Maharashtra CM: ಮಹಾರಾಷ್ಟ್ರ ಸಿಎಂ ಆಯ್ಕೆ ಕಸರತ್ತು ಕೊನೆ ಹಂತಕ್ಕೆ
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಮಹಾಯುತಿ ಇದೀಗ ಸಿಎಂ ಆಯ್ಕೆ ಕಸರತ್ತಿನಲ್ಲಿ ತೊಡಗಿದೆ. ಮೈತ್ರಿಕೂಟದ ಮೂವರು ಪ್ರಮುಖ ನಾಯಕರಾದ ದೇವೇಂದ್ರ ಫಡ್ನವೀಸ್, ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಪ್ರಮುಖ ತಂತ್ರಜ್ಞ ಅಮಿತ್ ಶಾ ಅವರನ್ನು ಭೇಟಿಯಾಗಿದ್ದು ಮಹಾರಾಷ್ಟ್ರ ಮುಖ್ಯಮಂತ್ರಿ ಆಯ್ಕೆ ಕಸರತ್ತು ಬಹುತೇಕ ಕೊನೆ ಹಂತಕ್ಕೆ ತಲುಪಿದೆ.
ಮುಖ್ಯಮಂತ್ರಿ ಆಯ್ಕೆ ಬಗ್ಗೆ ಗೊಂದಲಗಳು ಈಗಾಗಲೇ ಬಹುತೇಕ ಬಗೆಹರಿದಿವೆ. ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಏಕನಾಥ್ ಶಿಂಧೆ ಬಿಜೆಪಿ ಒತ್ತಡಕ್ಕೆ ಮಣಿದಿದ್ದಾರೆ. ಬಿಜೆಪಿ ಕೇಂದ್ರ ನಾಯಕತ್ವದ ನಿರ್ಧಾರಕ್ಕೆ ಬದ್ದರಾಗಿರುವುದಾಗಿ ಹೇಳಿದ ಮರುದಿನವೇ ಸಭೆ ನಡೆಯುತ್ತಿದ್ದು, ದೇವೇಂದ್ರ ಫಡ್ನವಿಸ್ ಸಿಎಂ ಆಗುವುದು ಬಹುತೇಕ ಖಚಿತವಾಗಿದೆ.

ಸುದ್ದಿಗಾರರ ಜೊತೆ ಮಾತನಾಡಿದ್ದ ಏಕನಾಥ್ ಶಿಂಧೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ನಾನು ಅಡ್ಡಿಯಾಗುವುದಿಲ್ಲ ಎಂದು ಹೇಳಿದ್ದೇನೆ. ಅವರು ಏನು ನಿರ್ಧಾರ ಮಾಡಿದರೂ ಅದನ್ನು ನಾವು ಒಪ್ಪಿಕೊಳ್ಳುತ್ತೇವೆ. ನನಗೆ ಅಧಿಕಾರದ ಬಗ್ಗೆ ದುರಾಸೆಯಿಲ್ಲ, ಯಾರಿಗೂ ಅಧಿಕಾರ ಹಂಚಿಕೆಯಲ್ಲಿ ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮೂಲಗಳ ಪ್ರಕಾರ ಬಿಜೆಪಿಯಿಂದ ದೇವೇಂದ್ರ ಫಡ್ನವಿಸ್ ಸಿಎಂ ಆಗಲಿದ್ದು, ಇಬ್ಬರಿಗೆ ಉಪಮುಖ್ಯಮಂತ್ರಿ ಪಟ್ಟ ಸಿಗಲಿದೆ ಎಂದು ಹೇಳಿದ್ದಾರೆ. ಫಡ್ನವಿಸ್ ಆಯ್ಕೆಗೆ ಮತ್ತೊಂದು ಸಮಸ್ಯೆ ಕೂಡ ಎದುರಾಗಿದ್ದು ಜಾತಿ ಲೆಕ್ಕಾಚಾರ ಶುರುವಾಗಿದೆ. 288 ಶಾಸಕರಲ್ಲಿ ಹೆಚ್ಚಿನ ಸಂಖ್ಯೆಯ ಶಾಸಕರು ಮರಾಠ ಸಮುದಾಯಕ್ಕೆ ಸೇರಿದ್ದಾರೆ. ದೇವೇಂದ್ರ ಫಡ್ನವಿಸ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 2014ರಲ್ಲಿ ಇದೇ ವಿಚಾರದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿತ್ತು.
ಈ ವಿಚಾರದ ಬಗ್ಗೆ ಅಮಿತ್ ಶಾ ಅವರು, ಪಕ್ಷದ ಹಿರಿಯ ನಾಯಕ ವಿನೋದ್ ತಾವ್ಡೆ ಜೊತೆ ಸಮಾಲೋಚನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮರಾಠಾ ಸಮುದಾಯದ ಮೀಸಲಾಯಿ ಹೋರಾಟದ ಸಂದರ್ಭದಲ್ಲಿ ಮರಾಠ ನಾಯಕ ಮನೋಜ್ ಜಾರಂಗೆ ಅವರು, ಫಡ್ನವಿಸ್ ಅವರನ್ನು ಮರಾಠಾ ದ್ವೇಷಿ ಎಂದು ಕರೆದಿದ್ದರು. ಬಿಜೆಪಿ ಮುಖ್ಯಮಂತ್ರಿ ಹೆಸರು ಘೋಷಣೆ ಮಾಡುವ ಮೊದಲು ಎಲ್ಲಾ ಗೊಂದಲಗಳನ್ನು ಬಗೆಹರಿಸಲು ನಿರ್ಧರಿಸಿದೆ.
ಮೂಲಗಳ ಪ್ರಕಾರ ಸಚಿವ ಸಂಪುಟದಲ್ಲಿ 42 ಮಂತ್ರಿಗಳ ಬಲವಿದ್ದು, ಇದರಲ್ಲಿ ಬಿಜೆಪಿಗೆ 22, ಶಿವಸೇನೆಗೆ 12 ಮತ್ತು ಅಜಿತ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ 10 ಸಚಿವ ಸ್ಥಾನ ಸಿಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಬಿಜೆಪಿ ಪ್ರಮುಖ ಖಾತೆಗಳಿಗಾಗಿ ಲಾಭಿ ಮಾಡುತ್ತಿದೆ ಎಂದು ವರದಿ ತಿಳಿಸಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗರಿಷ್ಠವಾಗಿ ಸ್ಪರ್ಧಿಸಿ 132 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.












Click it and Unblock the Notifications