Heavy Rain: ಧಾರಾಕಾರ ಮಳೆಗೆ ಆಂಧ್ರ, ತೆಲಂಗಾಣದಲ್ಲಿ ಪ್ರವಾಹ- 35 ಮಂದಿ ಸಾವು!
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ತತ್ತರಿಸಿ ಹೋಗಿವೆ. ಕಳೆದ ರಾತ್ರಿ ಸುರಿದ ಮಳೆಗೆ ಗಡಿ ಭಾಗದಲ್ಲಿನ ಮನೆಗಳು, ರಸ್ತೆಗಳು ಜಾಲಾವೃತಗೊಂಡು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲದೆ ಪ್ರವಾಹ ಹಾಗೂ ಮಳೆ ಸಂಬಂಧಿತ ಘಟನೆಗಳಲ್ಲಿ 35 ಜನರು ಸಾವನ್ನಪ್ಪಿದ್ದು, ಎರಡೂ ರಾಜ್ಯಗಳಲ್ಲಿ 47,000 ಕ್ಕೂ ಹೆಚ್ಚು ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ಕಳೆದ ರಾತ್ರಿಯಿಂದ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಸಾಕಷ್ಟು ಮಳೆಯಾಗಿದೆ. ಇದರಿಂದಾಗಿ ತಗ್ಗು ಪ್ರದೇಶಗಳಿಗೆ ಮನೆಗಳಿಗೆ ಮಳೆ ನೀರು ನುಗ್ಗಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇನ್ನೂ ನದಿ ಭಾಗದ ಜನರ ಜೀವನ ಹೇಳತೀರದ್ದಾಗಿದ್ದು, ಪುಟ್ಟ ಮಕ್ಕಳು, ವಯಸ್ಸಾದರು ಮನೆ ತೊರೆದು ಪರಿಹಾರ ಶಿಬಿರಗಳಲ್ಲಿ ವಾಸಿಸುವಂತಾಗಿದೆ.

ಆಂಧ್ರಪ್ರದೇಶದಲ್ಲಿ ಮಳೆ ಸಂಬಂಧಿತ ಘಟನೆಗಳಿಂದ 19 ಜನರು ಸಾವನ್ನಪ್ಪಿದ್ದರೆ, ತೆಲಂಗಾಣದಲ್ಲಿ ಮಳೆ ಮತ್ತು ಪ್ರವಾಹ ಪ್ರಕೋಪಕ್ಕೆ 16 ಜನರು ಸಾವನ್ನಪ್ಪಿದ್ದಾರೆ. ಸದ್ಯ ಮಳೆ ಪ್ರಮಾಣ ಹೆಚ್ಚಾಗಿದ್ದು ಕೆಲ ಸಮಯದ ನಂತರ ಮಳೆ ತೀವ್ರತೆ ಕಡಿಮೆಯಾಗಲಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. 24 ಗಂಟೆಗಳಲ್ಲಿ ಮಳೆ ತೀವ್ರತೆ ಕಡಿಮೆಯಾಗಲಿದ್ದು ಮೋಡ ಕವಿದ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ತೆಲಂಗಾಣದಲ್ಲಿ ಇಂದು ಮಳೆ:
ತೆಲಂಗಾಣದಲ್ಲಿ ಇಂದೂ ಕೂಡ ಭಾರೀ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ. ಅದಿಲಾಬಾದ್, ಮಂಚೇರಿಯಲ್, ಖಮ್ಮಂ, ಸೂರ್ಯಪೇಟ್, ಕೊಮಾರಂ ಭೀಮ್ ಆಸಿಫಾಬಾದ್, ಪೆದ್ದಪಲ್ಲಿ, ಜಯಶಂಕರ್ ಭೂಪಾಲಪಲ್ಲಿ, ಮುಲುಗು, ಭದ್ರಾದ್ರಿ ಕೊತಗುಡೆಂ, ಮತ್ತು ಮಹಬೂಬಾಬಾದ್ ಸೇರಿದಂತೆ ತೆಲಂಗಾಣದ 10 ಜಿಲ್ಲೆಗಳಲ್ಲಿ ಮಂಗಳವಾರ ಮಳೆಯಾಗುವ ಕುರಿತು ಐಎಂಡಿ ಯೆಲ್ಲೋ ಅಲರ್ಟ್ ನೀಡಿದೆ.

ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಈ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಮನವಿ ಮಾಡುವುದಾಗಿ ತಿಳಿಸಿದರು. ರಾಜ್ಯದಲ್ಲಿ ಪ್ರವಾಹದಿಂದಾಗಿ ಇದುವರೆಗೆ 5,000 ಕೋಟಿ ರೂಪಾಯಿಗೂ ಹೆಚ್ಚು ಹಾನಿಯಾಗಿದೆ ಎಂದು ರೆಡ್ಡಿ ತಿಳಿಸಿದ್ದು, ಕೇಂದ್ರದಿಂದ 2,000 ಕೋಟಿ ರೂಪಾಯಿಗಳ ತಕ್ಷಣದ ಪರಿಹಾರ ನೆರವು ಕೋರಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.
ಪ್ರವಾಹಕ್ಕೆ ಆಂಧ್ರಪ್ರದೇಶ ತತ್ತರ: ಸಿಎಂ ಭೇಟಿ
ಇನ್ನೂ ಮಳೆರಾಯನ ಅರ್ಭಟಕ್ಕೆ ಆಂಧ್ರಪ್ರದೇಶದ ಜನ ಹೈರಾಣಾಗಿದ್ದಾರೆ. ರಾಜ್ಯದಲ್ಲಿ ಸಂಭವಿಸಿದ ಪ್ರವಾಹವನ್ನು ದೊಡ್ಡ ದುರಂತ ಎಂದು ಕರೆಯಲಾಗಿದೆ. ಪ್ರವಾಹದ ಬೆನ್ನಲ್ಲೆ ಇಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿಜಯವಾಡಕ್ಕೆ ಭೇಟಿ ನೀಡಿ, ಆಂಧ್ರಪ್ರದೇಶದ ಪ್ರವಾಹವನ್ನು ನೈಸರ್ಗಿಕ ವಿಕೋಪ ಎಂದು ಘೋಷಿಸಲು ಕೇಂದ್ರಕ್ಕೆ ಮನವಿ ಮಾಡುವುದಾಗಿ ಹೇಳಿದರು.
47 ರಕ್ಷಣಾ ತಂಡ
ಆಂಧ್ರಪ್ರದೇಶದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಸಿಬ್ಬಂದಿ ಸೇರಿದಂತೆ ಒಟ್ಟು 47 ರಕ್ಷಣಾ ತಂಡಗಳನ್ನು ರಾಜ್ಯದಲ್ಲಿ ಪರಿಹಾರ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಸೋಮವಾರ ರಾಜ್ಯದ 3.5 ಲಕ್ಷಕ್ಕೂ ಅಧಿಕ ಜನರಿಗೆ ಆಹಾರವನ್ನು ವಿತರಿಸಲಾಗಿದೆ.
ವಿಜಯವಾಡದ ಪ್ರಕಾಶಂ ಬ್ಯಾರೇಜ್ನಿಂದ ಸೋಮವಾರ 11.43 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. 11.43 ಲಕ್ಷ ಕ್ಯೂಸೆಕ್ಗಳಷ್ಟು ಪ್ರವಾಹದ ನೀರು ಭವಾನಿಪುರಂ ರಸ್ತೆಯನ್ನು ದಾಟಿ ಸ್ವಾತಿ ಥಿಯೇಟರ್ ಪ್ರದೇಶವನ್ನು (ವಿಜಯವಾಡದಲ್ಲಿ) ಸಂಪೂರ್ಣ ಮುಳುಗಿಸಿದೆ. ನಂತರ ವಾಂಬೆ ಕಾಲೋನಿಗೆ ಹರಿದಿದೆ.
ಮಂಗಳವಾರ ಪ್ರಕಾಶಂ ಬ್ಯಾರೇಜ್ನಿಂದ 9.64 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ವಿಜಯವಾಡದ ಅಜಿತ್ ಸಿಂಗ್ ನಗರ ಸೇರಿದಂತೆ ಇತರ ಹಲವು ಸ್ಥಳಗಳಲ್ಲಿ ಜಲಾವೃತ ವರದಿಯಾಗಿದೆ. ಸದ್ಯ ಪ್ರದೇಶಗಳಿಂದ ಪ್ರವಾಹದ ನೀರು ಇಳಿಮುಖವಾಗುತ್ತಿದೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಉಭಯ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದು, ಬಿಕ್ಕಟ್ಟನ್ನು ಎದುರಿಸಲು ಕೇಂದ್ರದಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.












Click it and Unblock the Notifications