ಜೀವನ್ಮರಣ ಹೋರಾಟ ನಡೆಸುತ್ತಿರುವ ಕರುಣಾನಿಧಿ ಆಸೆ ಕೊನೆಗೂ ಕೈಗೂಡಿತು!
ಚೆನ್ನೈ, ಜುಲೈ 31: ಹಿಂದೂ ದೇವಾಲಯಗಳಲ್ಲಿನ ಪೂಜೆಯನ್ನು ಬ್ರಾಹ್ಮಣ ಸಮುದಾಯದವರು ಮಾತ್ರ ಯಾಕೆ ಮಾಡಬೇಕು? ಬೇರೆ ಜಾತಿಯವರು ಪೂಜೆ ಮಾಡಿದರೆ ದೇವರು ಮುನಿಸಿಕೊಳ್ಳುತ್ತಾನಾ ಅಥವಾ ಪ್ರಳಯವಾದೀತಾ ಎನ್ನುವ ಚರ್ಚೆ, ಬರೀ ಕರ್ನಾಟಕದಲ್ಲಿ ಮಾತ್ರವಲ್ಲ, ತಮಿಳುನಾಡಿನಲ್ಲೂ ಹಿಂದಿನಿಂದಲೂ ಇದ್ದದ್ದು. ಮಾಜಿ ಸಿಎಂ ಕರುಣಾನಿಧಿಯವರೇ ಈ ವಿಚಾರದಲ್ಲಿ ಸಕ್ರಿಯರಾಗಿದ್ದರು.
ವಿಷಮ ಸ್ಥಿತಿಯಲ್ಲಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಪೆರಿಯಾರ್ ಚಳುವಳಿಯಲ್ಲಿ ಸಕ್ರಿಯರಾಗಿದ್ದ ಕರುಣಾನಿಧಿಯವರ ಬ್ರಾಹ್ಮಣೇತರರನ್ನು ಅರ್ಚಕರನ್ನಾಗಿ ನೇಮಿಸಬೇಕು ಎನ್ನುವ ಆಸೆ ಈಗ ಕೊನೆಗೂ ಕೈಗೂಡಿದೆ. ತಾವು ಅಧಿಕಾರದಲ್ಲಿದ್ದಾಗ, ಮುಜರಾಯಿ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ಬ್ರಾಹ್ಮಣರೇತರರನ್ನು ನೇಮಿಸುವ ಸಂಬಂಧ ಕರುಣಾನಿಧಿ ಅಧಿಸೂಚನೆ ಹೊರಡಿಸಿದ್ದರು.
ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ: ಅಭಿಮಾನಿಗಳಲ್ಲಿ ಹರ್ಷ
ಪಕ್ಕಾ ನಾಸ್ತಿಕರ ಸಾಲಿನಲ್ಲಿ ನಿಲ್ಲುವ ಕರುಣಾನಿಧಿ, ರಾಮಸೇತು ವಿಷಯಕ್ಕೆ ಸಂಬಂಧಿಸಿದಂತೆ ಹಿಂದೂಗಳ ಭಾವನೆಯನ್ನು ಅಣಕಿಸುವ ಕೆಲಸವನ್ನು ಬೇಕಾದಷ್ಟು ಮಾಡಿದ್ದವರು. 2006ರಲ್ಲಿ ಬ್ರಾಹ್ಮಣೇತರರನ್ನು ಅರ್ಚಕರನ್ನಾಗಿ ನೇಮಿಸುವ ತಮಿಳುನಾಡು ಸರಕಾರ ಹೊರಡಿಸಿದ್ದ ಅಧಿಸೂಚನೆಗೆ ಸುಪ್ರೀಂಕೋರ್ಟ್ 2015ರಲ್ಲಿ ಅಸ್ತು ಎಂದಿತ್ತು.
