ರೈತರ ಪ್ರತಿಭಟನೆಯಲ್ಲಿ ಸಿಮ್ ಬಹಿಷ್ಕಾರ: ಏರ್ಟೆಲ್, ವಿಐ ವಿರುದ್ಧ ಜಿಯೋ ಆರೋಪ
ನವದೆಹಲಿ, ಡಿಸೆಂಬರ್ 15: ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯು ಖಾಸಗಿ ದೂರಸಂಪರ್ಕ ಕಂಪೆನಿಗಳ ಹೊಸ ಸಂಘರ್ಷಕ್ಕೆ ಕಾರಣವಾಗಿದೆ. ದೇಶದ ಮೊಬೈಲ್ ದೂರವಾಣಿ ಮತ್ತು ಅಂತರ್ಜಾಲ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮೂರು ಪ್ರಮುಖ ಖಾಸಗಿ ಕಂಪೆನಿಗಳು ಮತ್ತೊಂದು ಬಗೆಯ ತಿಕ್ಕಾಟಕ್ಕೆ ಇಳಿದಿವೆ. ಇದಕ್ಕೆ ಕಾರಣವಾಗಿರುವುದು ರೈತರ ಪ್ರತಿಭಟನೆ ಮತ್ತು ಜಿಯೋ ಸಿಮ್ ಬಹಿಷ್ಕರಿಸಿ ಅಭಿಯಾನ.
ತನ್ನ ಪ್ರತಿಸ್ಪರ್ಧಿಗಳಾದ ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್ಟೆಲ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿ ರಿಲಯನ್ಸ್ ಕಮ್ಯುನಿಕೇಷನ್ ದೂರು ನೀಡಿದೆ. ಕೇಂದ್ರದ ಮೂರು ಕೃಷಿ ಕಾಯ್ದೆಗಳಿಂದ ಹೇಗೋ ಜಿಯೋ ಲಾಭ ಪಡೆದುಕೊಳ್ಳಲಿದೆ ಎಂದು ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್ಟೆಲ್ ಸಂಸ್ಥೆಗಳು ಅನೈತಿಕ ಮಾರ್ಗ ಹಾಗೂ ನಿಷ್ಪ್ರಯೋಜಕ ರೂಮರ್ಗಳನ್ನು ಹರಡಿಸುವ ಕೆಲಸ ಮಾಡುತ್ತಿವೆ ಎಂದು ಅದು ಆಪಾದಿಸಿದೆ.
ಮತ್ತಷ್ಟು ಟ್ರೆಂಡ್ ಆಗುತ್ತಿದೆ ಜಿಯೋ ಸಿಮ್ ಬಹಿಷ್ಕಾರ ಅಭಿಯಾನ
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳು ರಿಯಲನ್ಸ್ನಂತಹ ಖಾಸಗಿ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವಂತೆ ಇವೆ. ಹೀಗಾಗಿ ಅವುಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಪಂಜಾಬ್ ಮತ್ತು ಹರ್ಯಾಣ ಸೇರಿದಂತೆ ದೇಶದ ಅನೇಕ ಭಾಗಗಳ ರೈತರು ದೆಹಲಿಗೆ ನುಗ್ಗಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೋರಾದ ಭಾಗವಾಗಿ ಜಿಯೋ ಸಿಮ್ ಬಹಿಷ್ಕಾರದ ಅಭಿಯಾನ ಕೂಡ ನಡೆಯುತ್ತಿದೆ. ಮುಂದೆ ಓದಿ.
ಸಿಮ್ ಬಹಿಷ್ಕಾರ ಅಭಿಯಾನ
ದೇಶದ ವಿವಿಧ ಭಾಗಗಳ ರೈತರು ಮತ್ತು ಅವರ ಬೆಂಬಲಿಗರು ಜಿಯೋ ಸಿಮ್ ಬಹಿಷ್ಕಾರ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಅನೇಕರು ಸಿಮ್ ಅನ್ನು ಮುರಿದುಹಾಕಿದ್ದರೆ, ಇನ್ನು ಕೆಲವರು ಬೇರೆ ನೆಟ್ವರ್ಕ್ಗೆ ಪೋರ್ಟ್ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅಭಿಯಾನದ ಬಿಸಿ ಜಿಯೋಕ್ಕೆ ತಟ್ಟುತ್ತಿದೆ. ಆದರೆ ಈ ಅಭಿಯಾನದಿಂದ ಮತ್ತೆರಡು ಖಾಸಗಿ ಕಂಪೆನಿಗಳಾದ ಏರ್ಟೆಲ್ ಹಾಗೂ ವೊಡಾಫೋನ್ ಐಡಿಯಾಗಳಿಗೆ ಲಾಭವಾಗುತ್ತಿದೆ.
