ಬಾಲಾಕೋಟ್ ದಾಳಿ ಬಗ್ಗೆ ಸಿನಿಮಾ; ವಿವೇಕ್ ಒಬೆರಾಯ್ ನಾಯಕ
ಬೆಂಗಳೂರು, ಆಗಸ್ಟ್ 23 : ಬಾಲಿವುಡ್ ನಟ ವಿವೇಕ್ ಒಬೆರಾಯ್ ನೈಜ ಘಟನೆ ಆಧಾರಿತ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ವಾಯುಪಡೆ ಅಧಿಕಾರಿಯ ಪಾತ್ರದಲ್ಲಿ ಅವರು ನಟಿಸಲಿದ್ದಾರೆ.
ಬಾಲಿವುಡ್ನಲ್ಲಿ "ಉರಿ ದಿ ಸರ್ಜಿಕಲ್ ಸ್ಟ್ರೈಕ್" ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಈಗ "ಬಾಲಾಕೋಟ್" ಎಂಬ ಹೆಸರಿನಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ವಿವೇಕ್ ಒಬೆರಾಯ್ ನಾಯಕನ ಪಾತ್ರ ಮಾಡುತ್ತಿದ್ದಾರೆ.
ಬಾಲಕೋಟ್ನಲ್ಲಿ ನಡೆದ ಏರ್ ಸ್ಟ್ರೈಕ್ ಕುರಿತು ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಅಭಿನಂದನ್ ವರ್ಧಮಾನ್ ಬಂಧನ ಮತ್ತು ಬಿಡುಗಡೆ ಕುರಿತು ಅಂಶವೂ ಚಿತ್ರದಲ್ಲಿ ಸೇರಿದೆ. ಜಮ್ಮು ಮತ್ತು ಕಾಶ್ಮೀರ, ದೆಹಲಿ ಮತ್ತು ಆಗ್ರಾದಲ್ಲಿ ಚಿತ್ರೀಕರಣ ನಡೆಯಲಿದೆ.

ಹಿಂದಿ, ತಮಿಳು ಮತ್ತು ತೆಲಗು ಭಾಷೆಯಲ್ಲಿ ಚಿತ್ರ ನಿರ್ಮಾಣವಾಗಲಿದ್ದು, ವಿವೇಕ್ ಒಬೆರಾಯ್ ಚಿತ್ರದಲ್ಲಿ ನಟಿಸಲು ವಾಯುಪಡೆಯ ಅನುಮತಿ ಪಡೆದುಕೊಂಡಿದ್ದಾರೆ. ಮೂರು ಭಾಷೆಯಗಳ ಖ್ಯಾತ ಕಲಾವಿದರು ಚಿತ್ರದಲ್ಲಿ ನಟಿಸಲಿದ್ದಾರೆ.
"ಭಾರತೀಯನಾಗಿ ಇಂತಹ ಚಿತ್ರದಲ್ಲಿ ನಟಿಸಲು ನನಗೆ ಹೆಮ್ಮೆ ಇದೆ. ನಮ್ಮ ರಕ್ಷಣಾ ಪಡೆಗಳು ಮಾಡಿದ ಸಾಹಸವನ್ನು ಚಿತ್ರದ ಮೂಲಕ ಜನರಿಗೆ ತೋರಿಸುವುದು ನನ್ನ ಕರ್ತವ್ಯವಾಗಿದೆ. ಜನರನ್ನು ತಲುಪಲು ಸಿನಿಮಾ ಪ್ರಭಾವಿ ಮಾಧ್ಯಮವಾಗಿದೆ" ಎಂದು ವಿವೇಕ್ ಒಬೆರಾಯ್ ಹೇಳಿದ್ದಾರೆ.
ಭಾರತೀಯ ವಾಯುಪಡೆ ನಡೆಸಿದ ಮಹತ್ವದ ದಾಳಿಗಳಲ್ಲಿ ಬಾಲಕೋಟ್ ದಾಳಿಯೂ ಒಂದಾಗಿದೆ. ಪಾಕಿಸ್ತಾನ ಗಡಿಯ ಬಾಲಾಕೋಟ್, ಚಕೋತಿ ಮತ್ತು ಮುಜಾಫರ್ ಬಾದ್ ಪ್ರದೇಶಗಳಲ್ಲಿನ ಉಗ್ರರ ಶಿಬಿರಗಳನ್ನು ಗುರಿಯಾಗಿಸಿಕೊಂಡ ಈ ದಾಳಿ ನಡೆಸಲಾಗಿತ್ತು.
