Wrestlers Protest: ಕುಸ್ತಿಪಟುಗಳಿಗೆ ಬೆಂಬಲ ನೀಡಿ ಖಾಪ್ ಮಹಾಪಂಚಾಯತ್ಗೆ ಕರೆ ನೀಡಿದ ರೈತರು!
ಬೆಂಗಳೂರು, ಮೇ. 21: ಭಾರತದ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದಲ್ಲಿ ಕ್ರಮ ಕೈಗೊಳ್ಳುವಂತೆ ದೇಶದ ಪ್ರಮುಖ ಕುಸ್ತಿಪಟುಗಳು ನವದೆಹಲಿಯ ಜಂತರ್ ಮಂತರ್ನಲ್ಲಿ ಸುಮಾರು ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇವರಿಗೆ ದೇಶದ ರೈತ ಸಂಘಟನೆಗಳು ಸಂಪೂರ್ಣ ಬೆಂಬಲ ನೀಡಿದ್ದಾರೆ.
ಕುಸ್ತಿ ಸಂಸ್ಥೆಯ ಮುಖ್ಯಸ್ಥರನ್ನು ಬಂಧಿಸಲು ನೀಡಿರುವ 15 ದಿನಗಳ ಗಡುವು ಭಾನುವಾರ ಕೊನೆಗೊಳ್ಳುಲಿದೆ. ಈ ವಿಷಯದಲ್ಲಿ ಅವರ ಮುಂದಿನ ಕ್ರಮವಾಗಿ 'ದೊಡ್ಡ ನಿರ್ಧಾರ' ಇಂದು ಬಹಿರಂಗಪಡಿಸಬಹುದು. ಈ ಬಗ್ಗೆ ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಅವರು ನವದೆಹಲಿಯ ಜಂತರ್ ಮಂತರ್ನಲ್ಲಿ ಮಾಹಿತಿ ನೀಡಿದ್ದಾರೆ.

ಏಪ್ರಿಲ್ 23 ರಿಂದ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ತಮ್ಮ ಮುಂದಿನ ನಡೆಯನ್ನು ತಿಳಿಸಲು ಮೇ 21 ಅನ್ನು ಗಡುವು ಎಂದು ನಿಗದಿಪಡಿಸಿದ್ದಾರೆ. ಹರಿಯಾಣದ ರೋಹ್ಟಕ್ ಜಿಲ್ಲೆಯ ಮೆಹೆಮ್ ಚೌಬಿಸಿ (24 ಹಳ್ಳಿಗಳ ಕ್ಲಸ್ಟರ್) ಖಾಪ್ನಲ್ಲಿ 'ಮಹಾಪಂಚಾಯತ್' ನಡೆಯಲಿದ್ದು, ಇಲ್ಲಿ ತೆಗೆದುಕೊಂಡ ನಿರ್ಧಾರದಂತೆ ನಾವು ಮುಂದುವರಿಯುತ್ತೇವೆ ಎಂದು ಹೇಳಿದ್ದಾರೆ.
ಹರಿಯಾಣದ ರೋಹ್ಟಕ್ ಜಿಲ್ಲೆಯ ಮಹಾಪಂಚಾಯತ್ನಲ್ಲಿ ಮೆಹೆಮ್ ಚೌಬಿಸಿಯ ಸಮುದಾಯದ ಮುಖಂಡರು, ರೈತ ಸಂಘಟನೆಗಳು ಭಾಗವಹಿಸುವ ನಿರೀಕ್ಷೆಯಿದೆ. "ನಮ್ಮ ಹಿರಿಯರು (ಭಾನುವಾರದಂದು) ತೆಗೆದುಕೊಳ್ಳುವ ನಿರ್ಧಾರವು ದೊಡ್ಡದಾಗಿರಬಹುದು. ಅದು ದೇಶದ ಹಿತಾಸಕ್ತಿಯಲ್ಲದಿರಬಹುದು. ಇದು ರಾಷ್ಟ್ರಕ್ಕೆ ಹಾನಿಯುಂಟು ಮಾಡಬಹುದು' ಎಂದು ಜಂತರ್ ಮಂತರ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ವಿನೇಶ್ ಫೋಗಟ್ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯ ಇತ್ತೀಚಿನ ಬೆಳವಣಿಗೆಗಳ ಪ್ರಮುಖ ಅಂಶಗಳು ಹೀಗಿವೆ.
1. ಆಂದೋಲನದ ನೇತೃತ್ವ ವಹಿಸಿರುವ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಅವರು ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಕ್ಕೆ ಹಾಜರಾಗಲು ಪ್ರಯತ್ನಿಸಿದ್ದರು. ಅಲ್ಲಿ ಅವರ ಪ್ರತಿಭಟನೆಗೆ ಬೆಂಬಲವನ್ನು ಕೋರಿದರು. ಆದರೆ, ದೆಹಲಿ ಪೊಲೀಸರು ಅವರಿಗೆ ಪ್ರವೇಶವನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ.

