ಪತ್ರಕರ್ತರ ಮೇಲಿನ ಕಿರುಕುಳ ನಿಲ್ಲಿಸಿ: ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳಿಂದ ಮೋದಿಗೆ ಪತ್ರ
ನವದೆಹಲಿ, ಅಕ್ಟೋಬರ್ 22: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಎರಡು ಅಂತಾರಾಷ್ಟ್ರೀಯ ಪತ್ರಿಕಾ ಸಂಸ್ಥೆಗಳು, ಭಾರತದಲ್ಲಿ ಪತ್ರಕರ್ತರು ಕಿರುಕುಳ ಮತ್ತು ಪ್ರತೀಕಾರದ ಭೀತಿಯಿಲ್ಲದೆ ಮುಕ್ತವಾಗಿ ಕೆಲಸ ಮಾಡಲು ಅನುವು ಮಾಡುವಂತೆ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿವೆ.
ಆಸ್ಟ್ರಿಯಾದಲ್ಲಿ ಕೇಂದ್ರ ಕಚೇರಿಯುಳ್ಳ ಇಂಟರ್ನ್ಯಾಷನಲ್ ಪ್ರೆಸ್ ಇನ್ಸ್ಟಿಟ್ಯೂಟ್ (ಐಪಿಐ) ಮತ್ತು ಬೆಲ್ಜಿಯಂ ಮೂಲದ ಇಂಟರ್ನ್ಯಾಷನಲ್ ಫೆಡರೇಷನ್ ಆಫ್ ಜರ್ನಲಿಸ್ಟ್ಸ್ (ಐಎಫ್ಜೆ) ಮಂಗಳವಾರ ಬರೆದಿರುವ ಪತ್ರದಲ್ಲಿ, ತಮ್ಮ ಕೆಲಸ ಮಾಡಿದ್ದಕ್ಕಾಗಿ ಕಠಿಣ ದೇಶದ್ರೋಹದ ಕಾನೂನುಗಳು ಸೇರಿದಂತೆ ಪತ್ರಕರ್ತ ವಿರುದ್ಧ ಹೊರಿಸಿರುವ ಎಲ್ಲ ಆರೋಪಗಳನ್ನೂ ಕೈಬಿಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸುವಂತೆಯೂ ಒತ್ತಾಯಿಸಿವೆ.
'ಕೊರೊನಾ ವೈರಸ್ ಸೋಂಕು ವ್ಯಾಪಕವಾದ ನಂತರದ ಅವಧಿಯಲ್ಲಿ ಪತ್ರಕರ್ತ ವಿರುದ್ಧ ದಾಖಲಾದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಕೋವಿಡ್ ಪ್ರಕರಣಗಳ ನಿರ್ವಹಣೆಯಲ್ಲಿನ ಸರ್ಕಾರದ ಲೋಪಗಳನ್ನು ತೋರಿಸಿದವರನ್ನು ಹತ್ತಿಕ್ಕಲು ಆರೋಗ್ಯ ಬಿಕ್ಕಟ್ಟು ನೆಪವಾಗಿ ಸಿಕ್ಕಿದೆ. ಸಾರ್ವಜನಿಕ ಆರೋಗ್ಯ ಸ್ಪಂದನೆಗೆ ಮಾಧ್ಯಮ ಸ್ವಾತಂತ್ರ್ಯ ಅತ ಅಗತ್ಯವಾಗಿದೆ' ಎಂದು ಸಂಸ್ಥೆಗಳು ಹೇಳಿವೆ.

'ಸ್ವತಂತ್ರ, ವಿಮರ್ಶಾತ್ಮಕ ಪತ್ರಕರ್ತರನ್ನು ಶೋಷಿಸಲು ದೇಶದ್ರೋಹದ ಕಾನೂನುಗಳನ್ನು ಬಳಸುವುದು ದೇಶದ ಅಂತಾರಾಷ್ಟ್ರೀಯ ಬದ್ಧತೆಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ಹಾಗೆಯೇ ಯಾವುದೇ ಟೀಕೆಗಳನ್ನು ಹತ್ತಿಕ್ಕುವ ಸರ್ಕಾರದ ಪ್ರಯತ್ನವಾಗಿದೆ. ಪತ್ರಕರ್ತರ ಕೆಲಸಗಳು ದೇಶದ್ರೋಹ ಅಥವಾ ಭದ್ರತೆಗೆ ಧಕ್ಕೆ ತರುವ ಪ್ರಕರಣಗಳಿಗೆ ಸಮನಾಗಿಲ್ಲ' ಎಂದು ಪತ್ರದಲ್ಲಿ ಬರೆಯಲಾಗಿದೆ.
ಭಾರತದಲ್ಲಿ ಲಾಕ್ಡೌನ್ ಮೊದಲ ಬಾರಿಗೆ ಜಾರಿಯಾದ ಬಳಿಕ ಮಾರ್ಚ್ 25 ರಿಂದ ಮೇ 31ರ ಅವಧಿಯಲ್ಲಿ ಕೋವಿಡ್ ಸೋಂಕಿನ ಕುರಿತು ವರದಿ ಮಾಡಿದ 55 ಪತ್ರಕರ್ತ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ರೈಟ್ಸ್ ಆಂಡ್ ರಿಸ್ಕ್ಸ್ ಅನಾಲಿಸಿಸ್ ಗ್ರೂಪ್ (ಬಿಆರ್ಎಜಿ) ವರದಿ ತೋರಿಸಿದೆ ಎಂದು ಅದು ತಿಳಿಸಿದೆ.












Click it and Unblock the Notifications