Government employees: ಚುನಾವಣೆ: ಸರ್ಕಾರಿ ಅಧಿಕಾರಿಗಳ ದಿಢೀರ್ ಎತ್ತಂಗಡಿ!
Government employees: ಮಹಾರಾಷ್ಟ್ರ ಚುನಾವಣೆಗೆ ಸರಿಯಾಗಿ ಇನ್ನು ಎರಡು ವಾರಗಳು ಮಾತ್ರ ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರ ಚುನಾವಣೆಯಲ್ಲಿ ಮಹತ್ವದ ಬದಲಾವಣೆಗಳು ಆಗುತ್ತಿವೆ. ಅಧಿಕಾರಿಗಳನ್ನು ದಿಢೀರ್ ಅಂತ ಎತ್ತಂಗಡಿ ಮಾಡಲಾಗ್ತಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಇದೇ 20ರಂದು ನಡೆಯಲಿದೆ. ಈ ಬಾರಿ ಒಂದೇ ಹಂತದಲ್ಲಿ ಮಹಾರಾಷ್ಟ್ರ ಚುನಾವಣೆ ನಡಿತಿದೆ. ಬಾಕಿ 15 ದಿನ ಇರುವಾಗಲೇ ಸರ್ಕಾರಿ ನೌಕರರಿಗೆ ಸಂಕಷ್ಟ ಎದುರಾಗಿದೆ.
ಮಹಾರಾಷ್ಟ್ರ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗಲೇ ಈ ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ಜೋರಾಗಿದೆ. ಉನ್ನತ ಅಧಿಕಾರಿಗಳನ್ನೇ ವರ್ಗಾವಣೆ ಮಾಡುವ ಪ್ರಕ್ರಿಯೆ ಶುರುವಾಗಿದೆ. ಇದೀಗ ಮಹಾರಾಷ್ಟ್ರದ ಡಿಜಿಪಿಯನ್ನು ಕೂಡಲೇ ಜಾರಿಗೆ ಬರುವಂತೆ ವರ್ಗಾವಣೆ ಮಾಡುವಂತೆ ಭಾರತೀಯ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.

ಮಹಾರಾಷ್ಟ್ರದಲ್ಲಿ ಚುನಾವಣೆ ದಿನಾಂಕ ಸಮೀಪಿಸುತ್ತಿರುವ ಬೆನ್ನಲ್ಲೇ ಅಧಿಕಾರಿಗಳ ಬದಲಾವಣೆ ಪರ್ವ ಶುರುವಾಗಿದೆ. ಇದೀಗ ಅಲ್ಲಿನ ಡಿಜಿಪಿಯಾಗಿರುವ ರಶ್ಮಿ ಶುಕ್ಲಾ ಅವರನ್ನು ಏಕಾಏಕಿ ವರ್ಗಾವಣೆ ಮಾಡಲಾಗಿದೆ. ಇವರ ಸ್ಥಾನಕ್ಕೆ ಶುಕ್ಲಾ ಅವರ ಹಿಂದಿನ ಹಿರಿಯ ಅಧಿಕಾರಿಯನ್ನು ನೇಮಕ ಮಾಡುವಂತೆ ಸೂಚನೆ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯುತ್ತಿದ್ದು, ವಿರೋಧ ಪಕ್ಷಗಳು ಉಗ್ರ ಪ್ರಚಾರಕ್ಕೆ ಇಳಿದಿವೆ. ಶುಕ್ಲಾ ಅವರು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಆರೋಪಿಸಿದ್ದವು. ಹೀಗಾಗಿ, ಭಾರತೀಯ ಚುನಾವಣಾ ಆಯೋಗವು ಮಧ್ಯಪ್ರವೇಶಿಸಿದ್ದು, ಈ ನಿರ್ಧಾರಕ್ಕೆ ಬಂದಿದೆ.
