ನಕಲಿ ಛಾಪಾ ಕಾಗದ ಕೇಸ್: ತೆಲಗಿ ಹಾಗೂ ಏಳು ಮಂದಿಗೆ ಖುಲಾಸೆ
ನಾಸೀಕ್(ಮಹಾರಾಷ್ಟ್ರ), ಜನವರಿ 01 : ಬಹುಕೋಟಿ ಛಾಪಾ ಕಾಗದ ಹಗರಣದ ರೂವಾರಿ ಕರೀಂ ಲಾಲಾ ತೆಲಗಿ ಸೇರಿದಂತೆ ಏಳು ಮಂದಿಗೆ ಖುಲಾಸೆಯಾಗಿದೆ. ಸರಿಯಾದ ಸಾಕ್ಷ್ಯಾಧಾರಗಳಿಲ್ಲದ ಕಾರಣ ಎಲ್ಲರನ್ನು ಖುಲಾಸೆಗೊಳಿಸಿರುವುದಾಗಿ ಮಹಾರಾಷ್ಟ್ರದ ನಾಸೀಕ್ ಕೋರ್ಟ್ ತೀರ್ಪು ನೀಡಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ತೆಲಗಿ ಹಾಗೂ ಅವನ ಸಹಚರರ ವಿರುದ್ಧ 42 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 9 ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಗೊಂಡಿದೆ. 9ರ ಪೈಕಿ ಕೆಲವು ಪ್ರಕರಣಗಳಲ್ಲಿ ತೆಲಗಿಗೆ ಜೀವಾವಧಿ ಶಿಕ್ಷೆಯಾಗಿತ್ತು.
ನಕಲಿ ಛಾಪಾಕಾಗದ ಹಗರಣ, ಇನ್ನೂ ಸಿಕ್ಕಿಲ್ಲ ಬಹುಮಾನದ ಹಣ!
ಛಾಪಾ ಕಾಗದ ಹಗರಣದಲ್ಲಿ 2006 ರಿಂದ ಜೈಲಿನಲ್ಲಿ ತೆಲಗಿಗೆ 30 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. 11 ವರ್ಷಗಳ ಶಿಕ್ಷೆ ಪೂರೈಸಿದ್ದ 56 ವರ್ಷ ವಯಸ್ಸಿಕ ಕರೀಂ ಲಾಲಾ ತೆಲಗಿ 2017ರಲ್ಲಿ ಬಹು ಅಂಗಾಂಗ ವೈಫಲ್ಯದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದ.
ಬೆಳಗಾವಿಯ ಖಾನಾಪುರ ಮೂಲದ ತೆಲಗಿ ಸೇರಿದಂತೆ ಏಳು ಮಂದಿಯ ವಿರುದ್ಧ 2004ರಲ್ಲಿ ಸಿಬಿಐ ದೋಷಾರೋಪಣ ಪಟ್ಟಿ ಸಲ್ಲಿಸಿತ್ತು. ಆದರೆ, ಆರೋಪಿಗಳ ವಿರುದ್ಧ ಸರಿಯಾದ ಸಾಕ್ಷಿ ಒದಗಿಸುವಲ್ಲಿ ವಿಫಲವಾದ ಕಾರಣ, ಎಲ್ಲರನ್ನು ಖುಲಾಸೆಗೊಳಿಸಲಾಗಿದೆ ಎಂದು ಸೆಷನ್ಸ್ ಕೋರ್ಟ್ ಜಡ್ಜ್ ಪಿಆರ್ ದೇಶ್ ಮುಖ್ ಅವರು ಆದೇಶ ನೀಡಿದ್ದಾರೆ.
ತೆಲಗಿ, ಆರ್ ಪಿಎಫ್ ಅಧಿಕಾರಿಗಳಾದ ರಂಬಾವು ಪವಾರ್, ಬ್ರಿಜ್ ಕಿಶೋರ್ ತಿವಾರಿ, ವಿಲಾಸ್ ಚಂದ್ರ ಜೋಶಿ, ಧ್ಯಾನೇಶ್ವರ್ ಬರ್ಕೆ, ಪ್ರಮುಖ ಸಹಾಗೆ, ಮೊಹಮ್ಮದ್ ಸರ್ವಾರ್ ಹಾಗೂ ವಿಲಾಸ್ ಮೋರೆ ಅವರಿಗೆ ಈ ಪ್ರಕರಣದಿಂದ ಖುಲಾಸೆಯಾಗಿದೆ.(ಪಿಟಿಐ)