ಚಿರಾಗ್ ಪಾಸ್ವಾನ್ ಪಾಲಾದ ಲೋಕಜನಶಕ್ತಿ 'ಹೆಲಿಕಾಪ್ಟರ್'!
ನವದೆಹಲಿ, ಅಕ್ಟೋಬರ್ 05; ಕೇಂದ್ರ ಚುನಾವಣಾ ಆಯೋಗ ಲೋಕ ಜನಶಕ್ತಿ ಪಕ್ಷದ ಚಿಹ್ನೆ ಮತ್ತು ಹೆಸರು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ಚಿರಾಗ್ ಪಾಸ್ವಾನ್ ಮತ್ತು ಚಿಕ್ಕಪ್ಪ ಪಶುಪತಿ ಪರಾಸ್ ಬೇರೆಯಾದ ಬಳಿಕ ಪಕ್ಷದ ಚಿಹ್ನೆ ಮತ್ತು ಹೆಸರು ಸಹ ಹಂಚಿಕೆಯಾಗಿದೆ.
ಮಂಗಳವಾರ ಕೇಂದ್ರ ಚುನಾವಣಾ ಆಯೋಗ ಲೋಕ ಜನಶಕ್ತಿ ಪಕ್ಷ ಹೆಸರು (ರಾಮ್ ವಿಲಾಸ್) ಹಾಗೂ ಚಿಹ್ನೆ ಹೆಲಿಕಾಪ್ಟರ್ ಅನ್ನು ಚಿರಾಗ್ ಪಾಸ್ವಾನ್ಗೆ ಹಂಚಿಕೆ ಮಾಡಿದೆ. ಇದೇ ಚಿಹ್ನೆ ಬೇಕು ಎಂದು ಅವರು ಮನವಿಯನ್ನು ಸಲ್ಲಿಕೆ ಮಾಡಿದ್ದರು.
ಪಶುಪತಿ ಪರಾಸ್ ಪಕ್ಷಕ್ಕೆ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ ಎಂಬ ಹೆಸರು ಸಿಕ್ಕಿದೆ. ಪಕ್ಷದ ಚಿಹ್ನೆಯಾಗಿ ಹೊಲಿಗೆ ಯಂತ್ರವನ್ನು ಕೇಂದ್ರ ಚುನಾವಣಾ ಆಯೋಗ ಹಂಚಿಕೆ ಮಾಡಿದೆ. ಈ ಕುರಿತು ಮಂಗಳವಾರ ಎರಡು ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗಿದೆ.

ಉಪ ಚುನಾವಣೆಗೆ ಸ್ಪರ್ಧೆ; ಅಕ್ಟೋಬರ್ 30ರಂದು ಬಿಹಾರದ ಕುಶ್ವೇಶ್ವರ ಆಸ್ಥಾನ್ ಹಾಗೂ ತಾರಾಪುರ ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದೆ. ಉಪ ಚುನಾವಣೆಗೆ ಮುನ್ನ ಚುನಾವಣಾ ಆಯೋಗ ಇಬ್ಬರಿಗೂ ಪಕ್ಷದ ಹೆಸರು, ಚಿಹ್ನೆ ಹಂಚಿಕೆ ಮಾಡಿದೆ.
ಚಿಕ್ಕಪ್ಪ, ಮಕ್ಕಳ ಜಟಾಪಟಿ; ದಿವಗಂತ ರಾಮ್ ವಿಲಾಸ್ ಪಾಸ್ವಾನ್ ಲೋಕಜನ ಶಕ್ತಿ ಪಕ್ಷದ ಚಿಹ್ನ 'ಬಂಗಲೆ'ಯಾಗಿತ್ತು. ಆದರೆ ರಾಮ್ ವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಮತ್ತು ರಾಮ್ ವಿಲಾಸ್ ಪಾಸ್ವಾನ್ ಸಹೋದರ ಪಶುಪತಿ ಕುಮಾರ್ ಪರಾಸ್ ಪಕ್ಷದ ಚಿಹ್ನೆ ಮತ್ತು ಹೆಸರಿಗಾಗಿ ಜಟಾಪಟಿ ನಡೆಸಿದ್ದರು.
ಕೇಂದ್ರ ಚುನಾವಣಾ ಆಯೋಗ ಇಬ್ಬರು ಸಹ 'ಬಂಗಲೆ' ಚಿಹ್ನೆ ಬಳಕೆ ಮಾಡದಂತೆ ಆದೇಶ ಹೊರಡಿಸಿತ್ತು. ಆದ್ದರಿಂದ ಕುಶ್ವೇಶ್ವರ ಆಸ್ಥಾನ್ ಹಾಗೂ ತಾರಾಪುರ ಕ್ಷೇತ್ರಗಳ ಉಪ ಚುನಾವಣೆಗೆ ಇಬ್ಬರಿಗೂ ಚಿಹ್ನೆ ಹಂಚಿಕೆಯಾಗಬೇಕಿತ್ತು.
