Gautam Adani: ಮುಂಬೈನ ಧಾರಾವಿ ಸ್ಲಂ ಅನ್ನು ಹೊಸ ನಗರವನ್ನಾಗಿ ಪರಿವರ್ತಿಸಲು ಮುಂದಾದ ಗೌತಮ್ ಅದಾನಿ
Gautam Adani: ದೇಶದ ಮಹತ್ವದ ಹಾಗೂ ಹಿಂದುಳಿದ ಪ್ರದೇಗಳಲ್ಲಿ ಒಂದಾಗಿರುವ ಮಹಾರಾಷ್ಟ್ರದ ರಾಜಧಾನಿ ಮುಂಬೈನ ಧಾರಾವಿ ಅಭಿವೃದ್ಧಿಗೆ ಗೌತಮ್ ಅದಾನಿ ಅವರ ಸಂಸ್ಥೆ ನಾಂದಿ ಹಾಡಿದೆ. ಮುಂಬೈನ ಹೃದಯಭಾಗದಲ್ಲಿರುವ ವಿಶ್ವದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ಧಾರಾವಿ ಅಭಿವೃದ್ಧಿಗೆ ಮುಹೂರ್ತ ಕೂಡಿ ಬಂದಿದೆ. ಧಾರಾವಿ ಕೊಳಗೇರಿ ಪ್ರದೇಶವು 641 ಎಕರೆ ವ್ಯಾಪ್ತಿಯಲ್ಲಿದ್ದು. ಈ ಭಾಗದಲ್ಲಿ ಒಂದು ಮಿಲಿಯನ್ಗಿಂತಲೂ ಹೆಚ್ಚು ಜನರು ನೆಲೆ ಕಂಡುಕೊಂಡಿದ್ದಾರೆ. ಉದ್ಯಮಶೀಲತಾ ಮನೋಭಾವ ಹಾಗೂ ಸಿನಿಮೀಯ ಕಾರಣಗಳಿಗೆ ಜಾಗತಿಕವಾಗಿ ಹೆಸರುವಾಸಿಯಾಗಿರುವ ಧಾರಾವಿ ಪ್ರದೇಶವನ್ನು ಭಾರತದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ನೇತೃತ್ವದಲ್ಲಿ ಪರಿವರ್ತನಾತ್ಮಕವಾಗಿ ಬದಲಾವಣೆ ಮಾಡುವುದಕ್ಕೆ ಕಾಲ ಕೂಡಿ ಬಂದಿದೆ.
ಅದಾನಿ ಗ್ರೂಪ್ನ ರಿಯಲ್ ಎಸ್ಟೇಟ್ ವಿಭಾಗವಾಗಿರುವ ಅದಾನಿ ರಿಯಾಲ್ಟಿಯಿಂದ ಧಾರಾವಿಯನ್ನು ಸಂಪೂರ್ಣವಾಗಿ ಬದಲಾಯಿಸುವ ಯೋಜನೆಯನ್ನು ರೂಪಿಸಿಕೊಳ್ಳಲಾಗಿದೆ. ಬರೋಬ್ಬರಿ $11 ಬಿಲಿಯನ್ ಬೃಹತ್ ಮೊತ್ತದ ಪುನರಾಭಿವೃದ್ಧಿ ಯೋಜನೆಯನ್ನು ರೂಪಿಸಲಾಗಿದೆ. ವಾಣಿಜ್ಯ ಕಚೇರಿಗಳು, ಕೈಗಾರಿಕಾ ಕೇಂದ್ರಗಳು, ಐಷಾರಾಮಿ ಅಪಾರ್ಟ್ಮೆಂಟ್ಸ್ಗಳು, ಶೈಕ್ಷಣಿಕ ಕೇಂದ್ರಗಳು, ಆಸ್ಪತ್ರೆಗಳು, ಪಾರ್ಕ್ ಸೇರಿದಂತೆ ಧಾರಾವಿ ಪ್ರದೇಶವನ್ನು ಮುಂಬೈನ ಪ್ರಮುಖ ಪ್ರದೇಶಗಳಿಗೆ ಸಂಪರ್ಕಿಸುವ ವಿಶೇಷವಾದ ಸಾರಿಗೆ ವ್ಯವಸ್ಥೆಯನ್ನೂ ರೂಪಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಅಲ್ಲದೇ ಇಲ್ಲಿ ನೆಲೆಸಿರುವ ಸಾವಿರಾರು ನಿವಾಸಿಗಳಿಗೆ ಆಧುನಿಕ ವಸತಿಯನ್ನು ಕಲ್ಪಿಸುವ ದೃಷ್ಟಿಕೋನವನ್ನೂ ಈ ಯೋಜನೆ ಒಳಗೊಂಡಿದೆ.