ಕಾರಣವಿಲ್ಲದೆ ಪೋರ್ಟ್
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ (ಟ್ರಾಯ್) ತೀಕ್ಷ್ಣವಾದ ಪತ್ರ ಬರೆದಿರುವ ಜಿಯೋ, ತನ್ನ ಪ್ರತಿಸ್ಪರ್ಧಿ ಸಂಸ್ಥೆಗಳು ಅನೈತಿಕವಾದ ಪ್ರಚಾರ ಮಾಡುತ್ತಿವೆ ಎಂದು ಆರೋಪಿಸಿದೆ. 'ಬೃಹತ್ ಮಟ್ಟದಲ್ಲಿ ಪೋರ್ಟ್ ಮನವಿಗಳು ಬರುತ್ತಿವೆ. ಜಿಯೋ ಸೇವೆಗಳಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಅಥವಾ ಬೇರೆ ಯಾವ ದೂರುಗಳು ಇಲ್ಲದೆಯೂ ಇದೊಂದೇ ಕಾರಣಕ್ಕೆ ಗ್ರಾಹಕರು ಬದಲಾವಣೆಗೆ ಮುಂದಾಗುತ್ತಿದ್ದಾರೆ' ಎಂದು ಮುಕೇಶ್ ಅಂಬಾನಿ ಒಡೆತನದ ಜಿಯೋ ದೂರಸಂಪರ್ಕ ಸೇವಾದಾರ ಸಂಸ್ಥೆ ಡಿ. 11ರಂದು ಟ್ರಾಯ್ಗೆ ಬರೆದ ಪತ್ರದಲ್ಲಿ ತಿಳಿಸಿದೆ.
2021ಕ್ಕೆ ರಿಲಯನ್ಸ್ ಜಿಯೋ ಭಾರತದಲ್ಲಿ 5G ಕ್ರಾಂತಿ ಮಾಡಲಿದೆ: ಮುಕೇಶ್ ಅಂಬಾನಿ
ಅನೈತಿಕ ಪ್ರಚಾರ
'ಇದು ಸೆ. 28ರಂದು ಸಲ್ಲಿಸಿದ ನಮ್ಮ ಪತ್ರದ ಮುಂದಿನ ವಿವರಣೆಯಾಗಿದ್ದು, ದೇಶದ ಉತ್ತರ ಭಾಗಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳ ಲಾಭ ಪಡೆದುಕೊಳ್ಳಲು ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾಗಳು ನಡೆಸುತ್ತಿರುವ ಅನೈತಿಕ ಹಾಗೂ ಸ್ಪರ್ಧಾವಿರೋಧಿ ಎಂಎನ್ಪಿ ಪ್ರಚಾರದ ಕುರಿತಾಗಿ ಉಲ್ಲೇಖೀಸಲಾಗಿದೆ' ಎಂದು ಪತ್ರದಲ್ಲಿ ಜಿಯೋ ಹೇಳಿದೆ.
ಏರ್ಟೆಲ್ ಸ್ಪಷ್ಟನೆ
ಜಿಯೋ ತಮ್ಮ ವಿರುದ್ಧ ಮಾಡಿರುವ ಆರೋಪಗಳು ಆಧಾರರಹಿತ ಎಂದು ಏರ್ಟೆಲ್ ಹಾಗೂ ವಿಐ ಸಂಸ್ಥೆಗಳು ತಿರಸ್ಕರಿಸಿವೆ.
'ಕೆಲವು ಪ್ರತಿಸ್ಪರ್ಧಿಗಳಿಂದ ಪ್ರಚೋದನೆಗೆ ಒಳಗಾದರೂ, ಆಧಾರ ರಹಿತ ಆರೋಪದ ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತಾರೆ ಎಂದು ನಮಗೆ ತಿಳಿದಿದ್ದರೂ, ಬೆದರಿಸುವ ತಂತ್ರವನ್ನು ಅಳವಡಿಸಿಕೊಂಡರೂ ಮತ್ತು ಹೆದರಿಸುವ ವರ್ತನೆಯನ್ನು ಬಳಸಿಕೊಂಡರೂ ನಾವು ನಮ್ಮ ವ್ಯವಹಾರವನ್ನು ಉತ್ತಮ ನಡತೆ ಮತ್ತು ಪಾರದರ್ಶಕತೆಯಿಂದ ಮಾಡುತ್ತಿದ್ದೇವೆ. ನಾವು ಅದಕ್ಕಾಗಿ ಹೆಸರುವಾಸಿ ಮತ್ತು ಅದರ ಬಗ್ಗೆ ಹೆಮ್ಮೆ ಇದೆ' ಎಂದು ಭಾರ್ತಿ ಏರ್ಟೆಲ್ ಹೇಳಿಕೆ ನೀಡಿದೆ.
ಕಳಂಕ ತರುವ ಪ್ರಯತ್ನ
ವೊಡಾಫೋನ್ ಐಡಿಯಾ ಕೂಡ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದೆ. 'ವಿಐ ನೈತಿಕವಾಗಿ ವ್ಯವಹಾರ ಮಾಡುವುದನ್ನು ನಂಬುತ್ತದೆ. ನಮ್ಮ ಪ್ರತಿಷ್ಠೆಗೆ ಕಳಂಕ ತರಲು ಅಧಾರರಹಿತ ಆರೋಪಗಳನ್ನು ಮಾಡಲಾಗಿದೆ. ನಮ್ಮ ವಿರುದ್ಧದ ಅಂತಹ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನಾವು ಕಠಿಣವಾಗಿ ತಿರಸ್ಕರಿಸುತ್ತೇವೆ' ಎಂದು ಅದು ಹೇಳಿದೆ.