ಮುಂಗಾರು 2021; ಕರ್ನಾಟಕದಲ್ಲಿ ಮುಂಗಾರು ಮಳೆ ಆರಂಭ ಯಾವಾಗ?
ನವದೆಹಲಿ, ಜೂನ್ 03: ಗುರುವಾರದಿಂದ ಕೇರಳದಲ್ಲಿ ಮುಂಗಾರು ಆರಂಭವಾಗಿದ್ದು, ಶುಕ್ರವಾರದ ನಂತರ ಮುಂಗಾರು ಮಳೆ ಚುರುಕುಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಜೂನ್ 3ರಂದು ಮುಂಗಾರಿಗೆ ವಾತಾವರಣ ಪ್ರಶಸ್ತವಾಗಿದ್ದು, ಕೇರಳ ಕರಾವಳಿ ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಇಲಾಖೆಯ ನಿರ್ದೇಶಕ ಡಾ. ಮೃತ್ಯುಂಜಯ ಮೋಹಪಾತ್ರ ತಿಳಿಸಿದ್ದರು. ಮುಂಗಾರು ಪ್ರಭಾವದಿಂದಾಗಿ ಕೇರಳದಲ್ಲಿ ಸಾಕಷ್ಟು ಮಳೆಯಾಗಲಿದೆ ಎಂದು ತಿಳಿಸಿದ್ದಾರೆ.
ಹೇಗಿರಲಿದೆ ಈ ಬಾರಿಯ ಮುಂಗಾರು? ಹವಾಮಾನ ಇಲಾಖೆ ಮಾಹಿತಿ
ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳವರೆಗೆ ಮುಂಗಾರು ಮಳೆಯಾಗಲಿದ್ದು, ಈ ವರ್ಷ ಮಳೆ ಸಾಮಾನ್ಯವಾಗಿರುವುದಾಗಿ ಹವಾಮಾನ ಇಲಾಖೆ ವರದಿ ನೀಡಿದೆ. ಯಾವ ಪ್ರದೇಶದಲ್ಲಿ ಯಾವಾಗ ಮುಂಗಾರು ಆಗಮನವಾಗಲಿದೆ? ಮುಂದೆ ಓದಿ...
ಕೇರಳದಲ್ಲಿ ಮುಂಗಾರು ಪ್ರಭಾವ
ಜೂನ್ 3ರ ನಂತರ ಅರಬ್ಬಿ ಸಮುದ್ರದ ಆಗ್ನೇಯದಲ್ಲಿ ಗಾಳಿಯ ಒತ್ತಡ ಹೆಚ್ಚಾಗಿ ಕೇರಳದಲ್ಲಿ ಮಳೆಯಾಗಲಿದೆ. ಕೇರಳದಲ್ಲಿ ಮೇ 31ಕ್ಕೇ ಮುಂಗಾರು ಆಗಮನವಾಗಬೇಕಿದ್ದು, ಎರಡು ದಿನ ವಿಳಂಬವಾಗಿದೆ. ಜೂನ್ 3ರ ನಂತರ ಮಳೆ ಬಿರುಸು ಪಡೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದಲ್ಲಿ ಜೂನ್ 7ರಿಂದ ಮುಂಗಾರು
ಕೇರಳದಲ್ಲಿ ಎರಡು ದಿನಗಳ ಅವಧಿ ಮುಂಗಾರು ವಿಳಂಬವಾದಂತೆ ಕರ್ನಾಟಕದಲ್ಲಿಯೂ ಎರಡು ದಿನಗಳ ಕಾಲ ತಡವಾಗಲಿದೆ. ಕರ್ನಾಟಕದಲ್ಲಿ ಜೂನ್ 7ರಿಂದ ಮುಂಗಾರು ಮಳೆ ಆರಂಭವಾಗಲಿದ್ದು, ಈಗಾಗಲೇ ಸರ್ಕಾರ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಪೂರ್ವ ಸಿದ್ಧತೆ ಮಾಡಿಕೊಂಡಿರುವುದಾಗಿ ತಿಳಿಸಿದೆ.