ಅದಾನಿ ರಿಯಾಲ್ಟಿಗೆ ಗೇಮ್-ಚೇಂಜರ್ ಅವಕಾಶ
ಧಾರಾವಿಯ ಪುನರಾಭಿವೃದ್ಧಿ ಕೇವಲ ನಿರ್ಮಾಣ ಯೋಜನೆ ಆಗಿರದೆ ಅದಕ್ಕಿಂತಲೂ ಹೆಚ್ಚಿನದಾಗಿದೆ. ಇದು ಭಾರತದ ರಿಯಲ್ ಎಸ್ಟೇಟ್ ವಲಯದಲ್ಲಿ ಅದಾನಿ ರಿಯಾಲ್ಟಿಯ ಸ್ಥಾನವನ್ನು ಮರು ವ್ಯಾಖ್ಯಾನಿಸಬಹುದಾದ ದೊಡ್ಡ ಯೋಜನೆಯಾಗಿದೆ. ಅಂದಾಜಿನ ಪ್ರಕಾರ, ಈ ಯೋಜನೆಯು $14 ಶತಕೋಟಿ ಆದಾಯ ಮತ್ತು $3 ಶತಕೋಟಿ ಲಾಭವನ್ನು ಗಳಿಸಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಇದು ಅದಾನಿ ರಿಯಾಲ್ಟಿಯನ್ನು ನಗರ ಪರಿವರ್ತನೆಯಲ್ಲಿ ಶಕ್ತಿ ಕೇಂದ್ರವಾಗಿ ಬದಲಾಯಿಸಲಿದೆ ಎಂದು ಹೇಳಲಾಗಿದೆ.
ಅದಾನಿ ರಿಯಾಲ್ಟಿ ಈಗಾಗಲೇ ದೇಶದಲ್ಲಿ ಸಾಕಷ್ಟು ಹೆಸರು ಮಾಡಿದೆ. ಈಗಾಗಲೇ ಸ್ಥಗಿತಗೊಂಡಿದ್ದ ಅಥವಾ ತಡವಾಗುತ್ತಿದ್ದ ಹಿಂದುಳಿದಿರುವ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಮುಂಬೈನಲ್ಲಿ ಪ್ರಮುಖ ಸರ್ಕಾರಿ ಒಪ್ಪಂದಗಳನ್ನು ಮಾಡಿಕೊಂಡಿದೆ. ಅಲ್ಲದೇ ನಗರದ ಹೊಸ ವಿಮಾನ ನಿಲ್ದಾಣವನ್ನು ನಿರ್ಮಿಸುತ್ತಿದೆ ಮತ್ತು ಅರೇಬಿಯನ್ ಸಮುದ್ರವನ್ನು ಕಾಣಲು ಅನುಕೂಲವಾಗುವ ಪ್ರದೇಶದಲ್ಲಿ ಉನ್ನತ ಮಟ್ಟದ ವಾಣಿಜ್ಯ ಸಂಕೀರ್ಣವನ್ನು ಅಭಿವೃದ್ಧಿ ಮಾಡುತ್ತಿದೆ. ಇದೀಗ ಧಾರಾವಿ ಯೋಜನೆಯು ಇಲ್ಲಿಯವರೆಗಿನ ಅತ್ಯಂತ ದೊಡ್ಡ ಮತ್ತು ಅತ್ಯಂತ ಉನ್ನತ ಮಟ್ಟದ ಪ್ಲ್ಯಾನ್ ಆಗಿದೆ ಎಂದೇ ಗುರುತಿಸಲಾಗಿದೆ.