ಡಿಜಿಪಿ ವರ್ಗಾವಣೆ ಮಾಡುವಂತೆ ಮಹಾರಾಷ್ಟ್ರ ಮುಖ್ಯಕಾರ್ಯದರ್ಶಿಗಳಗೆ ಪತ್ರ ಬರೆದು ಸೂಚನೆ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿ ಪಕ್ಷವನ್ನು ಮಹಾವಿಕಾಸ್ ಅಘಾಡಿ ಅಂತಲೂ, ಬಿಜೆಪಿ ಮೈತ್ರಿ ಪಕ್ಷವನ್ನು ಮಹಾಯುತಿ ಅಂತ ಕರೆಯಲಾಗುತ್ತದೆ. ಈ ಬಾರಿ ಚುನಾವಣೆ ಜಿದ್ದಾಜಿದ್ದಿನಿಂದ ಕೂಡಿದೆ. ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಮಹಾಯುತಿ ಪಕ್ಷದ ಪರವಾಗಿ ಐಪಿಎಸ್ ಅಧಿಕಾರಿ ಕೆಲಸ ಮಾಡುತ್ತಿದ್ದಾರೆ ಎಂದು ಮಹಾವಿಕಾಸ್ ಅಘಾಡಿ ಪಕ್ಷಗಳು ಆರೋಪ ಮಾಡಿದ್ದವು.
ಅಲ್ಲದೇ ಈ ಅಧಿಕಾರಿಯ ನೇತೃತ್ವದಲ್ಲಿ ನ್ಯಾಯ ಸಮ್ಮತ ಹಾಗೂ ವಿಶ್ವಾಸಾರ್ಹ ಚುನಾವಣೆ ನಡೆಯಲು ಸಾಧ್ಯವಿಲ್ಲ ಎಂದು ಸಹ ವಿರೋಧ ಪಕ್ಷಗಳು ಆರೋಪ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮಧ್ಯಪ್ರವೇಶ ಮಾಡಿದ್ದು, ಈ ರೀತಿಯ ನಿರ್ಧಾರವೊಂದನ್ನು ತಗೆದುಕೊಂಡಿದೆ.
ಚುನಾವಣೆ ಸಮಯದಲ್ಲೇ ಎಚ್ಚರಿಕೆ ನೀಡಲಾಗಿತ್ತು: ಇನ್ನು ಮಹಾರಾಷ್ಟ್ರ ಹಾಗೂ ಜಾರ್ಖಂಡ್ ಚುನಾವಣೆ ಘೋಷಣೆಯಾದ ಸಂದರ್ಭದಲ್ಲಿಯೇ ಎಲ್ಲಾ ವಿಭಾಗದ ಸರ್ಕಾರಿ ಅಧಿಕಾರಿಗಳಿಗೆ ಚುನಾವಣಾ ಆಯೋಗ ಎಚ್ಚರಿಕೆಯನ್ನು ನೀಡಿತ್ತು. ಮಹಾರಾಷ್ಟ್ರ ಹಾಗೂ ಜಾರ್ಖಂಡ್ನಲ್ಲಿ ಏಕಕಾಲಕ್ಕೆ ಚುನಾವಣೆ ನಡೆಯುತ್ತಿದೆ. ಹೀಗಾಗಿ, ಈ ಬಾರಿಯ ಚುನಾವಣೆಯಲ್ಲಿ ಅಧಿಕಾರಿಗಳ ಕಾರ್ಯ ವೈಖರಿಯನ್ನು ಚುನಾವಣಾ ಆಯೋಗವು ಹೆಚ್ಚು ಗಮನಿಸುತ್ತಿದೆ.
ಸಿಇಸಿ ರಾಜೀವ್ ಕುಮಾರ್ ಅವರು, ಮಹಾರಾಷ್ಟ್ರದಲ್ಲಿ ಚುನಾವಣೆ ದಿನಾಂಕವನ್ನು ಘೋಷಣೆ ಮಾಡುವುದಕ್ಕೂ ಮೊದಲು ಪರಿಶೀಲನಾ ಸಭೆಗಳನ್ನು ನಡೆಸಿದ್ದರು. ಮಹಾರಾಷ್ಟ್ರದಲ್ಲಿ ಚುನಾವಣೆ ಅವಶ್ಯವಿರುವ ಅಗತ್ಯ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದ್ದರು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಿಸುವ ಮುನ್ನವೇ ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡಬಾರದು. ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಅಂತ ವಾರ್ನಿಂಗ್ ಕೊಟ್ಟಿದ್ದರು.












Click it and Unblock the Notifications