ಪ್ರಗ್ಯಾ ಅಂಥವರು ಗಾಂಧೀಜಿ ಆತ್ಮವನ್ನೇ ಕೊಲ್ಲುತ್ತಿದ್ದಾರೆ : ಕೈಲಾಶ್ ಸತ್ಯಾರ್ಥಿ
ನವದೆಹಲಿ, ಮೇ 18 : "ನಾಥೂರಾಮ್ ಗೋಡ್ಸೆ ಮಹಾತ್ಮಾ ಗಾಂಧಿಯನ್ನು ಕೊಂದು ಹಾಕಿದ. ಆದರೆ, ಪ್ರಗ್ಯಾ ಅಂಥವರು ಮಹಾತ್ಮಾ ಗಾಂಧಿಯ ಆತ್ಮ, ಅಹಿಂಸೆ, ಶಾಂತಿ ಮತ್ತು ತಾಳ್ಮೆಯನ್ನೂ ಕೊಂದುಹಾಕುತ್ತಿದ್ದಾರೆ" ಎಂದು ನೊಬೆಲ್ ಶಾಂತಿ ಪಾರಿತೋಷಕ ವಿಜೇತ ಸಮಾಜ ಸೇವಕ ಕೈಲಾಶ್ ಸತ್ಯಾರ್ಥಿ ಅವರು ಮಮ್ಮಲ ಮರುಗಿದ್ದಾರೆ.
ಮಕ್ಕಳ ಹಕ್ಕುಗಳಿಗಾಗಿ ಹೋರಾಟ ನಡೆಸಿರುವ 65 ವರ್ಷದ ಕೈಲಾಶ್ ಸತ್ಯಾರ್ಥಿ ಅವರು, ಈ ಬಗ್ಗೆ ಟ್ವೀಟ್ ಮಾಡಿದ್ದು, ನಾಥೂರಾಮ್ ಗೋಡ್ಸೆಯನ್ನು 'ದೇಶಭಕ್ತ' ಎಂದು ಕರೆದಿರುವ ಪ್ರಗ್ಯಾ ಠಾಕೂರ್ ಅಂಥವರು ಮಹಾತ್ಮಾ ಗಾಂಧೀಜಿಯವರ ಆತ್ಮದ ಜೊತೆಗೆ ಭಾರತದ ಆತ್ಮವನ್ನೂ ಕೊಲ್ಲುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಮಹಾತ್ಮಾ ಗಾಂಧೀಜಿ ಅವರು ಯಾವುದೇ ಪಕ್ಷದಿಂದ ಮತ್ತು ಎಲ್ಲ ರೀತಿಯ ರಾಜಕೀಯದಿಂದ ದೂರವಿದ್ದವರು. ಬಿಜೆಪಿ ನಾಯಕತ್ವ ಸಣ್ಣ ರಾಜಕೀಯ ಲಾಭದ ಆಸೆಗಳನ್ನು ಕೈಬಿಡಬೇಕು, ಇಂಥವರನ್ನು (ಪ್ರಗ್ಯಾ) ಕೂಡಲೆ ಪಕ್ಷದಿಂದ ಕಿತ್ತೊಗೆಯಬೇಕು ಮತ್ತು ರಾಜ ಧರ್ಮವನ್ನು ಪಾಲಿಸಬೇಕು ಎಂದು ಹಿಂದಿಯಲ್ಲಿ ಬಿಜೆಪಿಯ ಕಿವಿಯನ್ನು ಕಿಂಡಿದ್ದಾರೆ.
2008ರ ಮಾಲೇಗಾಂವ್ ಸ್ಫೋಟದಲ್ಲಿ ಆರೋಪಿಯಾಗಿ, ವಿಚಾರಣೆ ನಡೆದು ಆರೋಪ ಮುಕ್ತರಾಗಿ ಇದೀಗ ಮಧ್ಯ ಪ್ರದೇಶದಲ್ಲಿ ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ಟಿನಿಂದ ಸ್ಪರ್ಧಿಸುತ್ತಿರು ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್, ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆ ಒಬ್ಬ 'ದೇಶಭಕ್ತ' ಎಂದು ಹೇಳಿ ವಿವಾದದ ಬಿರುಗಾಳಿ ಎಬ್ಬಿಸಿದ್ದರು.
ಇದಕ್ಕೂ ಮೊದಲು, 26/11 ಮುಂಬೈ ದಾಳಿಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿ ಮಡಿದಿದ್ದ ಹೇಮಂತ್ ಕರ್ಕರೆ, ತನ್ನ ಶಾಪದಿಂದಾಗಿಯೇ ಸತ್ತುಹೋದರು ಎಂದು ಹೇಳಿಕೆ ನೀಡಿ ವಿವಾದಕ್ಕೆ ಪ್ರಗ್ಯಾ ಗುರಿಯಾಗಿದ್ದರು. ಮಾಲೇಗಾಂವ್ ಸ್ಫೋಟದ ಪ್ರಕರಣವನ್ನು ಇದೇ ಹೇಮಂತ್ ಕರ್ಕರೆ ಅವರು ತನಿಖೆ ನಡೆಸುತ್ತಿದ್ದರು.