ಪುಲ್ವಮಾದಲ್ಲಿ ಸೇನಾ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ನಡೆದ ಬಾಲಾಕೋಟ್ ದಾಳಿಯಲ್ಲಿ 300ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದರು. "ಬಾಲಕೋಟ್ ದಾಳಿ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಈ ಸಿನಿಮಾ ಅವುಗಳಿಗೆಲ್ಲ ಉತ್ತರ ಕೊಡಲಿದೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ವಾಯುಪಡೆಗೆ ಧನ್ಯವಾದ ಸಲ್ಲಿಸುವೆ" ಎಂದು ಒಬೆರಾಯ್ ಹೇಳಿದ್ದಾರೆ.
"ಈ ಚಿತ್ರದಲ್ಲಿ ನಟಿಸಲು ಭಾರತೀಯ ವಾಯುಪಡೆಯಿಂದ ಸ್ವಾತಂತ್ರ ದಿನಾಚರಣೆಗೆ ಮೊದಲು ಅನುಮತಿ ಪಡೆದಿದ್ದೇನೆ. ಹಾಲಿವುಡ್ನಲ್ಲಿ ಸೇನೆಯ ಶಕ್ತಿ ಬಗ್ಗೆ ಸಿನಿಮಾ ಮಾಡುತ್ತಾರೆ. ಭಾರತೀಯರು ಏಕೆ ಸಂಕೋಚ ಪಟ್ಟುಕೊಳ್ಳಬೇಕು. ದೇಶದ ಶಕ್ತಿಶಾಲಿ ಸೇನಾಬಲವಾಗಿ ನಾವು ಬಹಳಷ್ಟು ಸಾಧಿಸಿದ್ದೇವೆ. ಈಗ ಅದನ್ನು ಜನರಿಗೆ ತಿಳಿಸುವ ಸಮಯ ಬಂದಿದೆ" ಎಂದು ವಿವೇಕ್ ಒಬೆರಾಯ್ ತಿಳಿಸಿದ್ದಾರೆ.
"ಬಾಲಕೋಟ್ ದಾಳಿ ವಾಯುಪಡೆ ನಡೆಸಿದ ಸಂಘಟಿತದಾಲಿಯಲ್ಲಿ ಪ್ರಮುಖವಾದದ್ದು. ಮಾಧ್ಯಮಗಳ ಮೂಲಕ ಎಲ್ಲವನ್ನು ಗಮನಿಸಿದ್ದೇನೆ. ನಡೆದ ಎಲ್ಲಾ ಘಟನೆಗಳಿಗೆ ಚಿತ್ರದಲ್ಲಿಯೂ ನ್ಯಾಯ ಒದಗಿಸುವ ಭರವಸೆ ಇದೆ" ಎಂದು ವಿವೇಕ್ ಒಬೆರಾಯ್ ಹೇಳಿದ್ದಾರೆ.
ಇಂತಹ ಮಹತ್ವದ ಕಾರ್ಯಚರಣೆಗಳನ್ನು ನಡೆಸಿದಾಗ ಅದರ ಬಗ್ಗೆ ಸಿನಿಮಾ ಮಾಡಲು ಒಪ್ಪಿಗೆ ಸಿಗುವುದ ಕಷ್ಟ. ಆದರೆ, ವಾಯುಪಡೆ ಸಿನಿಮಾ ಮಾಡಲು ವಿವೇಕ್ ಒಬೆರಾಯ್ಗೆ ಒಪ್ಪಿಗೆ ಕೊಟ್ಟಿದೆ. ವಿವೇಕ್ ಮೇಲೆ ಸೇನಾಪಡೆ ಸಂಪೂರ್ಣ ವಿಶ್ವಾಶವಿಟ್ಟು ಅವಕಾಶ ಕೊಟ್ಟಿದೆ.
ದೊಡ್ಡ ಕಾರ್ಯಾಚರಣೆ ಬಗ್ಗೆ ಒಬ್ಬ ನಟನ ಮೇಲೆ ನಂಬಿಕೆ ಇಟ್ಟು ಸಿನಿಮಾ ಮಾಡಲು ಒಪ್ಪಿಗೆ ಕೊಡುವುದು ಮಹತ್ವದ ವಿಚಾರ. ವಿವೇಕ್ ಒಬೆರಾಯ್ ವಾಯುಪಡೆ ವಿಶ್ವಾಸಗಳಿಸುವಲ್ಲಿ ಸಫಲರಾಗಿದ್ದಾರೆ ಎಂಬುದು ಸತ್ಯ.












Click it and Unblock the Notifications