ಪಿತೃ ಪಕ್ಷ ಪ್ರಯುಕ್ತ ಗೌರಿ ಲಂಕೇಶ್ ಗೆ ಗಯಾದಲ್ಲಿ ಪಿಂಡ ಪ್ರದಾನ
ಗಯಾ (ಬಿಹಾರ), ಅಕ್ಟೋಬರ್ 7: ಪಿತೃ ಪಕ್ಷದ ಪ್ರಯುಕ್ತ ಸಾಮಾಜಿಕ ಕಾರ್ಯಕರ್ತರಾದ ಚಂದನ್ ಸಿಂಗ್ ಅವರು ಗಯಾದಲ್ಲಿ ಕರ್ನಾಟಕದ ಪತ್ರಕರ್ತೆ- ಹೋರಾಟಗಾರ್ತಿ ಗೌರಿ ಲಂಕೇಶ್ ಅವರಿಗೆ ಪಿಂಡ ಪ್ರದಾನ ಮಾಡಿದರು. ಕಳೆದ ವರ್ಷ ಸೆಪ್ಟೆಂಬರ್ ಐದರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಮನೆ ಎದುರೇ ಗೌರಿ ಲಂಕೇಶ್ ಹತ್ಯೆಯಾಗಿತ್ತು.
ಭಾದ್ರಪದ ಕೃಷ್ಣ ಪಕ್ಷದ ಹದಿನೈದು ದಿನದ ಪಿತೃಪಕ್ಷದಲ್ಲಿ ತೀರಿಕೊಂಡವರ ಸ್ಮರಣಾರ್ಥ ಪಿಂಡ ಪ್ರದಾನ ಮಾಡುತ್ತಾರೆ. 1965ರಲ್ಲಿ ಹುತಾತ್ಮರಾದ ಮಾರ್ಷಲ್ ಅರ್ಜುನ್ ಸಿಂಗ್ ಅವರಿಗೂ ಇಡೀ ದೇಶದಾದ್ಯಂತ ಗುಂಪು ಹಲ್ಲೆಯಲ್ಲಿ ಸಾವನ್ನಪ್ಪಿದವರಿಗೂ ಪಿಂಡ ಪ್ರದಾನ ಮಾಡಲಾಯಿತು. ಇದರ ಜತೆಗೆ ಒಳಚರಂಡಿ ಸ್ವಚ್ಛ ಮಾಡುವ ವೇಳೆ ಭಾರತದಲ್ಲಿ ಸಾವನ್ನಪ್ಪಿದ ಸಾವಿರದ ಏಳುನೂರು ಪೌರ ಕಾರ್ಮಿಕರಿಗೂ ಪಿಂಡ ಪ್ರದಾನ ಮಾಡಿದರು ಚಂದನ್.
ವಿಶ್ವದಾದ್ಯಂತ ಮೃತಪಟ್ಟ ಅಪರಿಚಿತರಿಗೆ 2001ರಿಂದ ಚಂದನ್ ರ ತಂದೆ, ಹಿರಿಯ ಪತ್ರಕರ್ತ ಸುರೇಶ್ ನಾರಾಯಣ್ ಈ ಮಾಸದಲ್ಲಿ ಪಿಂಡ ಪ್ರದಾನ ಮಾಡುತ್ತಿದ್ದರು. ನಾಲ್ಕು ವರ್ಷದ ಹಿಂದೆ ಅವರು ತೀರಿಕೊಂಡರು. ಆ ನಂತರ ಪಿತೃ ಪಕ್ಷದಲ್ಲಿ ಈ ರೀತಿ ಸಾಮೂಹಿಕವಾಗಿ ಪಿಂಡ ಪ್ರದಾನ ಮಾಡುವ ಕಾರ್ಯವನ್ನು ಚಂದನ್ ಮುಂದುವರಿಸಿದ್ದಾರೆ.

"ನನ್ನ ತಂದೆ ಹಾಗೂ ಗೌರಿ ಲಂಕೇಶ್ ಇಬ್ಬರೂ ಪತ್ರಕರ್ತರು. ಆಕೆಗೆ ಈ ಕಾರ್ಯ ನಿರ್ವಹಿಸಲು ನಾನು ಸೂಕ್ತ ವ್ಯಕ್ತಿ. ಗೋರಖ್ ಪುರ್ ಆಸ್ಪತ್ರೆಯಲ್ಲಿ ಮೃತಪಟ್ಟ ಅರವತ್ತು ಮಕ್ಕಳಿಗೂ ಸಾಮೂಹಿಕ ಪಿಂಡ ಪ್ರದಾನದ ಮಾಡಲಾಗಿದೆ. ಸಾಮಾನ್ಯವಾಗಿ ಇದರಲ್ಲಿ ರಾಜಕಾರಣಿಗಳು ಒಳಗೊಂಡಿರುವುದಿಲ್ಲ. ಆದರೆ ಈ ವರ್ಷ ವಾಜಪೇಯಿ ಅವರಿಗೆ ಪಿಂಡ ಪ್ರದಾನ ಮಾಡಿದ್ದೇನೆ. ಇವೆಲ್ಲವನ್ನೂ ರಾಮಾನುಜ ಮಠದ ಸ್ವಾಮಿ ವೆಂಕಟೇಶ್ ಮಾಡಿಸಿದ್ದಾರೆ" ಎಂದು ಚಂದನ್ ಹೇಳಿದ್ದಾರೆ.











Click it and Unblock the Notifications