2022ರಲ್ಲಿ ಕಾಂಗ್ರೆಸ್ ತೊರೆದ ಹಿರಿಯ ನಾಯಕರ ಪಟ್ಟಿ ಇಲ್ಲಿದೆ
ಜಿ -23 ನಾಯಕ ಗುಲಾಂ ನಬಿ ಆಜಾದ್ ಶುಕ್ರವಾರ ತನ್ನ ಎಲ್ಲಾ ಕಾಂಗ್ರೆಸ್ ಪಕ್ಷದ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಕಾಂಗ್ರೆಸ್ನಲ್ಲಿ ಆಂತರಿಕ ಕಲಹಗಳು ಭುಗಿಲೆದ್ದಿರುವುದು ಗೋಚರಿಸುತ್ತದೆ. ಕೇವಲ ಗುಲಾಂ ನಬಿ ಆಜಾದ್ ಅವರ ರಾಜೀನಾಮೆಯಿಂದ ಕಾಂಗ್ರೆಸ್ನಲ್ಲಿ ಆಂತರಿಕ ವಲಯದಲ್ಲಿ ಮನಸ್ತಾಪಗಳು ಕೈ ಮೀರಿ ಹೋಗಿವೆ ಎಂದೇಳಲು ಸಾಧ್ಯವಿಲ್ಲ. ಯಾಕೆಂದರೆ 2022ರಲ್ಲಿ ಹಲವಾರು ಹಿರಿಯ ನಾಯಕರು 'ಕೈ' ಬಿಟ್ಟಿದ್ದಾರೆ.
2022ರಲ್ಲಿ ಇಲ್ಲಿಯವರೆಗೆ ಕಾಂಗ್ರೆಸ್ನಿಂದ ಹೊರಬಂದ ನಾಯಕ ಪಟ್ಟಿ ಇಲ್ಲಿದೆ. ಹಾರ್ದಿಕ್ ಪಟೇಲ್, ಸುನಿಲ್ ಜಾಖರ್, ಅಶ್ವನಿ ಕುಮಾರ್, ಆರ್ಪಿಎನ್ ಸಿಂಗ್, ಕಪಿಲ್ ಸಿಬಲ್, ಕುಲದೀಪ್ ಬಿಷ್ಣೋಯ್, ಆನಂದ್ ಶರ್ಮಾ, ರಾಜು ಪರಮಾರ್, ನರೇಶ್ ರಾವಲ್, ಶ್ರವಣ್ ದಾಸೋಜು, ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ, ಜೈವೀರ್ ಶೇರ್ಗಿಲ್ ಈ ಹಿಂದೆ ಕಾಂಗ್ರೆಸ್ ಪಕ್ಷ ತೊರೆದಿದ್ದರೆ ಇಂದು ಗುಲಾಂ ನಬಿ ಆಜಾದ್ ಕಾಂಗ್ರೆಸ್ಗೆ ಬಗ್ಗೆ ಆರೋಪ ಪಟ್ಟಿಗಳ ಸರಮಾಲೆಯನ್ನೇ ಪತ್ರದ ಮೂಲಕ ನೀಡಿ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ಬಹುತೇಕ ನಾಯಕರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಬಂಡಾಯ ಮತ್ತು ರಾಜೀನಾಮೆ- ಗುಲಾಂ ನಬಿ ಆಜಾದ್ ರಾಜಕೀಯ ಹಾದಿ
ಕಾಂಗ್ರೆಸ್ನ ವಿರುದ್ಧ ಕೋಪಗೊಂಡ ನಾಯಕರು ಜಿ -23 ಎಂಬ ಗುಂಪನ್ನು ರಚಿಸಿದ್ದಾರೆ. ಈ ಗುಂಪು ಪಕ್ಷದಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆಗೆ ಒತ್ತಾಯಿಸುತ್ತಿದ್ದಾರೆ. ಇದರಲ್ಲಿ ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್, ಆನಂದ್ ಶರ್ಮಾ ಮುಂತಾದ ಹಿರಿಯ ನಾಯಕರು ಸೇರಿದ್ದರು. ಆದರೆ, ಈಗ ಅದರ ಬಹುತೇಕ ನಾಯಕರು ಪಕ್ಷ ತೊರೆದಿದ್ದಾರೆ.
ನೂತನ ಅಧ್ಯಕ್ಷರ ಆಯ್ಕೆಗೆ ಕಾಂಗ್ರೆಸ್ ಹೈಕಮಾಂಡ್ ಇತ್ತೀಚೆಗೆ ಒಪ್ಪಿಗೆ ನೀಡಿತ್ತು. ಇನ್ನೆರಡು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಜಿ-23 ಬಣದ ಅಸಮಾಧಾನಕ್ಕೆ ತೆರೆ ಬೀಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದಕ್ಕೂ ಮುನ್ನವೇ ಕಾಂಗ್ರೆಸ್ ಭಾರೀ ಮುಖಭಂಗ ಅನುಭವಿಸಿದೆ. ಶುಕ್ರವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ತೊರೆಯುವುದಾಗಿ ಘೋಷಿಸಿದರು. ಅವರು ಪಕ್ಷದ ಎಲ್ಲಾ ಸ್ಥಾನಗಳಿಗೆ ಮತ್ತು ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ಮೊದಲಿನಿಂದಲೂ, ಆಜಾದ್ ಕಾಂಗ್ರೆಸ್ನ ಕೋಪಗೊಂಡ ಬಣವಾದ ಜಿ -23 ನ ಭಾಗವಾಗಿದ್ದರು.
ಫ್ರೀ ಸಹಾಯವಾಣಿ ಆರಂಭಿಸಿ ಸುದ್ದಿಯಾಗಿದ್ದ ಜೈವೀರ್
ನಬಿ ಅವರು ನೀಡಿದ ಕಾರಣಗಳೇನೇ ನೀಡಿ ಇದೇ ಬುಧವಾರ ಕಾಂಗ್ರೆಸ್ ನಾಯಕ ಜೈವೀರ್ ಶೆರ್ಗಿಲ್ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಿರ್ಣಯಗಳು ಸಾರ್ವಜನಿಕ ಮತ್ತು ದೇಶದ ಹಿತಾಸಕ್ತಿಗಳಿಗಾಗಿ ಅಲ್ಲ ಎಂದು ಹೇಳಲು ನನಗೆ ನೋವಾಗಿದೆ. ಬದಲಿಗೆ ಇದು ವ್ಯಕ್ತಿಗಳ ಸ್ವ-ಸೇವೆಯ ಹಿತಾಸಕ್ತಿಗಳಿಂದ ಪ್ರಭಾವಿತವಾಗಿರುತ್ತದೆ ಮತ್ತು ನೆಲದ ವಾಸ್ತವ ಸಂಗತಿಗಳನ್ನು ಕಡೆಗಣಿಸುತ್ತದೆ ಎಂದು ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರಗದಲ್ಲಿ ಶೆರ್ಗಿಲ್ ಹೇಳಿದ್ದಾರೆ. ಸುಪ್ರೀಂಕೋರ್ಟ್ನಲ್ಲಿ ವಕೀಲರಾಗಿರುವ ಶೆರ್ಗಿಲ್ ಪಕ್ಷದ ಕಾರ್ಯಕರ್ತರಿಗೆ ಕಾನೂನು ಸಹಾಯ ನೀಡುವುದಕ್ಕಾಗಿ 24x 7 ಕಾನೂನು ಸಹಾಯಿ ಟೋಲ್ ಫ್ರೀ ಸಹಾಯವಾಣಿ ಆರಂಭಿಸಿ ಸುದ್ದಿಯಾಗಿದ್ದರು.
ಟಿಆರ್ಎಸ್ ಮೇಲೆ ಆರೋಪ
ಇನ್ನೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಎರಡು ದಿನಗಳ ನಂತರ ದಾಸೋಜು ಶ್ರವಣ್ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಟಿಆರ್ಎಸ್ ನಾಯಕರು ರಾಜ್ಯವನ್ನು ಲೂಟಿ ಮಾಡುವಲ್ಲಿ ನಿರತರಾಗಿದ್ದಾರೆ ಎಂದು ಶ್ರವಣ್ ಆರೋಪಿಸಿದ್ದರು. ಟಿಆರ್ಎಸ್ ರಾಜ್ಯವನ್ನು ಸಾಲದ ಬಲೆಗೆ ತಳ್ಳಿದೆ ಎಂದು ಅವರು ಆರೋಪಿಸಿದ್ದರು.
ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ಎ. ರೇವಂತ್ ರೆಡ್ಡಿ ಅವರ ನೇತೃತ್ವದಲ್ಲಿ ಪಕ್ಷದಲ್ಲಿ ಸಂಪೂರ್ಣ ಅವ್ಯವಸ್ಥೆ ಇದೆ ಎಂದು ಆರೋಪಿಸಿದ ಅವರು ಸಂಘಟನೆಯಲ್ಲಿ ಗುಲಾಮನಂತೆ ಬದುಕಲು ನಾನು ಸಿದ್ಧನಿಲ್ಲ ಮತ್ತು ಆದ್ದರಿಂದ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದರು.
'ಕೈ' ಬಿಟ್ಟ ಹಾರ್ದಿಕ್ ಪಟೇಲ್
ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ಗುಜರಾತ್ನ ಮಾಜಿ ಸಚಿವ ನರೇಶ್ ರಾವಲ್ ಮತ್ತು ಮಾಜಿ ರಾಜ್ಯಸಭಾ ಸದಸ್ಯ ರಾಜು ಪರ್ಮಾರ್ ಅವರು ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರಿದರು. ಇಬ್ಬರೂ ನಾಯಕರು ದಶಕಗಳ ಕಾಲ ಕಾಂಗ್ರೆಸ್ನೊಂದಿಗೆ ಇದ್ದರು. ಮಾತ್ರವಲ್ಲದೆ ಈ ನರೇಶ್ ರಾವಲ್, ರಾಜು ಪರ್ಮಾರ್ ಅವರ ಬೆಂಬಲಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಆಡಳಿತ ಪಕ್ಷಕ್ಕೆ ಸೇರ್ಪಡೆಗೊಂಡರು. 1988 ಮತ್ತು 2006ರ ನಡುವೆ ಮೂರು ಅವಧಿಗೆ ಪರ್ಮಾರ್ ಗುಜರಾತ್ನಿಂದ ಕಾಂಗ್ರೆಸ್ ರಾಜ್ಯಸಭಾ ಸದಸ್ಯರಾಗಿದ್ದರು. ದಲಿತ ಸಮುದಾಯದ ಪ್ರಮುಖ ನಾಯಕರಾಗಿದ್ದ ಅವರು ಎಸ್ಸಿ/ಎಸ್ಟಿ ರಾಷ್ಟ್ರೀಯ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಗುಜರಾತ್ ಘಟಕದ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಹಾರ್ದಿಕ್ ಪಟೇಲ್ ಜೂನ್ನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು.
ಮೇ ತಿಂಗಳಲ್ಲಿ ಕಪಿಲ್ ಸಿಬಲ್ ರಾಜೀನಾಮೆ
ಕಾಂಗ್ರೆಸ್ ಶಾಸಕ ಕುಲ್ದೀಪ್ ಬಿಷ್ಣೋಯ್ ಹರ್ಯಾಣ ವಿಧಾನಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡರು. ಇವರು ಕಾಂಗ್ರೆಸ್ ರಾಜೀವ್ ಗಾಂಧಿ, ಇಂದಿರಾ ಗಾಂಧಿ ಅವರ ಕಾಲದಲ್ಲಿದ್ದ ತನ್ನ ಸಿದ್ಧಾಂತದಿಂದ ವಿಮುಖವಾಗಿದೆ ಎಂದು ಆರೋಪಿಸಿದ್ದಾರೆ.
ಕಪಿಲ್ ಸಿಬಲ್ ಮೇ 16 ರಂದು ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದಾರೆ. ಆರು ವರ್ಷಗಳ ಹಿಂದೆಯೇ ಕಪಿಲ್ ಸಿಬಲ್ ಯುಪಿಯಿಂದ ರಾಜ್ಯಸಭೆಗೆ ಬಂದಿದ್ದರು, ಆದರೆ ಆ ಸಮಯದಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು ಮತ್ತು ಎಸ್ಪಿ ಅವರನ್ನು ಬೆಂಬಲಿಸಿತ್ತು. ಆದರೆ ಸಿಬಲ್ ಕಾಂಗ್ರೆಸ್ ತೊರೆದಿದ್ದಾರೆ.