Fengal Cyclone: ಇಂದು ಸಂಜೆ ಪುದುಚೇರಿಗೆ ಫೆಂಗಲ್- ಶಾಲಾ ಕಾಲೇಜುಗಳು ಬಂದ್- ಬಸ್ ಸೇವೆ ಸ್ಥಗಿತ!
ಕರಾವಳಿ ಪ್ರದೇಶಗಳಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ ಗೋಚರಿಸಲಾರಂಭಿಸಿದೆ. ಹವಾಮಾನ ಇಲಾಖೆ ಪ್ರಕಾರ ಫೆಂಗಲ್ ಚಂಡಮಾರುತ ಇಂದು ಸಂಜೆ ವೇಳೆಗೆ ಪುದುಚೇರಿಯ ಕರಾವಳಿ ಪ್ರದೇಶಗಳನ್ನು ತಲುಪಲಿದ್ದು ಚೆನ್ನೈನ ಕರಾವಳಿ ಭಾಗದ ಹಲವೆಡೆ ಭಾರೀ ಮಳೆಯಾಗುತ್ತಿದೆ.
ಇಂದು ಸಂಜೆ ವೇಳೆಗೆ ಫೆಂಗಲ್ ಚಂಡಮಾರುತ ಪುದುಚೇರಿಯ ಕರಾವಳಿ ಪ್ರದೇಶಗಳನ್ನು ತಲುಪಲಿದ್ದು, ಈ ಸಮಯದಲ್ಲಿ ಗಾಳಿಯ ವೇಗ ಗಂಟೆಗೆ 90 ಕಿಲೋಮೀಟರ್ ಆಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದಾಗಿ ಉತ್ತರ ತಮಿಳುನಾಡು ಮತ್ತು ಪುದುಚೇರಿಯ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

#WATCH | Chennai | Due to the impact of cyclone Fengal, many coastal areas witnessed changes in weather with gusty winds and rain.
— ANI (@ANI) November 30, 2024
According to the Indian Meteorological Department (IMD), Cyclone Fengal will hit the coastal area by today evening. pic.twitter.com/qGfAyALUZu
ಫೆಂಗಲ್ ಚಂಡಮಾರುತದಿಂದಾಗಿ ಪುದುಚೇರಿಯ ಕರಾವಳಿ ಪ್ರದೇಶಗಳಲ್ಲಿ ಹವಾಮಾನದಲ್ಲಿ ಭಾರೀ ಬದಲಾವಣೆ ಕಂಡುಬರುತ್ತಿದೆ. ಪುದುಚೇರಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಸಮುದ್ರದ ಅಲೆಗಳ ಅಬ್ಬರ ನಿಮಷ ನಿಮಷಕ್ಕೂ ಹೆಚ್ಚಾಗುತ್ತಿದೆ. ಹವಾಮಾನ ಇಲಾಖೆಯ ಪ್ರಕಾರ, ಫೆಂಗಲ್ ಚಂಡಮಾರುತ ಚೆನ್ನೈನಿಂದ ಆಗ್ನೇಯಕ್ಕೆ 210 ಕಿಲೋಮೀಟರ್ ದೂರದಲ್ಲಿದ್ದು, ಇದು ಪ್ರಸ್ತುತ ಪಶ್ಚಿಮ-ವಾಯವ್ಯದ ಕಡೆಗೆ ಚಲಿಸುತ್ತಿದೆ.
ನಂತರ ಉತ್ತರ ತಮಿಳುನಾಡು-ಪುದುಚೇರಿಯ ಕರಾವಳಿ ಪ್ರದೇಶಗಳನ್ನು ದಾಟಿ ಕಾರೈಕಲ್ ಮತ್ತು ಪುದುಚೇರಿ ಬಳಿಯ ಮಹಾಬಲಿಪುರಂ ಕಡೆಗೆ ಫೆಂಗಲ್ ಚಂಡಮಾರುತ ಚಲಿಸಲಿದೆ. ಚಂಡಮಾರುತದ ಕಾರಣ ನವೆಂಬರ್ 30ರಂದು ಅಂದರೆ ಇಂದು ಗಾಳಿಯ ವೇಗ ಗಂಟೆಗೆ 70-80 ಕಿಲೋಮೀಟರ್ ಆಗಿರಲಿದೆ.

