ಕೊಳವೆ ಬಾವಿ ದುರಂತ : ಮರುಹುಟ್ಟು ಪಡೆದ ರಾಜಸ್ಥಾನ ಬಾಲೆ
ಜೈಪುರ, ಜೂ, 30 : ಕೊಳವೆ ಬಾವಿಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿರುವ ಹಸುಳೆಗಳ ಸಂಖ್ಯೆಗೇನೂ ಕಡಿಮೆಯಿಲ್ಲ. ಆದರೆ ಇದರ ನಡುವೆ 5 ವರ್ಷದ ಸುನೀತಾ ಯಾದವ್ ಎಂಬಾಕೆ ಜೀವಂತವಾಗಿ ಪಾರಾದ ಘಟನೆ ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ನಡೆದಿದೆ.
ಈಕೆ ಸುಮಾರು ಶನಿವಾರ ಬೆಳಿಗ್ಗೆ 8 ಗಂಟೆಗೆ ತನ್ನ ತಂಗಿಯೊಂದಿಗೆ ತೋಟದಲ್ಲಿ ಆಟವಾಡುವ ಸಮಯದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದಾಳೆ. ಈ ಮಾಹಿತಿ ತಿಳಿದ ಸೇನಾ ಕಾರ್ಯಪಡೆ, ಪೊಲೀಸರು ಮತ್ತು ಜಿಲ್ಲಾ ಆಡಳಿತಗಾರರು ಸ್ಥಳಕ್ಕೆ ಧಾವಿಸಿ ಬೆಳಿಗ್ಗೆ 9 ಕ್ಕೆ ತಮ್ಮ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಸುಮಾರು 32 ಅಡಿ ಆಳ ಭೂಮಿ ಕೊರೆದ ಇವರು ಭಾನುವಾರ ಆಕೆಯನ್ನು ಜೀವಂತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.

ಆಮ್ಲಜನಕ, ನೀರು ಮತ್ತು ಆಹಾರವನ್ನು ಸುನೀತಾಳಿಗೆ ಪೈಪ್ ಮೂಲಕ ಒದಗಿಸಲಾಗಿತ್ತು. ಆಕೆಯಿಂದ ನಿರಂತರವಾಗಿ ಕೇಳಿ ಬರುತ್ತಿದ್ದ ಧ್ವನಿ ಹಾಗೂ ಅವಳ ಸ್ಥೈರ್ಯದ ಪರಿಣಾಮ ಅವಳನ್ನು ಜೀವಂತವಾಗಿ ಮೇಲೆತ್ತುವಲ್ಲಿ ಈ ಕಾರ್ಯಾಚರಣೆ ಸುಸೂತ್ರವಾಗಿ ನೆರವೇರಿದೆ ಎಂದು ಜಿಲ್ಲಾ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆಯಲ್ಲಿ ಒಂದು ಬೃಹದಾದ ಬಂಡೆ ಅಡ್ಡಿಯಾದ ಪರಿಣಾಮ ಸ್ವಲ್ಪ ಮಟ್ಟಿಗೆ ವಿಳಂಬವಾಯಿತು. ಒಟ್ಟಿನಲ್ಲಿ ಸುನೀತಾಳನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಮೇಲೆತ್ತಲಾಗಿದ್ದು, ಅಷ್ಟರಲ್ಲಾಗಲೇ ಸಮಯ ಭಾನುವಾರ ಮಧ್ಯಾಹ್ನ 3.25 ಆಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾರ್ಯಾಚರಣೆ ವಿವರ :
* ಸುನೀತಾ ಬೆಳಿಗ್ಗೆ 8 ಗಂಟೆಗೆ ಸುಮಾರು 30 ಅಡಿಯಷ್ಟು ಆಳದ ಕೊಳವೆ ಬಾವಿಗೆ ಬಿದ್ದಿದ್ದಳು.
* ಸುಮಾರು 9 ಗಂಟೆಗೆ ಆಕೆಯನ್ನು ಮೇಲೆತ್ತುವ ಕಾರ್ಯಾಚರಣೆ ಆರಂಭವಾಯಿತು.
* ಬೆಳಗ್ಗೆ 10 ಕ್ಕೆ 3 ಭೂಮಿ ಕೊರೆಯುವ ಯಂತ್ರಗಳು ಭೂಮಿಯನ್ನು ಸಮಾನಾಂತರವಾಗಿ ಕೊರೆಯಲು ಪ್ರಾರಂಭಿಸಿದವು
* ಶನಿವಾರ 3 ಗಂಟೆಯ ಸುಮಾರಿಗೆ ಸೇನೆಯವರು 25 ಅಡಿ ಆಳ ಕೊರೆದಿರುವುದಾಗಿ ತಿಳಿಸಿದರು.
* ರಾತ್ರಿ 10 ಕ್ಕೆ ಒಂದು ಬೃಹದಾದ ಕಲ್ಲು ಕಾರ್ಯಚರಣೆಗೆ ಅಡ್ಡಿ ಉಂಟು ಮಾಡಿತು.
* ಭಾನುವಾರ ಸುಮಾರು ಮಧ್ಯಾಹ್ನ 3 ಗಂಟೆ 25 ನಿಮಿಷಕ್ಕೆ ಸುನೀತಾಳನ್ನು ಮೇಲಕ್ಕೆತ್ತಲಾಯಿತು.












Click it and Unblock the Notifications