ಸಮಾಜ ಸೇವಕ ಬಾಬಾ ಆಮ್ಟೆ ಸೇವೆಯನ್ನು ಸ್ಮರಿಸಿದ ಗೂಗಲ್ ಡೂಡ್ಲ್
ಬೆಂಗಳೂರು, ಡಿಸೆಂಬರ್ 26: ಸಮಾಜ ಸೇವಕ, ಪರಿಸರವಾದಿ ದಿವಂಗತ ಮುರಳೀಧರ್ ದೇವಿದಾಸ್ ಆಮ್ಟೆ(ಬಾಬಾ ಆಮ್ಟೆ) ಅವರನ್ನು ಸ್ಮರಿಸಿ, ಡೂಡ್ಲ್ ಮೂಲಕ ಸರ್ಚ್ ಇಂಜಿನ್ ಗೂಗಲ್ ತನ್ನ ನಮನ ಸಲ್ಲಿಸಿದೆ.
ಬಾಬಾ ಆಮ್ಟೆ ತಮ್ಮ ಇಡೀ ಬದುಕನ್ನೇ ಸಮಾಜ ಸೇವೆಗಾಗಿ ಮೀಸಲಿಟ್ಟ ಸಮಾಜ ಸೇವಕ . ಸಮಾಜದಲ್ಲಿ ತುಚ್ಛವಾಗಿ ಕಾಣುತ್ತಿದ್ದ ಕುಷ್ಠ ರೋಗಿಗಳಿಗೆ ಪುನರ್ವಸತಿ ಕಲ್ಪಿಸಲು ತಮ್ಮ ಜೀವನವನ್ನೇ ಸವೆಸಿದ್ದರು. ಬಹಳ ದೀರ್ಘ ಕಾಲದಿಂದ ರಕ್ತದ ಕ್ಯಾನ್ಸರ್ ಬಳಲುತ್ತಿದ್ದ ಅವರು ತಮ್ಮ 94ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.
ಶಾಂತಿ ಮತ್ತು ನ್ಯಾಯಕ್ಕಾಗಿ ಆಗ್ರಹಿಸಿ ಹಲವಾರು ಚಳುವಳಿಗಳನ್ನು ಹಮ್ಮಿಕೊಂಡಿದ್ದರು ಬಾಬಾ ಆಮ್ಟೆ. ಬುಡಕಟ್ಟು ಜನರನ್ನು ಒಗ್ಗೂಡಿಸಿ ಅವರ ಏಳ್ಗೆಗಾಗಿ ಶ್ರಮಿಸಿದ್ದರು. ನರ್ಮದಾ ನದಿಗೆ ಅಡ್ಡಲಾಗಿ ಕಟ್ಟುತ್ತಿದ್ದ ಸರ್ದಾರ್ ಸರೋವರ್ ಅಣೆಕಟ್ಟಿನ ನಿರ್ಮಾಣವನ್ನು ವಿರೋಧಿಸಿದ್ದರು.

ಉತ್ತಮ ಸ್ಥಿತಿವಂತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಬಾಬಾ ಆಮ್ಟೆ ನ್ಯಾಯಶಾಸ್ತ್ರದಲ್ಲಿ ಪಾಂಡಿತ್ಯ ಪಡೆದಿದ್ದರು. ಆಮ್ಟೆ ವಕೀಲರಾಗಿ ತರಬೇತಿ ಪಡೆದ ಮೇಲೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಬ್ರಿಟೀಷ್ ಸಾಮ್ರಾಜ್ಯದ ವಿರುದ್ಧ ಸಿಡಿದೆದ್ದಿದ್ದರು. ಬಾಬಾ ಆಮ್ಟೆ ಅವರಿಗೆ ಮ್ಯಾಗ್ಸೆಸೆ, ಪದ್ಮಶ್ರೀ, ಪದ್ಮಭೂಷಣ, ಗಾಂಧಿ ಶಾಂತಿ ಪ್ರಶಸ್ತಿ ಸೇರಿದಂತ ಹಲವಾರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.












Click it and Unblock the Notifications