Breaking; 5 ರಾಜ್ಯಗಳ ಚುನಾವಣಾ ಪ್ರಚಾರ ಸಮಾವೇಶಕ್ಕೆ ಒಪ್ಪಿಗೆ
ನವದೆಹಲಿ, ಫೆಬ್ರವರಿ 06; ಕೇಂದ್ರ ಚುನಾವಣಾ ಆಯೋಗ 5 ರಾಜ್ಯಗಳಲ್ಲಿ ಚುನಾವಣಾ ಸಮಾವೇಶ ನಡೆಸಲು ಹೇರಿದ್ದ ನಿರ್ಬಂಧ ತೆರವುಗೊಳಿಸಿದೆ. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಸಮಾವೇಶ ನಡೆಸಲು ನಿರ್ಬಂಧ ಹೇರಲಾಗಿತ್ತು.
ಭಾನುವಾರ ಈ ಕುರಿತು ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಬಹಿರಂಗ ಮತ್ತು ಒಳಾಂಗಣದಲ್ಲಿ ಚುನಾವಣಾ ಪ್ರಚಾರ ಸಮಾವೇಶಗಳನ್ನು ನಡೆಸಲು ಆಯೋಗ ಅನುಮತಿ ನೀಡಿದೆ.
ಒಳಾಂಗಣದಲ್ಲಿ ಚುನಾವಣಾ ಸಮಾವೇಶ ನಡೆಸುವಾಗ ಶೇ 50ರಷ್ಟು ಜನರು ಮಾತ್ರ ಇರಬೇಕು. ಬಹಿರಂಗ ಸಮಾವೇಶಗಳನ್ನು ನಡೆಸುವಾಗ ಶೇ 30ರಷ್ಟು ಜನರು ಸೇರಲು ಅವಕಾಶ ನೀಡಲಾಗಿದೆ. ಈಗಾಗಲೇ 5 ರಾಜ್ಯಗಳ ಚುನಾವಣಾ ಪ್ರಚಾರ ಆರಂಭವಾಗಿದೆ.

ಸಮಾವೇಶಗಳನ್ನು ನಡೆಸಲು ಚುನಾವಣಾ ಆಯೋಗ ಅನುಮತಿ ನೀಡಿದೆ. ಅದರೆ ವಾಹನಗಳ ಮೂಲಕ ಜಾಥಾ, ರೋಡ್ ಶೋ, ಪಾದಯಾತ್ರೆ ಮೇಲೆ ಹೇರಿದ್ದ ನಿರ್ಬಂಧ ಮುಂದುವರೆಯಲಿದೆ. ಮನೆ-ಮನೆ ಪ್ರಚಾರಕ್ಕೆ ಸಹ 20 ಜನರ ಮಿತಿ ಮುಂದುವರೆಯಲಿದೆ.
5 ರಾಜ್ಯಗಳ ಚುನಾವಣೆಯ ಮೊದಲ ಹಂತದ ಮತದಾನ ಫೆಬ್ರವರಿ 10 ರಂದು ನಡೆಯಲಿದೆ. ಚುನಾವಣಣೆಗೆ ನಾಲ್ಕು ದಿನಗಳು ಬಾಕಿ ಇರುವಾಗ ಸಮಾವೇಶಗಳಿಗೆ ಚುನಾವಣಾ ಆಯೋಗ ಅನುಮತಿ ನೀಡಿದೆ. 2ನೇ ಹಂತದ ಮತದಾನ ಫೆಬ್ರವರಿ 14ರಂದು ನಡೆಯಲಿದೆ.
ಐದು ರಾಜ್ಯಗಳ ಪೈಕಿ ಉತ್ತರ ಪ್ರದೇಶದಲ್ಲಿ 7 ಹಂತಗಳಲ್ಲಿ 403 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಮೊದಲ ಹಂತದ ಮತದಾನ ಫೆಬ್ರವರಿ 10ರಂದು ನಡೆಯಲಿದೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತದಲ್ಲಿ ಚುನಾವಣೆ ನಡೆಯಲಿದೆ.
ಉತ್ತರಾಖಂಡ ರಾಜ್ಯದ 70 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಫೆಬ್ರವರಿ 14ರಂದು ಮತದಾನ ನಡೆಯಲಿದೆ. ಪಂಜಾಬ್ ರಾಜ್ಯದ 117 ಸ್ಥಾನಗಳಿಗೆ ಒಂದೇ ಹಂತದಲ್ಲಿ ಫೆಬ್ರವರಿ 20ರಂದು ಚುನಾವಣೆ ನಡೆಯಲಿದೆ.
ಮಣಿಪುರ ರಾಜ್ಯದ 60 ಕ್ಷೇತ್ರಗಳಿಗೆ ಫೆಬ್ರವರಿ 27, ಮಾರ್ಚ್ 3ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಗೋವಾ ರಾಜ್ಯದ 40 ಸ್ಥಾನಗಳಿಗೆ ಒಂದೇ ಹಂತದಲ್ಲಿ ಫೆಬ್ರವರಿ 14ರಂದು ಮತದಾನ ನಿಗದಿಯಾಗಿದೆ.
ದೇಶದಲ್ಲಿ ಕೋವಿಡ್ 3ನೇ ಅಲೆಯಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಹೆಚ್ಚು ಜನರು ಸೇರುವುದನ್ನು ತಡೆಯಲು ಸಮಾವೇಶಗಳ ಮೇಲೆ ನಿಯಂತ್ರಣ ಹೇರಲಾಗಿತ್ತು.
ಈಗ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾದ ಹಿನ್ನಲೆಯಲ್ಲಿ ಸಭೆ, ಸಮಾರಂಭಗಳಿಗೆ ಅನುಮತಿ ನೀಡಲಾಗಿದೆ. ಭಾನುವಾರದ ಹೆಲ್ತ್ ಬುಲೆಟಿನ್ ಪ್ರಕಾರ ಭಾರತದಲ್ಲಿ 1,07,474 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ.
24 ಗಂಟೆಯಲ್ಲಿ ದೇಶದಲ್ಲಿ 2,13,246 ಜನರು ಗುಣಮುಖಗೊಂಡಿದ್ದಾರೆ. 865 ಜನರು ಸಾವನ್ನಪ್ಪಿದ್ದಾರೆ. ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 12,25,011 ಆಗಿದ್ದು, ಪಾಸಿಟಿವಿಟಿ ದರ ಶೇ 7.42 ಆಗಿದೆ.












Click it and Unblock the Notifications