ಕೇರಳದಲ್ಲಿ ಮಳೆಯಾದ ನಂತರದ ಕೆಲವು ದಿನಗಳಲ್ಲಿ ಮುಂಗಾರು ಬೆಂಗಳೂರಿನ ಮೇಲೆ ಪ್ರಭಾವ ತೋರಲಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮುಂಗಾರು ಪ್ರವೇಶವಾಗಲಿದ್ದು, ಜೂನ್4 ರಂದು ಬೆಂಗಳೂರಿನಲ್ಲಿ ಹೆಚ್ಚಿನ ಮಳೆಯಾಗುವುದಾಗಿ ಹವಾಮಾನ ಇಲಾಖೆ ಸೂಚನೆ ನೀಡಿದೆ.ಒಡಿಶಾ, ಜಮ್ಮು ಕಾಶ್ಮೀರದಲ್ಲಿ ಜೂನ್ 10ರ ನಂತರ ಮಳೆ
ಜೂನ್ 10 ರಿಂದ ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಮಳೆಯಾಗಲಿದ್ದು, ಜೂನ್ 13ರಿಂದ ಮುಂಗಾರು ಪ್ರಬಲಗೊಳ್ಳಲಿದೆ. ಜೂನ್ 11ರಂದು ಪುರಿ, ನಯಾಗರ್, ಕಂದಮಾಲ್ ಜಿಲ್ಲೆಯಲ್ಲಿ ಅಧಿಕ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಜಮ್ಮು ಕಾಶ್ಮೀರದಲ್ಲಿಯೂ ಜೂನ್ 10ರ ನಂತರ ಅಧಿಕ ಮಳೆಯಾಗಲಿದೆ. ಲೇಹ್ ಲಡಾಖ್ನಲ್ಲಿ ಸಾಮಾನ್ಯ ಮಳೆಯಾಗಲಿದ್ದು, ನಿಖರ ದಿನಾಂಕವನ್ನು ತಿಳಿಸಿಲ್ಲ.
ಹೇಗಿರಲಿದೆ ಈ ಬಾರಿಯ ಮುಂಗಾರು?
ಈ ವರ್ಷದ ನೈಋತ್ಯ ಮುಂಗಾರಿನ ಎರಡನೇ ದೀರ್ಘ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ಬಿಡುಗಡೆಗೊಳಿಸಿದೆ. ನೈಋತ್ಯ ಮುಂಗಾರು ದಕ್ಷಿಣ ಭಾರತ ಹಾಗೂ ಉತ್ತರ ಭಾರತದಲ್ಲಿ ಸಾಮಾನ್ಯ ರೀತಿಯಲ್ಲಿರಲಿದ್ದು ಕೇಂದ್ರ ಭಾಗದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ. ಆದರೆ ಭಾರತ ಪೂರ್ವ ಭಾಗದಲ್ಲಿ ಮತ್ತು ಈಶಾನ್ಯ ಭಾರತದಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಕಡಿಮೆ ಮಟ್ಟದಲ್ಲಿ ಇರಲಿದೆ ಎಂದು ತಿಳಿಸಿದೆ.
ನೈಋತ್ಯ ಮುಂಗಾರಿನ ಕಾಲಾವಧಿಯಲ್ಲಿ (ಜೂನ್ನಿಂದ-ಸೆಪ್ಟೆಂಬರ್) ದೇಶಾದ್ಯಂತ ಮಳೆಯ ಪ್ರಮಾಣ ಸಾಮಾನ್ಯ ಪ್ರಮಾಣದಲ್ಲಿ ಇರಲಿದೆ. 96-104 ಶೇಕಡಾ ಪ್ರಮಾಣದ ಮಳೆಯಾಗಬಹುದು. ದೀರ್ಘಾವಧಿಯ ಸರಾಸರಿಯಲ್ಲಿ ಮಳೆಯ ಪ್ರಮಾಣ ನೈಋತ್ಯ ಮುಂಗಾರಿನಲ್ಲಿ 101 ಶೇಕಡ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಮೃತ್ಯುಂಜಯ ಮೋಹಪತ್ರ ಮಾಹಿತಿ ನೀಡಿದ್ದಾರೆ.