ಚುನಾವಣಾ ಫಲಿತಾಂಶ; ವಿಜಯೋತ್ಸವಕ್ಕೆ ಬ್ರೇಕ್ ಹಾಕಿದ ಚುನಾವಣಾ ಆಯೋಗ
ನವದೆಹಲಿ, ಏಪ್ರಿಲ್ 27: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಮೇ 2ರಂದು ಪ್ರಕಟಗೊಳ್ಳಲಿದ್ದು, ಮತದಾನಕ್ಕೂ ಮುನ್ನ ಅಥವಾ ಮತದಾನದ ನಂತರ ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರು ವಿಜಯೋತ್ಸವ ಹಾಗೂ ಮೆರವಣಿಗೆ ಹಮ್ಮಿಕೊಳ್ಳುವಂತಿಲ್ಲ ಎಂದು ಚುನಾವಣಾ ಆಯೋಗ ಆದೇಶಿಸಿದೆ.
ಮಂಗಳವಾರ ಬೆಳಿಗ್ಗೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಚುನಾವಣೆ ನಡೆದಿರುವ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ, ವಿಜಯೋತ್ಸವ ನಡೆಸದಂತೆ ಆದೇಶ ನೀಡಿದೆ. ದೇಶದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.
ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಯು ಪ್ರಮಾಣ ಪತ್ರ ಸ್ವೀಕರಿಸುವಾಗಲೂ ಅವರೊಂದಿಗೆ ಇಬ್ಬರಿಗೂ ಹೆಚ್ಚು ಮಂದಿ ಇರುವಂತಿಲ್ಲ ಎಂದು ನಿಯಮ ಹೇರಿದೆ.

ಆಗಸ್ಟ್ 21ರಂದು ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಹೊರಡಿಸಲಾಗಿತ್ತು. ಕೊರೊನಾ ಸೋಂಕು ಹರಡುವಿಕೆ ತಡೆಯಲು ಎಲ್ಲಾ ಪಕ್ಷಗಳ ನಾಯಕರು, ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಅನುಸರಿಸಬೇಕಾದ ಶಿಷ್ಟಾಚಾರಗಳನ್ನು ರೂಪಿಸಿತ್ತು. ಫಲಿತಾಂಶ ದಿನದಂದೂ ಇದು ಅನ್ವಯವಾಗುತ್ತದೆ ಎಂದು ಆಯೋಗ ತಿಳಿಸಿದೆ.
ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಮತದಾನಗಳು ನಡೆದಿವೆ. ಪಶ್ಚಿಮ ಬಂಗಾಳದಲ್ಲಿ ಕೊನೆ ಹಂತದ ಮತದಾನ ಬಾಕಿಯಿದ್ದು, ಏಪ್ರಿಲ್ 29ರಂದು ನಡೆಯಲಿದೆ. ಮೇ 2ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಸೋಮವಾರವಷ್ಟೇ, ಕೊರೊನಾ ಎರಡನೇ ಅಲೆ ಇಷ್ಟು ಆತಂಕಕಾರಿ ಮಟ್ಟದಲ್ಲಿ ಹರಡಲು ಚುನಾವಣಾ ಆಯೋಗವೇ ಕಾರಣ ಎಂದು ಮದ್ರಾಸ್ ಹೈಕೋರ್ಟ್ ಕಿಡಿಕಾರಿತ್ತು. ಅತ್ಯಂತ ಬೇಜವಾಬ್ದಾರಿಯಿಂದ ಚುನಾವಣಾ ಆಯೋಗ ವರ್ತಿಸುತ್ತಿದೆ ಎಂದು ಕಿಡಿಕಾರಿತ್ತು.












Click it and Unblock the Notifications