ಭಾರತದ ನಗರಾಭಿವೃದ್ಧಿಯಲ್ಲಿ ಮಹತ್ವದ ಹೆಜ್ಜೆ
ಧಾರಾವಿ ಪುನರಾಭಿವೃದ್ಧಿಯಿಂದ ಭಾರತದಲ್ಲಿ ಹೊಸ ಅಧ್ಯಾಯ ಶುರುವಾಗಲಿದೆ ಎಂದೇ ಹೇಳಲಾಗುತ್ತಿದೆ. ನವೀಕರಿಸಬಹುದಾದ ಮೂಲಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಈ ಯೋಜನೆಯಿಂದಾಗಿ ಈಗಾಗಲೇ ಈ ಭಾಗದಲ್ಲಿ ನೆಲೆಸಿರುವ ನಿವಾಸಿಗಳಿಗೆ ಉತ್ತಮ ಗುಣಮಟ್ಟದ ಜೀವನ ನಡೆಸುವ ಭರವಸೆಯನ್ನು ನೀಡುತ್ತದೆ. ಸ್ವಚ್ಛ, ವಸತಿ, ಆರೋಗ್ಯ ರಕ್ಷಣೆ, ಶಿಕ್ಷಣ, ಉದ್ಯೋಗಗಳು ಹಾಗೂ ಆಧುನಿಕ ಮೂಲಸೌಕರ್ಯ ಸೇವೆಗಳು ಲಭ್ಯವಾಗಲಿವೆ. ಇದು ದೊಡ್ಡ ಪ್ರಮಾಣದ ಹೂಡಿಕೆ ಮತ್ತು ನಗರದ ಅಭಿವೃದ್ಧಿಗೆ ಭಾರೀ ಕೊಡುಗೆಯನ್ನು ಕೊಡಲಿದೆ. ಇದರಿಂದ ದೀರ್ಘಾವಧಿಯ ಆರ್ಥಿಕ ಬೆಳವಣಿಗೆಗೆ ಉತ್ತೇಜನ ಸಿಗಲಿದೆ.
ಅದಾನಿ ಗ್ರೂಪ್ ವಿಧಾನವು ರಿಯಲ್ ಎಸ್ಟೇಟ್ ಮೀರಿದೆ. ಆಧುನಿಕ ನಗರ ಅಭಿವೃದ್ಧಿಯೊಂದಿಗೆ ಹೊಂದಾಣಿಕೆಯಾಗುವ ಸ್ವಾವಲಂಬಿ, ಸುಂದರ ಪರಿಸರ ವ್ಯವಸ್ಥೆಯನ್ನು ರಚಿಸುವುದರ ಮೇಲೆ ಗಮನ ಕೇಂದ್ರೀಕರಿಸಲಾಗಿದೆ. ಧಾರಾವಿಯಲ್ಲಿ ನೆಲೆಸಿರುವವರು ಹಾಗೂ ಅಲ್ಲಿನ ಪರಂಪರೆಯನ್ನು ಹೊಸ ಮಾದರಿಯೊಂದಿಗೆ ಸಂರಕ್ಷಿಸುವುದನ್ನು ಖಚಿತಪಡಿಸುತ್ತದೆ.
ಈ ಯೋಜನೆಯು ಯಶಸ್ವಿಯಾದರೆ, ಸುಸ್ಥಿರ ಪುನರಾಭಿವೃದ್ಧಿಗೆ ರಾಷ್ಟ್ರೀಯ ಮಾದರಿಯಾಗಿ ಬದಲಾಗಲಿದೆ. ಖಾಸಗಿ ಬಂಡವಾಳ ಮತ್ತು ಸಾರ್ವಜನಿಕ ದೃಷ್ಟಿಕೋನವು ಸಮುದಾಯಗಳನ್ನು ಉನ್ನತೀಕರಿಸಲು ಹಾಗೂ ನಗರ ಪ್ರದೇಶಗಳನ್ನು ಹೇಗೆ ಬದಲಾಯಿಸಬಹುದು ಎನ್ನುವುದಕ್ಕೆ ಹೊಸ ಮಾದರಿ ಆಗಲಿದೆ ಎಂದೇ ನಿರೀಕ್ಷೆ ಮಾಡಲಾಗಿದೆ.












Click it and Unblock the Notifications