಿದ್ದಾಗಲೂ, ನಮಗೆ ಸೋಲಾಗಿತ್ತು. ಹಾಗಾಗಿ, ಒಬ್ಬರನ್ನು ಅಥವಾ ಇಬ್ಬರನ್ನು ಸೋಲಿಗೆ ಹೊಣೆ ಮಾಡುವುದು ಸರಿ ಅಲ್ಲ ಎಂದು ಪರೋಕ್ಷವಾಗಿ ನಾಯ್ಡು, ಅಡ್ವಾಣಿಗೆ ಟಾಂಗ್ ನೀಡಿದ್ದಾರೆ.












Click it and Unblock the Notifications