ಕಳೆದ ವರ್ಷದ ಜೂನ್ನಲ್ಲಿ ಎಲ್ಜೆಪಿಯ 6 ಸದಸ್ಯರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಆಗ ಪಕ್ಷ ಎರಡು ಭಾಗವಾಯಿತು. ಕೆಲವರು ಎಲ್ಜೆಪಿ ನಾಯಕ ಚಿರಾಗ್ ಪಾಸ್ವಾನ್ ಬಿಟ್ಟು ಪಶುಪತಿ ಕುಮಾರ್ ಪರಾಸ್ ಬಣ ಸೇರಿಕೊಂಡಿದ್ದರು.
ಈ ಹಿಂದೆ 2017ರಲ್ಲಿ ಸಮಾಜವಾದಿ ಪಕ್ಷ ಮತ್ತು ಎಐಎಡಿಎಂಕೆ ಪಕ್ಷಗಳು ಸಹ ವಿಭಜನೆ ಬಳಿಕ ಪಕ್ಷದ ಹೆಸರು, ಚುನಾವಣಾ ಚಿನ್ನೆಗಾಗಿ ಚುನಾವಣಾ ಆಯೋಗದ ಮೊರೆ ಹೋಗಿದ್ದವು.
ಹೇಗೆ ಬಗೆಹರಿಸುತ್ತಾರೆ?; ರಾಜಕೀಯ ಪಕ್ಷ ವಿಭಜನೆಗೊಂಡು ಪಕ್ಷದ ಹೆಸರು, ಚಿಹ್ನೆ ಬಗ್ಗೆ ಗೊಂದಲ ಉಂಟಾದರೆ ನ್ಯಾಯಾಲಯದ ಮೊರೆ ಹೋಗುವಂತೆ ಚುನಾವಣಾ ಆಯೋಗ ಸೂಚನೆ ನೀಡುತ್ತದೆ. ಆಯೋಗದ ವ್ಯಾಪ್ತಿಯಲ್ಲಿಯೇ ವಿವಾದವನ್ನು ಬಗೆಹರಿಸಲು ಪ್ರಯತ್ನ ನಡೆಸಲಾಗುತ್ತದೆ.
ಚಿಹ್ನೆ, ಹೆಸರು ವಿವಾದ ಉಂಟಾದಾಗ ಪಕ್ಷದ ಹೆಚ್ಚಿನ ಪದಾಧಿಕಾರಿಗಳು, ಸಂಸದರು, ಶಾಸಕರು ಯಾವ ಕಡೆ ಇದ್ದಾರೆ ಎಂಬುದನ್ನು ನೋಡಿಕೊಂಡು ವಿವಾದವನ್ನು ಬಗೆಹರಿಸಲಾಗುತ್ತದೆ. ಬಿಹಾರದ ಲೋಕಜನಶಕ್ತಿ ಪಕ್ಷದ ವಿವಾದದಲ್ಲಿಯೂ ಇದೇ ಮಾದರಿ ನಡೆದಿದೆ.
ಕಳೆದ ಶುಕ್ರವಾರ ಚಿರಾಗ್ ಪಾಸ್ವಾನ್ ಮತ್ತು ಪಶುಪತಿ ಕುಮಾರ್ ಪರಾಸ್ಗೆ ಪಕ್ಷದ ಚಿಹ್ನೆ ಮತ್ತು ಹೆಸರಿನ ವಿಚಾರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವಂತೆ ಚುನಾವಣಾ ಆಯೋಗ ಸೂಚನೆ ನೀಡಿತ್ತು. ಆದರೆ ಇಬ್ಬರ ಜಟಾಪಟಿ ಮುಂದುವರೆದಿತ್ತು.
ಲೋಕ ಜನಶಕ್ತಿ ಪಕ್ಷ ಹೆಸರು ಹಾಗೂ ಹೆಲಿಕಾಪ್ಟರ್ ಚಿಹ್ನೆ ತಮಗೆ ಬೇಕು ಎಂದು ಚಿರಾಗ್ ಪಾಸ್ವಾನ್ ಆಯೋಗದ ಮಂದೆ ಮನವಿ ಮಾಡಿದ್ದರು. ಮಂಗಳವಾರ ಆಯೋಗ ಚಿಹ್ನೆ, ಹೆಸರು ಹಂಚಿಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿದೆ.
ಲೋಕಜನ ಶಕ್ತಿ ಪಕ್ಷದ ಸಂಸ್ಥಾಪಕ ಮತ್ತು ಕೇಂದ್ರ ಸಚಿವರಾಗಿದ್ದ ರಾಮ್ ವಿಲಾಸ್ ಪಾಸ್ವಾನ್ 2020ರ ಅಕ್ಟೋಬರ್ನಲ್ಲಿ ನಿಧನ ಹೊಂದಿದ್ದರು. ಅವರು ಮೃತಪಟ್ಟ ಕೆಲವೇ ದಿನಗಳಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆದಿತ್ತು.












Click it and Unblock the Notifications