ಸಮರ್ಪಕ ದಾಖಲೆಗೂ ಮುನ್ನ ಕೋವ್ಯಾಕ್ಸಿನ್ ಲಸಿಕೆಗೆ ಅನುಮತಿ: ವಿಜ್ಞಾನಿಗಳ ಆಕ್ಷೇಪ
ನವದೆಹಲಿ, ಜನವರಿ 4: ದೇಶದಲ್ಲಿ ಎರಡು ಕೊರೊನಾ ವೈರಸ್ ಲಸಿಕೆಗಳ ತುರ್ತು ಬಳಕೆಗೆ ಡಿಸಿಜಿಐ ಅನುಮತಿ ನೀಡಿದೆ. ಆದರೆ ಇದು ಆತುರದ ನಿರ್ಧಾರ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಲಸಿಕೆಯ ಪರಿಣಾಮ ಮತ್ತು ದಕ್ಷತೆಯ ಬಗ್ಗೆ ಸಮರ್ಪಕ ದತ್ತಾಂಶಗಳಿಲ್ಲದೆ ಅನುಮೋದನೆ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತವಾಗಿದೆ.
ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಲಸಿಕೆಯನ್ನು ಕ್ಲಿನಿಕಲ್ ಪ್ರಯೋಗದ ಮಾದರಿಯಲ್ಲಿಯೇ ಬಳಸಲಾಗುವುದು ಎಂದು ರಾಷ್ಟ್ರೀಯ ಕೋವಿಡ್ ಕಾರ್ಯಪಡೆ ಸದಸ್ಯರು ಸ್ಪಷ್ಟನೆ ನೀಡಿದ್ದಾರೆ. ನಮ್ಮ ಲಸಿಕೆ ಭದ್ರತೆಯ ನಿಟ್ಟಿನಲ್ಲಿ ತುರ್ತು ಬಳಕೆಯ ಅನುಮೋದನೆ ಕಾರ್ಯತಂತ್ರ ನಿರ್ಧಾರ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.
ಕೋವ್ಯಾಕ್ಸಿನ್ ಲಸಿಕೆಯ ಮೊದಲ ಮತ್ತು ಎರಡನೆಯ ಹಂತದ ಪ್ರಯೋಗಗಳ ಫಲಿತಾಂಶಗಳು ಸ್ಫೂರ್ತಿದಾಯಕವಾಗಿದ್ದವು. ಆದರೆ ನವೆಂಬರ್ನಲ್ಲಿ ಆರಂಭವಾದ ಮೂರನ ಹಂತದ ಪ್ರಯೋಗದ ಪರಿಣಾಮದ ದತ್ತಾಂಶಗಳು ಇನ್ನೂ ಲಭ್ಯವಾಗದೆ ಇರುವಾಗ ಅನುಮೋದನೆ ನೀಡಲು ಹೇಗೆ ಸಾಧ್ಯ ಎಂದು ಅನೇಕ ಸ್ವತಂತ್ರ ವಿಜ್ಞಾನಿಗಳು ಪ್ರಶ್ನಿಸಿದ್ದಾರೆ. ಮುಂದೆ ಓದಿ.

ತುರ್ತು ಬಳಕೆ ಬೇಡ
ಲಸಿಕೆಯ ಫಲದಾಯಕತೆಯ ದತ್ತಾಂಶವು ವೈರಸ್ ಪ್ರಭಾವವನ್ನು ತಡೆಯುವಲ್ಲಿ ಎಷ್ಟು ಪರಿಣಾಮಕಾರಿ ಎಂಬುದನ್ನು ಸೂಚಿಸುತ್ತದೆ. ಹೀಗಾಗಿ ಕೋವ್ಯಾಕ್ಸಿನ್ ಲಸಿಕೆಯನ್ನು ವ್ಯಾಪಕ ತುರ್ತು ಬಳಕೆಗೆ ಪ್ರಯೋಗಿಸುವುದು ಸೂಕ್ತವಲ್ಲ. ಅದು ಸುರಕ್ಷಿತ ಹಾಗೂ ಹಾನಿಕಾರಕ ಅಲ್ಲದೆ ಇರಬಹುದು. ಆದರೆ ಅದರ ಫಲದಾಯಕತೆ ಮುಖ್ಯ ಹಾಗೂ ಅದು ಸಾಬೀತಾಗಬೇಕು ಎಂದು ಪರಿಣತರು ಹೇಳಿದ್ದಾರೆ.