ಅತ್ಯಂತ ಸ್ಪಷ್ಟವಾಗಿ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ, ಆಗಮ ಶಾಸ್ತ್ರವನ್ನು ಚೆನ್ನಾಗಿ ಅಧ್ಯಯನ ಮಾಡಿದ ಮತ್ತು ದೇವಾಲಯಗಳ ಹಿಂದಿನಿಂದಲೂ ನಡೆದುಕೊಂಡ ಬಂದಂತಹ ಪದ್ದತಿ ಮತ್ತು ಪರಿಶುದ್ಧತೆಯನ್ನು ಕಾಪಾಡಲು ಅರ್ಹನಾದ ಯಾರಾದರೂ, ಅದು ಯಾವುದೇ ಜಾತಿಯವರಾಗಿರಲಿ ಅಂತಹ ವ್ಯಕ್ತಿಯನ್ನು ಅರ್ಚಕರನ್ನಾಗಿ ನೇಮಕ ಮಾಡಬಹುದು ಎನ್ನುವ ಆದೇಶವನ್ನು ನೀಡಿತ್ತು.
ಕರುಣಾನಿಧಿ ಆರೋಗ್ಯ ಸ್ಥಿತಿ ಗಂಭೀರ: ಆಸ್ಪತ್ರೆ ಸುತ್ತಮುತ್ತ ಬಿಗಿಭದ್ರತೆ
ಅದರಂತೇ, ತರಬೇತಿ ಕೇಂದ್ರವನ್ನು ತಮಿಳುನಾಡು ಸರಕಾರ ಆರಂಭಿಸಿತ್ತು. ಅದರಲ್ಲಿ 24 ದಲಿತರೂ ಸೇರಿ 206 ಮಂದಿ ಅಧ್ಯಯನ ನಡೆಸುತ್ತಿದ್ದರು ಮತ್ತು ಆಗಮಶಾಸ್ತ್ರದ ಬಗ್ಗೆ ಸಂಪೂರ್ಣ ಅಭ್ಯಾಸ ನಡೆಸಿ ಉತ್ತೀರ್ಣರಾಗಿದ್ದರು. ಆದರೂ, ಸರಕಾರ ಯಾವುದೇ ದೇವಾಲಯಗಳಿಗೆ ಇವರನ್ನು ನೇಮಿಸಿರಲಿಲ್ಲ.
ಇತ್ತೀಚೆಗೆ, ತಮಿಳುನಾಡು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಮುಜರಾಯಿ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಿಗೆ ಅರ್ಚಕರನ್ನು ನೇಮಿಸುವ ಸಂಬಂಧ ಅರ್ಜಿಯನ್ನು ಆಹ್ವಾನಿಸಿತ್ತು. ಅರ್ಜಿ ಸಲ್ಲಿಸಿದವರ ಪೈಕಿ ಮೂವರು ಬ್ರಾಹ್ಮಣೇತರರಾಗಿದ್ದರು. ಅವರಲ್ಲಿ ಒಬ್ಬರನ್ನು ಅರ್ಚಕ ಹುದ್ದೆಗೆ ಸರಕಾರ ನೇಮಿಸಿತ್ತು.
ನೇಮಕಗೊಂಡ ಬ್ರಾಹ್ಮಣೇತರ ಅರ್ಚಕರನ್ನು ಮಧುರೈನ ತಲ್ಲಾಕುಲಂ ಅಯ್ಯಪ್ಪ ದೇವಸ್ಥಾನಕ್ಕೆ ಅರ್ಚಕರನ್ನಾಗಿ ನೇಮಕ ಮಾಡಲಾಗಿದೆ. ಆ ಮೂಲಕ, ದೇವಾಲಯಗಳಿಗೆ ಬ್ರಾಹ್ಮಣೇತರ ಅರ್ಚಕರನ್ನು ನೇಮಿಸ ಬೇಕು ಎನ್ನುವ ಕರುಣಾನಿಧಿ ಆಸೆ ಕೈಗೂಡಿದಂತಾಗಿದೆ.