ಚಂಡಮಾರುತದಿಂದಾಗಿ ತಮಿಳುನಾಡು ಸರ್ಕಾರ ಜನರಿಗೆ ಮನೆ ಬಿಟ್ಟು ವಿನಾಕಾರಣ ಹೊರಬಾರದಂತೆ ಮನವಿ ಮಾಡಿದೆ. ಅಲ್ಲದೆ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ. ಜೊತೆಗೆ ಜನರನ್ನು ಮನೆಯಿಂದಲೇ ಕೆಲಸ ಮಾಡಲು ಅನುಮತಿಸುವಂತೆ ಐಟಿ ಕಂಪನಿಗಳಿಗೆ ಸೂಚನೆ ನೀಡಲಾಗಿದೆ.
ಮಾತ್ರವಲ್ಲದೆ ಹಳೆ ಮಹಾಬಲಿಪುರಂ ಮತ್ತು ಕರಾವಳಿ ಮಾರ್ಗಗಳಲ್ಲಿ ಇಂದು ಸಾರಿಗೆ ಸೇವೆಗಳನ್ನು ಸರ್ಕಾರ ಸ್ಥಗಿತಗೊಳಿಸಿದೆ. ರಾಜ್ಯ ವಿಪತ್ತು ನಿರ್ವಹಣಾ ಸಚಿವ ಕೆಕೆಎಸ್ಎಸ್ಆರ್ ರಾಮಚಂದ್ರನ್ ಅವರು ಉನ್ನತ ಅಧಿಕಾರಿಗಳೊಂದಿಗೆ ಫೆಂಗಲ್ ಕುರಿತು ಪರಿಶೀಲನಾ ಸಭೆ ನಡೆಸಿದರು. ಈ ಸಮಯದಲ್ಲಿ ಹವಾಮಾನ ಇಲಾಖೆಯು ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಯಲ್ಲಿ ಹೆಚ್ಚಿನ ಸಮುದ್ರದ ಅಲೆಗಳ ಎಚ್ಚರಿಕೆಯನ್ನು ನೀಡಿದೆ.
ಚಂಡಮಾರುತದ ದೃಷ್ಟಿಯಿಂದ ತಮಿಳುನಾಡಿನ ಚೆಂಗಲ್ಪಟ್ಟು, ಕಡಲೂರು, ವಿಲ್ಲುಪ್ರಂನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕಾಂಚೀಪುರಂ, ಅರಿಯಲೂರು, ತಂಜಾವೂರು, ತಿರುವರೂರ್, ಮೈಲಾಡುತುರೈ, ನಾಗಪಟ್ಟಣಂ, ಚೆನ್ನೈನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇಂದು ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಲಿದ್ದು, ಹವಾಮಾನ ಇಲಾಖೆ ತಮಿಳುನಾಡು, ಪದುಚೇರಿ, ಆಂಧ್ರದ ನೆಲ್ಲೂರು, ತಿರುಪತಿ, ಚಿತ್ತೂರು ಜಿಲ್ಲೆಗಳಿಗೂ ಅಲರ್ಟ್ ಘೋಷಿಸಿದೆ. ಅಲ್ಲದೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ತಿರುವರೂರ್ ಭೇಟಿಯನ್ನು ಚಂಡಮಾರುತದಿಂದಾಗಿ ರದ್ದುಗೊಳಿಸಲಾಗಿದೆ.
ಇನ್ನೂ ಶ್ರೀಲಂಕಾದಲ್ಲಿ ಫೆಂಗಲ್ ಚಂಡಮಾರುತದಿಂದಾಗಿ ಮಳೆ ಸಂಬಂಧಿತ ಘಟನೆಗಳಲ್ಲಿ 12 ಜನ ಸಾವನ್ನಪ್ಪಿದರೆ ಮೂರು ಲಕ್ಷಕ್ಕೂ ಅಧಿಕ ಜನ ನಿರಾಶ್ರಿತರಾಗಿದ್ದಾರೆ.












Click it and Unblock the Notifications