ಕ್ಷಮೆ ಕೋರಿದ್ದ ಪ್ರಗ್ಯಾ ಸಿಂಗ್
ಇದು ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದ್ದಲ್ಲದೆ, ಬಿಜೆಪಿಗೆ ತಿರುಗುಬಾಣವಾಗುವ ಲಕ್ಷಣ ತೋರುತ್ತಿದ್ದಂತೆ, ಅವರ ಹೇಳಿಕೆಯಿಂದ ಬಿಜೆಪಿ ದೂರ ಉಳಿಯಿತು ಮತ್ತು ಪ್ರಗ್ಯಾ ವಿರುದ್ಧ ಏಕೆ ಕ್ರಮ ಜರುಗಿಸಬಾರದು ಎಂದು ಶೋಕಾಸ್ ನೋಟೀಸನ್ನೂ ಜಾರಿ ಮಾಡಲಾಗಿದೆ. ಇದಕ್ಕಾಗಿ ಪ್ರಗ್ಯಾ ಸಿಂಗ್ ಕ್ಷಮೆ ಕೋರಿದರೂ ವಿರೋಧಿಗಳ ಸಿಟ್ಟು ತಣ್ಣಗಾದಂತೆ ಕಾಣಿಸುತ್ತಿಲ್ಲ. "ನಾನು ನಾಥೂರಾಮ್ ಗೋಡ್ಸೆ ಬಗ್ಗೆ ಹಾಗೆ ಹೇಳಿದ್ದಕ್ಕೆ ಈ ದೇಶದ ಜನರ ಕ್ಷಮೆ ಕೋರುತ್ತೇನೆ. ನನ್ನ ಹೇಳಿಕೆ ಸಂಪೂರ್ಣ ತಪ್ಪು. ನನಗೆ ದೇಶದ ಪಿತ ಮಹಾತ್ಮಾ ಗಾಂಧೀಜಿ ಬಗ್ಗೆ ಅಪಾರವಾದ ಗೌರವವಿದೆ" ಎಂದು ಪ್ರಗ್ಯಾ ಠಾಕೂರ್ ಹೇಳಿಕೆ ನೀಡಿದ್ದಾರೆ.

ಪ್ರಗ್ಯಾರನ್ನು ಎಂದೂ ಕ್ಷಮಿಸುವುದಿಲ್ಲ : ಮೋದಿ
ಈ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರು ಕೂಡ, ಮಹಾತ್ಮಾ ಗಾಂಧಿಯನ್ನು ಹತ್ಯೆಗೈದ, ರಾಷ್ಟ್ರೀಯ ಸ್ವಯಂಸೇವಕನಾಗಿದ್ದ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದ ಪ್ರಗ್ಯಾ ಸಿಂಗ್ ರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಆದರೆ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ, ಕೆ ಚಂದ್ರಶೇಖರ ರಾವ್ ಪ್ರಗ್ಯಾರನ್ನು ಪಕ್ಷದಿಂದಲೇ ಕಿತ್ತುಹಾಕಬೇಕು ಎಂದು ದುಂಬಾಲು ಬಿದ್ದಿದ್ದಾರೆ. ಮಹೀಂದ್ರ ಗ್ರೂಪ್ ನ ಚೇರ್ಮನ್ ಆನಂದ್ ಮಹೀಂದ್ರ ಅವರು ಕೂಡ, ದೇಶದ ತಾಲಿಬಾನ್ ರಾಷ್ಟ್ರವಾಗುತ್ತಿದೆ ಎಂದು ಟ್ವೀಟ್ ಮಾಡಿದ್ದರು.

ವಿವಾದದ ಕಿಡಿ ಎಬ್ಬಿಸಿದ್ದ ಕಮಲ್ ಹಾಸನ್
ಪ್ರಗ್ಯಾ ಸಿಂಗ್ ಠಾಕೂರ್ ಆ ರೀತಿ ಹೇಳಿಕೆ ನೀಡಲು ಕಾರಣ, ತಮಿಳುನಾಡಿನ ನಟ ಕಮಲ್ ಹಾಸನ್ ಅವರು, 'ನಾಥೂರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಹಿಂದೂ ಭಯೋತ್ಪಾದಕ' ಎಂದು ಬಣ್ಣಿಸಿದ್ದರು. ಇದಕ್ಕೆ ಪ್ರತಿಯಾಗಿ ನಾಥೂರಾಮ್ ಗೋಡ್ಸೆ ಒಬ್ಬ ದೇಶಭಕ್ತ ಎಂದು ಪ್ರಗ್ಯಾ ಠಾಕೂರ್ ತಿರುಗೇಟು ನೀಡಿದ್ದರು. ಕಡೆಗೆ ಕ್ಷಮೆ ಕೇಳಿದ ಪ್ರಗ್ಯಾ, ನಾನು ಎಂದಿಗೂ ಪಕ್ಷದ ತತ್ತ್ವ ಮತ್ತು ಸಿದ್ಧಾಂತಕ್ಕೆ ಬದ್ಧಳಾಗಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ನಟ ಕಮಲ್ ಹಾಸನ್ ಕೂಡ, ತನ್ನ ಹೇಳಿಕೆಯನ್ನು ತಿರುಚಲಾಗಿದ್ದು, ಹಿಂದೂನಲ್ಲಿ ಮಾತ್ರವಲ್ಲ ಎಲ್ಲ ಧರ್ಮಗಳಲ್ಲಿಯೂ ಭಯೋತ್ಪಾದಕರಿದ್ದಾರೆ ಎಂದು ಹೇಳಿಕೆ ನೀಡಿದ್ದೆ ಎಂದು ವಿಷಾದ ವ್ಯಕ್ತಪಡಿಸಿದ್ದರು.

