ದೆಹಲಿ ಹಿಂಸಾಚಾರ: ಟಿ.ವಿ. ವಾಹಿನಿಗಳಿಗೆ ಸೂಚನೆ ನೀಡಿದ ಕೇಂದ್ರ ಸರ್ಕಾರ
ನವದೆಹಲಿ, ಫೆಬ್ರವರಿ 26: ಎಲ್ಲಾ ಖಾಸಗಿ ಉಪಗ್ರಹ ವಾಹಿನಿಗಳಿಗೆ ಮಂಗಳವಾರ ಸೂಚನೆ ಹೊರಡಿಸಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಹ ಅಥವಾ ದೇಶದ್ರೋಹಿ ಚಟುವಟಿಕೆಗಳನ್ನು ಉತ್ತೇಜಿಸುವ ಅಂಶಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ನಿರ್ದೇಶಿಸಿದೆ,
ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಸುಮಾರು 20 ಮಂದಿ ಬಲಿಯಾಗಿದ್ದಾರೆ. ಇದರ ವರದಿಗಾರಿಕೆಗೆ ತೆರಳಿರುವ ಪತ್ರಕರ್ತರ ಮೇಲೆಯೂ ದಾಳಿಗಳು ನಡೆದಿವೆ. ಕಲ್ಲುತೂರಾಟ, ಹಿಂಸಾಚಾರ, ಪುಂಡಾಟಿಕೆಯ ದೃಶ್ಯಗಳನ್ನು ವಾಹಿನಿಗಳು ಬಿತ್ತರಿಸುತ್ತಿವೆ.
'ಹಿಂಸಾಚಾರವನ್ನು ಪ್ರಚೋದಿಸುವ ಅಥವಾ ಕುಮ್ಮಕ್ಕು ನೀಡುವಂತಹ ಯಾವುದೇ ಅಂಶಗಳ ಬಗ್ಗೆ ಎಲ್ಲ ಟಿ.ವಿ. ವಾಹಿನಿಗಳೂ ಎಚ್ಚರಿಕೆ ವಹಿಸುವಂತೆ ಮತ್ತೆ ಸಲಹೆ ನೀಡಲಾಗುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆಯ ವಿರುದ್ಧವಾದ ಅಥವಾ ರಾಷ್ಟ್ರ ವಿರೋಧಿ ಕೃತ್ಯಗಳಿಗೆ ಉತ್ತೇಜನ ನೀಡುವಂತಹ ಯಾವುದೇ ವಿಷಯಗಳ ಮೇಲೆಯೂ ಎಚ್ಚರಿಕೆಯಿಂದಿರಬೇಕು' ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

ಧರ್ಮ ಅಥವಾ ಸಮುದಾಯಗಳ ಮೇಲಿನ ದಾಳಿಗಳ ಕುರಿತು ಸುದ್ದಿ ಬಿತ್ತರಿಸುವಾಗ, ಧಾರ್ಮಿಕ ಗುಂಪುಗಳ ನಿಂದನೆ, ಕೋಮು ಉದ್ವಿಗ್ನತೆಯನ್ನು ಉತ್ತೇಜಿಸುವಂತಹ ವಿಚಾರಗಳ ದೃಶ್ಯ ಅಥವಾ ಪದಗಳನ್ನು ಬಳಸುವಾಗಲೂ ಅದರಲ್ಲಿನ ಅಂಶಗಳ ಬಗ್ಗೆ ಕೂಡ ಜಾಗ್ರತೆ ವಹಿಸಬೇಕು ಎಂದು ಹೇಳಿದೆ.
ಅವಹೇಳನಾಕಾರಿ, ಉದ್ದೇಶಪೂರ್ವಕ, ಸುಳ್ಳು ಮತ್ತು ಎರಡು ಅರ್ಥಗಳನ್ನು ಬಿಂಬಿಸುವ ಹಾಗೂ ಅರ್ಧ ಸತ್ಯದ ಅಂಶಗಳನ್ನು ಬಿತ್ತರಿಸದಂತೆ ಸೂಚಿಸಿದೆ.
ಕೇಬಲ್ ಟೆಲಿವಿಷನ್ ನೆಟ್ವರ್ಕ್ (ನಿಯಂತ್ರಣ) ಕಾಯ್ದೆ 1995ರಲ್ಲಿ ವಿವರಿಸಿರುವಂತೆ ಕಾರ್ಯಕ್ರಮ ಮತ್ತು ಜಾಹೀರಾತು ಸಂಹಿತೆಗಳನ್ನು ಉಲ್ಲಂಘಿಸುವ ಯಾವುದೇ ವಿಷಯಗಳು ಬಿತ್ತರವಾಗದಂತೆ ಖಚಿತಪಡಿಸಿಕೊಳ್ಳುವಂತೆ ಹಾಗೂ ಎಲ್ಲ ಖಾಸಗಿ ಉಪಗ್ರಹ ವಾಹಿನಿಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.












Click it and Unblock the Notifications