ಶನಿವಾರ ಸಂಜೆ 4 ಗಂಟೆಗೆ ವಿಶ್ವಾಸಮತ ಯಾಚಿಸಲು ಸುಪ್ರೀಂ ಕೋರ್ಟ್ ಆದೇಶ
Recommended Video

ನವದೆಹಲಿ, ಮೇ 18 : ಶನಿವಾರ, ಮೇ 19ರಂದು ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ವಿಶ್ವಾಸಮತ ಯಾಚಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ಹೇಳಿದ್ದು, ಕರ್ನಾಟಕದಲ್ಲಿ ಚುರುಕಿನ ರಾಜಕೀಯ ಚಟುವಟಿಕೆಗೆ ದಾರಿ ಮಾಡಿಕೊಡಲಿದೆ.
ಬಿಜೆಪಿ ಪರ ವಾದ ಮಂಡಿಸುತ್ತಿರುವ ಮುಕುಲ್ ರೋಹಟ್ಗಿ ಅವರು ಯಡಿಯೂರಪ್ಪನವರು ರಾಜ್ಯಪಾಲರಿಗೆ ಸಲ್ಲಿಸಿದ್ದ ಎರಡು ಪತ್ರಗಳನ್ನು ಸಲ್ಲಿಸಿದರು. ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿದ್ದರಿಂದ ನ್ಯಾಯಯುತವಾಗಿ ಬಿಜೆಪಿಗೆ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಆಹ್ವಾನಿಸಿದ್ದಾರೆ ಎಂದು ಅವರು ವಾದಿಸಿದರು.
ಇದಕ್ಕೆ ಪ್ರತಿಯಾಗಿ ತನ್ನ ಅಭಿಮತವನ್ನು ತಿಳಿಸಿರುವ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು, ನಾವು ಯಾವುದೇ ಪರ ತೀರ್ಪನ್ನು ನೀಡುವುದಿಲ್ಲ. ವಿಧಾನಸೌಧದಲ್ಲಿ ವಿಶ್ವಾಸಮತ ಯಾಚಿಸುವುದು ಅನಿವಾರ್ಯವಾಗಿದೆ. ನಾವು ಈ ಸಮಸ್ಯೆಗೆ ಕಾನೂನಿನ ಮೂಲಕ ಪರಿಹಾರ ಕಂಡುಕೊಳ್ಳುವ ಬದಲು ಪ್ರಾಕ್ಟಿಕಲ್ ಆಗಿ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ನ್ಯಾಯಮೂರ್ತಿ ಎಕೆ ಸಿಕ್ರಿ, ನ್ಯಾಯಮೂರ್ತಿ ಎಸ್ಎ ಬೋಬ್ಡೆ ಮತ್ತು ನ್ಯಾಯಮೂರ್ತಿ ಅಶೋಕ್ ಭೂಷಣ್ ಇರುವ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಬಿಜೆಪಿ ಪರವಾಗಿ ಮುಕುಲ್ ರೋಹಟ್ಗಿ ಮತ್ತು ಕೆಕೆ ವೇಣುಗೋಪಾಲ್ ವಾದಿಸಿದರೆ, ಬಿಜೆಪಿಗೆ ವಿರುದ್ಧವಾಗಿ, ಕಾಂಗ್ರೆಸ್-ಜೆಡಿಎಸ್ ಪರವಾಗಿ ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಗ್ವಿ ಮತ್ತು ದೇವದತ್ತ ಕಾಮತ್ ಅವರು ವಾದ ಮಂಡಿಸುತ್ತಿದ್ದಾರೆ. ಬಿಜೆಪಿ ವಿರುದ್ಧ ಮತ್ತೊಬ್ಬ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಕೂಡ ನಿಂತಿದ್ದಾರೆ.
ಕಾನೂನಿನ ಮೂಲಕ ಈ ಪ್ರಕರಣವನ್ನು ಇತ್ಯರ್ಥಪಡಿಸಬೇಕೋ ಅಥವಾ ಕೂಡಲೆ ವಿಶ್ವಾಸಮತ ಯಾಚಿಸಿ ಬಹುಮತ ಸಾಬೀತುಪಡಿಸುತ್ತೀರೋ ಎಂಬ ಎರಡು ಆಯ್ಕೆಯನ್ನು ಎರಡೂ ಪಕ್ಷಗಳಿಗೆ ಸರ್ವೋಚ್ಚ ನ್ಯಾಯಾಲಯ ನೀಡಿದೆ. ವಿಶ್ವಾಸಮತ ಯಾಚಿಸಲು ರೆಡಿಯಿರುವುದಾಗಿ ಕಾಂಗ್ರೆಸ್ ನ್ಯಾಯಾಲಯಕ್ಕೆ ತಿಳಿಸಿದೆ.
ಆದರೆ, ನಾಳೆಯೇ ವಿಶ್ವಾಸಮತ ಯಾಚನೆ ಬೇಡ ಎಂಬ ವಾದವನ್ನು ಬಿಜೆಪಿ ವಕೀಲರು ಮಂಡಿಸುತ್ತಿದ್ದಾರೆ. ಕನಿಷ್ಠ ಒಂದು ವಾರ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದೆ. ಇದನ್ನು ತಿರಸ್ಕರಿಸಿರುವ ನ್ಯಾಯಮೂರ್ತಿಗಳು ಶನಿವಾರ ಸಂಜೆ 4 ಗಂಟೆಗೆ ವಿಶ್ವಾಸಮತ ಯಾಚಿಸಬೇಕು ಎಂದು ಸೂಚನೆ ನೀಡಿದೆ.












Click it and Unblock the Notifications