"ನಮ್ಮಲ್ಲಿ ಯಾವುದೇ ಪ್ರತಿಭಟನಾ ಫಲಕಗಳು, ಪೋಸ್ಟರ್ಗಳು ಅಥವಾ ಬ್ಯಾನರ್ಗಳು ಇರಲಿಲ್ಲ. ಆದರೂ ನಮ್ಮನ್ನು ಹಿಂದಕ್ಕೆ ಕಳುಹಿಸಲಾಗಿದೆ. ನ್ಯಾಯಕ್ಕಾಗಿ ಈ ಹೋರಾಟದಲ್ಲಿ ಧೋನಿ ನಮ್ಮನ್ನು ಬೆಂಬಲಿಸಬೇಕೆಂದು ನಾವು ಬಯಸುತ್ತೇವೆ. ಯಾವುದೇ ಸಕ್ರಿಯ ಕ್ರಿಕೆಟಿಗರು ಇನ್ನೂ ಈ ಬಗ್ಗೆ ಮಾತನಾಡಿಲ್ಲ' ಎಂದು ಬಜರಂಗ್ ಪುನಿಯಾ ಹೇಳಿದ್ದಾರೆ.
2. ದೆಹಲಿ ಪೊಲೀಸರು ಮಾನ್ಯ ಟಿಕೆಟ್ ಹೊಂದಿರದ ಯಾವುದೇ ಕುಸ್ತಿಪಟುಗಳನ್ನು ಒಳಗೆ ಬಿಟ್ಟಿಲ್ಲ. ಹಿರಿಯ ಅಧಿಕಾರಿಯೊಬ್ಬರು ಪಂದ್ಯವನ್ನು ವೀಕ್ಷಿಸಲು 10-12 ಕುಸ್ತಿಪಟುಗಳು ಬಂದಿದ್ದರು ಆದರೆ ಟಿಕೆಟ್ ಇಲ್ಲದವರು ಮಾತ್ರ ಹಿಂತಿರುಗಿದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
3. ಮಂಗಳವಾರ, ಪ್ರತಿಭಟನೆಗೆ ಒಂದು ತಿಂಗಳು ಮುಗಿಯಲಿದ್ದು, ಕುಸ್ತಿಪಟುಗಳು ಇಂಡಿಯಾ ಗೇಟ್ಗೆ ಕ್ಯಾಂಡಲ್ಲೈಟ್ ಮೆರವಣಿಗೆಯನ್ನು ಯೋಜಿಸಿದ್ದಾರೆ. ಗುರುವಾರ ಮಹಾತ್ಮಾ ಗಾಂಧಿ ಅವರಿಗೆ ಗೌರವ ಸಲ್ಲಿಸಲು ರಾಜ್ಘಾಟ್ಗೆ ಭೇಟಿ ನೀಡಿದ್ದರು, ಜೊತೆಗೆ ತಮ್ಮ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಜನರನ್ನು ಒತ್ತಾಯಿಸಿದರು.
ಈ ಹಿಂದೆ ಜಂತರ್ ಮಂತರ್ನಲ್ಲಿ ಮೂರು ದಿನಗಳ ಧರಣಿಯನ್ನು ಆಯೋಜಿಸಿದ್ದ ಪ್ರತಿಭಟನಾಕಾರರು ಸರ್ಕಾರದ ಹೇಳಿಕೆ ನಂಬಿ ಆಂದೋಲನ ಕೈಬಿಟ್ಟಿದ್ದರು. ಆದರೆ, ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನ ಮತ್ತು ಎಫ್ಐಆರ್ ಆಗದ ಕಾರಣ ಎರಡನೇ ಬಾರಿ ಪ್ರತಿಭಟನೆ ಆರಂಭಿಸಿದ್ದಾರೆ. ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ದೆಹಲಿ ಪೊಲೀಸರು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎರಡು ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಅವರು ಎದುರಿಸುತ್ತಿದ್ದಾರೆ.
4. ಪೊಲೀಸರ ಪ್ರಕಾರ, ತನಿಖೆಯಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಎರಡು ಬಾರಿ ಪ್ರಶ್ನಿಸಲಾಗಿದೆ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ಕೂಡ ರಚಿಸಲಾಗಿದೆ. ಮುಂದಿನ ವಿಚಾರಣೆಯನ್ನು ಮೇ 27 ರಂದು ನಿಗದಿಪಡಿಸಲಾಗಿದೆ.
5. ಗುವಾಹಟಿಯಲ್ಲಿ, ಸೋಲಗಾಂವ್ನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್ಎಐ) ತರಬೇತಿ ಕೇಂದ್ರದ ಉಸ್ತುವಾರಿ ಮತ್ತು ಈಜು ತರಬೇತುದಾರರಾದ ಮೃಣಾಲ್ ಬಸುಮತರಿ ವಿರುದ್ಧ ಗುರುವಾರ ಲೈಂಗಿಕ ಕಿರುಕುಳದ ದೂರು ದಾಖಲಿಸಲಾಗಿದೆ. ಹೆಚ್ಚಿನ ಅಥ್ಲೀಟ್ಗಳು ಅಪ್ರಾಪ್ತ ಬಾಲಕಿಯರಾಗಿರುವುದರಿಂದ 'ವಿಷಯದ ಗಂಭೀರತೆ'ಯಿಂದ ದೂರು ದಾಖಲಿಸಲಾಗಿದೆ ಎಂದು ಎಸ್ಎಐ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.












Click it and Unblock the Notifications