ಸಂಯಮದಿಂದ ವರ್ತಿಸಿ: ರಾಜಕೀಯ ಪಕ್ಷಗಳಿಗೆ, ಸ್ಟಾರ್ ಪ್ರಚಾರಕರಿಗೆ ಆಯೋಗದ ಸೂಚನೆ
ನವದೆಹಲಿ, ಮೇ. 02: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಕರ್ನಾಟಕದಲ್ಲಿ ಚುನಾವಣಾ ಪ್ರಚಾರದ ವೇಳೆ ಎಚ್ಚರಿಕೆ ಮತ್ತು ಸಂಯಮದಿಂದ ವರ್ತಿಸುವಂತೆ ಮತ್ತು ಚುನಾವಣಾ ವಾತಾವರಣವನ್ನು ಹಾಳು ಮಾಡದಂತೆ ರಾಜಕೀಯ ಪಕ್ಷಗಳು ಮತ್ತು ಅವುಗಳ ಸ್ಟಾರ್ ಪ್ರಚಾರಕರಿಗೆ ಚುನಾವಣಾ ಆಯೋಗ ಮಂಗಳವಾರ ಸಲಹೆ ನೀಡಿದೆ.
ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು ಮತ್ತು ಅವರ ಸ್ಟಾರ್ ಪ್ರಚಾರಕರು "ತಮ್ಮ ಮಾತುಗಳಲ್ಲಿ ಎಚ್ಚರಿಕೆ ಮತ್ತು ಸಂಯಮವನ್ನು ಕಾಪಾಡುವಂತೆ" ಎಂದು ಸಲಹೆ ನೀಡಿದೆ. ಇದನ್ನು ಪಕ್ಷಗಳು ಪಾಲಿಸಬೇಕು ಇಲ್ಲದಿದ್ದರೇ ಸೂಕ್ತ ಮತ್ತು ಸಮಯೋಚಿತ ಕ್ರಮ ತೆಗೆದುಕೊಳ್ಳಲು ಚುನಾವಣಾ ಆಯೋಗ ಸಿಇಒಗಳಿಗೆ ನಿರ್ದೇಶನ ನೀಡಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ನಿಯೋಗಗಳು ಕಳೆದ ಕೆಲವು ದಿನಗಳಲ್ಲಿ ಚುನಾವಣಾ ಪ್ರಚಾರದ ನಡುವೆ ಮಾಡಿದ ವಿವಿಧ ಟೀಕೆಗಳನ್ನು ಖಂಡಿಸಿ ಕ್ರಮ ತೆಗೆದುಕೊಳ್ಳುವಂತೆ ಆಯೋಗವನ್ನು ಭೇಟಿ ಮಾಡಿವೆ. ಆಯೋಗವು ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಚಾರದಲ್ಲಿನ ಭಾಷಣಗಳ ಕುಸಿತದ ಗುಣಮಟ್ಟವನ್ನು ಗಂಭೀರವಾಗಿ ಪರಿಗಣಿಸಿದೆ.
ರಾಜ್ಯ ಚುನಾವಣೆಗಳಿಗೆ ಮುಂಚಿತವಾಗಿ ಪಕ್ಷಗಳ ಸ್ಟಾರ್ ಪ್ರಚಾರಕರು "ಅಸಮರ್ಪಕ ಶಬ್ದಗಳು ಮತ್ತು ಭಾಷೆ" ಬಳಸುತ್ತಿರುವ ನಿದರ್ಶನಗಳನ್ನು ಆಯೋಗ ಉಲ್ಲೇಖಿಸಿದೆ. ಪ್ರಸ್ತುತ ರಾಜ್ಯದಲ್ಲಿ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆ ಮತ್ತು ಇತರ ಶಾಸನಬದ್ಧ ನಿಬಂಧನೆಗಳ ಬಗ್ಗೆಯೂ ರಾಜಕೀಯ ಪಕ್ಷಗಳು ಗಮನ ಹರಿಸಬೇಕು ಎಂದು ತಿಳಿಸಿದೆ.

ಇದಕ್ಕೂ ಮುನ್ನ ಬಿಜೆಪಿ ಚುನಾವಣಾ ಆಯೋಗವನ್ನು ಭೇಟಿ ಮಾಡಿದ್ದು, ವಿರೋಧ ಪಕ್ಷವು ವಿಭಜನೆಯ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರನ್ನು 'ನಾಲಾಯಕ್' ಎಂದು ಕರೆದಿರುವ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಮತ್ತು ಬಜರಂಗದಳದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕಾಂಗ್ರೆಸ್ ಭರವಸೆಯನ್ನು ನಿಯೋಗ ಉಲ್ಲೇಖಿಸಿದೆ. ಬಿಜೆಪಿ ನಿಯೋಗದ ನೇತೃತ್ವ ವಹಿಸಿರುವುದು ಕೇಂದ್ರ ಸಚಿವ ಪಿಯೂಷ್ ಗೋಯಲ್.
ಇತ್ತ, ಕಾಂಗ್ರೆಸ್ ತಂಡವು ದೆಹಲಿಯಲ್ಲಿ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿದೆ. ಗೃಹ ಸಚಿವ ಅಮಿತ್ ಶಾ, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು "ದ್ವೇಷ ಭಾಷಣ" ಮಾಡುತ್ತಿದ್ದಾರೆ ಎಂದು ಆರೋಪಿಸಿದೆ. ಮೇ 10 ರಂದು ನಡೆಯಲಿರುವ ಚುನಾವಣೆಯ ಪ್ರಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ವಾಗ್ದಾಳಿಯಲ್ಲಿ ತೊಡಗಿವೆ.












Click it and Unblock the Notifications