ಮಾನದಂಡ ಅನುಸರಿಸಿಲ್ಲ
'ಕೋವಿಡ್ ಲಸಿಕೆಗೆ ಅನುಮತಿ ನೀಡಬೇಕಾದರೆ ಯಾವ ಮಾನದಂಡಗಳನ್ನು ತಲುಪಬೇಕು ಎಂದು ಸೆಪ್ಟೆಂಬರ್ನಲ್ಲಿ ಡಿಸಿಜಿಐ ಮುಂದಿಟ್ಟ ಕರಡು ಮಾರ್ಗಸೂಚಿಯನ್ನು ಗಮನಿಸಿದರೆ, ಅವರು ಸುರಕ್ಷತೆ ಮತ್ತು ಫಲದಾಯಕತೆಯ ದತ್ತಾಂಶಗಳನ್ನು ಬಯಸುತ್ತಾರೆ. ಜತೆಗೆ ಸುರಕ್ಷತೆಯ ಕುರಿತಾದ ದತ್ತಾಂಶಗಳಿಗೆ ಕನಿಷ್ಠ ಎರಡು ತಿಂಗಳು ಫಾಲೋಅಪ್ ಬೇಕಾಗುತ್ತದೆ. ಆದರೆ ಇಲ್ಲಿ ಆ ಕ್ರಮವನ್ನು ಅದು ಅನುಸರಿಸಿಲ್ಲ' ಎಂದು ಲಸಿಕೆ ವಿಜ್ಞಾನಿ ಡಾ. ಗಗನದೀಪ್ ಕಂಗ್ ಹೇಳಿದ್ದಾರೆ.

ದತ್ತಾಂಶ ಎಲ್ಲಿದೆ?
'ಕೋವ್ಯಾಕ್ಸಿನ್ ವಿಚಾರದಲ್ಲಿ ಅವರು ಇನ್ನೂ ಸ್ವಯಂ ಸೇವಕರ ನೇಮಕಾತಿಯನ್ನೇ ಮುಗಿಸಿಲ್ಲ. ಡಿಸಿಜಿಐ ಕೇಳಿರುವ ಸುರಕ್ಷತಾ ದತ್ತಾಂಶ ಅವರ ಬಳಿ ಎಲ್ಲಿದೆ? ಜತೆಗೆ ಖಂಡಿತವಾಗಿಯೂ ಫಲದಾಯಕತೆಯ ದತ್ತಾಂಶವೂ ಅವರ ಬಳಿ ಇಲ್ಲ' ಎಂದು ಅವರು ತಿಳಿಸಿದ್ದಾರೆ.

ಕಂಪೆನಿಗಳಿಗೇ ನಷ್ಟ
'ತುರ್ತು ಬಳಕೆಯ ಅಧಿಕಾರಕ್ಕೂ ಫಲದಾಯಕತೆಯ ದತ್ತಾಂಶದ ಅಗತ್ಯವಿದೆ. ಭಾರತದ ಈ ಲಸಿಕೆಗಳು ಮುಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಗೂ ಪ್ರವೇಶಿಸಲಿವೆ. ನಮ್ಮ ನಿಯಂತ್ರಣಾ ಸಂಸ್ಥೆಗಳ ಬಗ್ಗೆ ನಂಬಿಕೆ ಇರುವುದರಿಂದ ಮತ್ತಷ್ಟು ಪರಿಶೀಲನೆ ಬಹಳ ಮುಖ್ಯ. ಇಲ್ಲದಿದ್ದರೆ ಈ ಕಂಪೆನಿಗಳೇ ಮುಂದೆ ಸಂಕಷ್ಟ ಅನುಭವಿಸಬೇಕಾಗುತ್ತದೆ' ಎಂದು ಅಶೋಕ ವಿಶ್ವವಿದ್ಯಾಲಯದ ತ್ರಿವೇದಿ ಸ್ಕೂಲ್ ಆಫ್ ಬಯೋಸೈನ್ಸಸ್ನ ವೈರಾಲಜಿಸ್ಟ್ ಶಾಹೀದ್ ಜಮೀಲ್ ಹೇಳಿದ್ದಾರೆ.












Click it and Unblock the Notifications