ಅಮಿತ್ ಶಾ ಡ್ಯಾಮೇಜ್ ಕಂಟ್ರೋಲ್
ಬಿಜೆಪಿ ಮೇಲಿನ ಆಕ್ರೋಶ ಮಿತಿಮೀರುತ್ತಿದ್ದುದನ್ನು ಗಮನಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ಪ್ರಗ್ಯಾ ಹೇಳಿಕೆಗೂ ಪಕ್ಷದ ನಿಲುವಿಗೂ ಯಾವುದೇ ಸಂಬಂಧವಿಲ್ಲ. ಆದರೆ, ಈ ಹೇಳಿಕೆ ನೀಡಿದ ಎಲ್ಲ ಮೂವರು (ಪ್ರಗ್ಯಾ ಸಿಂಗ್ ಠಾಕೂರ್, ನಳಿನ್ ಕುಮಾರ್ ಕಟೀಲ್ ಮತ್ತು ಅನಂತ್ ಕುಮಾರ್ ಹೆಗಡೆ) ಕ್ಷಮೆ ಕೇಳಿದ್ದಾರೆ. ಇವು ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿವೆ. ಅವರ ವಿರುದ್ಧ ಕ್ರಮ ಜರುಗಿಸುವ ಕುರಿತು ಶಿಸ್ತು ಸಮಿತಿಗೆ ಶಿಫಾರಸು ಮಾಡಲಾಗಿದೆ ಎಂದು ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದರು. ಪ್ರಗ್ಯಾರನ್ನು ಬೆಂಬಲಿಸಿ ಮತ್ತು ನಾಥೂರಾಮ್ ದೇಶಭಕ್ತ ಎಂದು ಹೇಳಿ ಕರ್ನಾಟಕದ ಸಂಸದರಾದ ನಳಿನ್ ಕುಮಾರ್ ಕಟೀಲ್ ಮತ್ತು ಅನಂತ್ ಕುಮಾರ್ ಹೆಗಡೆ ಕೂಡ ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದರು. ನಂತರ ತಮ್ಮ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆಯೆಂದು, ಆ ಟ್ವೀಟ್ ಗಳನ್ನು ಡಿಲೀಟ್ ಮಾಡಿದ್ದರು.

ಪೂರಕವಾಗುವುದಾ ಅಥವಾ ಮಾರಕವಾಗುವುದಾ?
ಮೇ 19ರಂದು ಕಡೆಯ ಹಂತದ ಚುನಾವಣೆಯಲ್ಲಿ ಮಧ್ಯ ಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿಯೂ ಮತದಾನವಾಗುತ್ತಿದ್ದು, ಪ್ರಗ್ಯಾ ಸಿಂಗ್ ಅವರು ಕಾಂಗ್ರೆಸ್ಸಿನ ಹಿರಿಯ ನಾಯಕ, ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ವಿರುದ್ಧ ಸೆಡ್ಡು ಹೊಡೆದಿದ್ದಾರೆ. ಕಡೆಯ ಹಂತದಲ್ಲಿ, ಬಿಹಾರ(8), ಚಂಡೀಗಢ(1), ಹಿಮಾಚಲ ಪ್ರದೇಶ(4), ಜಾರ್ಖಂಡ್(3), ಮಧ್ಯ ಪ್ರದೇಶ(8), ಪಂಜಾಬ್(13), ಉತ್ತರ ಪ್ರದೇಶ(13), ಪಶ್ಚಿಮ ಬಂಗಾಳ(9) ಮುಂತಾದ 8 ರಾಜ್ಯಗಳಲ್ಲಿ 59 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ನಾಥೂರಾಮ್ ಗೋಡ್ಸೆ ವಿವಾದ ಪ್ರಗ್ಯಾ ಸಿಂಗ್ ಠಾಕೂರ್ ಅವರಿಗೆ ಪೂರಕವಾಗುವುದಾ ಅಥವಾ ಮಾರಕವಾಗುವುದಾ? ಇದು ಮೇ 23ರಂದು ಹೊರಬರಲಿರುವ ಫಲಿತಾಂಶದಂದು ತಿಳಿದುಬರಲಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications