ಹಿಮ ಕುಸಿತ: ಇನ್ನೂ ನಾಲ್ವರು ಸೈನಿಕರ ಶವ ಪತ್ತೆ
ಜಮ್ಮು ಕಾಶ್ಮೀರದ ಗುರೇಜ್ ಸೆಕ್ಟರ್ ನಲ್ಲಿ ಕಾವಲು ಕಾಯುತ್ತಿದ್ದ 51 ಆರ್ ಆರ್ ಸೇನಾ ಶಿಬಿರದ ಮೇಲೆ ಗುರುವಾರ ಬೆಳಗ್ಗೆ ಏಕಾಏಕಿ ಅಪಾರ ಹಿಮ ಕುಸಿತವಾಗಿದ್ದರಿಂದ ಈ ದುರ್ಘಟನೆ ಸಂಭವಿಸಿತ್ತು.
ಶ್ರೀನಗರ, ಜನವರಿ 27: ಕಾಶ್ಮೀರದಲ್ಲಿ ಗುರುವಾರ ಬೆಳಗ್ಗೆ ಉಂಟಾಗಿದ್ದ ಹಿಮಕುಸಿತಕ್ಕೆ ಸಿಲುಕಿ ಮೃತಪಟ್ಟಿರುವ ಸೈನಿಕರ ಸಂಖ್ಯೆ 14ಕ್ಕೇರಿದೆ. ಘಟನೆ ನಡೆದಿದ್ದ ಗುರೇಜ್ ಸೆಕ್ಟರ್ ನಲ್ಲಿ ಮೃತದೇಹಗಳಿಗಾಗಿ ಹುಡುಕಾಟ ನಡೆಸಿರುವ ಭಾರತೀಯ ಸೇನೆ ಶುಕ್ರವಾರ ಇನ್ನೂ ನಾಲ್ವರ ಸೈನಿಕರ ಶವಗಳನ್ನು ಹೊರತಗೆದಿದೆ.
ಜಮ್ಮು ಕಾಶ್ಮೀರದ ಗುರೇಜ್ ಸೆಕ್ಟರ್ ನಲ್ಲಿ ಕಾವಲು ಕಾಯುತ್ತಿದ್ದ 51 ಆರ್ ಆರ್ ಸೇನಾ ಶಿಬಿರದ ಮೇಲೆ ಗುರುವಾರ ಬೆಳಗ್ಗೆ ಏಕಾಏಕಿ ಅಪಾರ ಹಿಮ ಕುಸಿತವಾಗಿದ್ದರಿಂದ ಈ ದುರ್ಘಟನೆ ಸಂಭವಿಸಿತ್ತು.

ಶೋಧ ಕಾರ್ಯಚಾರಣೆ ನಡೆಸಿದ್ದ ಸೇನಾ ಪಡೆಗಳಿಗೆ ಗುರುವಾರ ರಾತ್ರಿ ಹೊತ್ತಿಗೆ ಒಟ್ಟು 10 ಸೈನಿಕರ ಶವಗಳು ಸಿಕ್ಕಿದ್ದವು. ಶುಕ್ರವಾರ ಬೆಳಗ್ಗೆ ಮತ್ತೆ ಶೋಧ ಕಾರ್ಯ ಮುಂದುವರಿದಿದ್ದು, ಇನ್ನೂ ನಾಲ್ವರು ಸೈನಿಕರ ಮೃತದೇಹಗಳು ಪತ್ತೆಯಾಗಿವೆ.
ಇದಲ್ಲದೆ, ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿರುವ ಮನೆಯೊಂದು ಈ ಹಿಮ ಕುಸಿತಕ್ಕೆ ಆಹುತಿಯಾಗಿದೆ ಎಂದು ಸೇನಾ ವಕ್ತಾರರೊಬ್ಬರು ವಿವರಿಸಿದ್ದಾರೆ. ಆ ಮನೆಯಲ್ಲಿ ಲೋನ್ (55), ಅವರ ಪತ್ನಿ ಅಜಿಜಿ (50), ಅವರ ಮಗ ಇರ್ಭಾನ್ (22) ಹಾಗೂ ಅವರ ಮಗಳು ಗುಲ್ಶಾನ್ (19) ಅವರು ಟನ್ ಗಟ್ಟಲೆ ಹಿಮದ ಅಡಿಯಲ್ಲಿ ಸಿಲುಕಿದ್ದಾರೆ. ಆದರೆ ಇವರಲ್ಲಿ ಯಾರು ಬದುಕಿದ್ದಾರೆಂಬುದು ಇನ್ನು ಸ್ಪಷ್ಟವಾಗಿಲ್ಲ. ಶೋಧ ಕಾರ್ಯ ನಡೆದಿದೆ. ಈ ಶೋಧದಲ್ಲಿ ಲೋನ್ ಅವರ ಮತ್ತೊಬ್ಬ ಪುತ್ರ ರಿಯಾಜ್ ಅಹ್ಮದ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.
ಬೆಳಗಾವಿಯ ಯೋಧ ಬಚಾವ್ : ಏತನ್ಮಧ್ಯೆ, ಇಬ್ಬರು ಸೈನಿಕರು ಈ ಕರಾಳ ಘಟನೆಯಲ್ಲಿ ಬುದುಕುಳಿದಿದ್ದಾರೆಂದು ಸೇನೆ ತಿಳಿಸಿದೆ. ಇವರಲ್ಲೊಬ್ಬರು ಬೆಳಗಾವಿಯವರು ಎಂದು ಹೇಳಲಾಗಿದೆ.












Click it and Unblock the Notifications