ನಿತ್ಯಾನಂದನಿಗೆ 'ಕೈಲಾಸ' ಕೊಟ್ಟೇ ಇಲ್ಲ, ಆತ ಹೈಟಿಗೆ ಪರಾರಿಯಾಗಿದ್ದಾನೆ!
ನವದೆಹಲಿ, ಡಿಸೆಂಬರ್ 6: ದಕ್ಷಿಣ ಅಮೆರಿಕದ ಈಕ್ವೆಡಾರ್ ದೇಶಕ್ಕೆ ಸೇರಿದ ದ್ವೀಪವೊಂದನ್ನು ಖರೀದಿ ಮಾಡಿ ಸ್ವಾಮಿ ನಿತ್ಯಾನಂದ ಅಲ್ಲಿ 'ಕೈಲಾಸ' ಎಂಬ ಹಿಂದೂ ದೇಶ ನಿರ್ಮಿಸಲು ಹೊರಟಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದನ್ನು ಈಕ್ವೆಡಾರ್ ನಿರಾಕರಿಸಿದೆ.
ಅತ್ಯಾಚಾರ, ಅಕ್ರಮ ಬಂಧನ ಸೇರಿದಂತೆ ವಿವಿಧ ಆರೋಪಗಳನ್ನು ಎದುರಿಸುತ್ತಿರುವ, ಭಾರತದಿಂದ ಪರಾರಿಯಾಗಿರುವ ನಿತ್ಯಾನಂದನಿಗೆ ತಾನು ಆಶ್ರಯ ನೀಡಿಲ್ಲ ಮತ್ತು ತನ್ನ ನೆಲದಲ್ಲಿ ಯಾವುದೇ ಭೂಮಿ ಖರೀದಿ ಮಾಡಲು ಸಹಾಯ ನೀಡಿಲ್ಲ ಎಂದು ಈಕ್ವೆಡಾರ್ ಸರ್ಕಾರ ಸ್ಪಷ್ಟಪಡಿಸಿದೆ.
ತನಗೆ ಆಶ್ರಯ ನೀಡಬೇಕು ಎಂಬ ನಿತ್ಯಾನಂದ ಸ್ವಾಮಿಯ ಮನವಿಯನ್ನು ವಾಸ್ತವವಾಗಿ ಸರ್ಕಾರ ತಿರಸ್ಕರಿಸಿತ್ತು. ಹೀಗಾಗಿ ಆತ ಈಕ್ವೆಡಾರ್ ಬಿಟ್ಟು ಹೈಟಿಗೆ ತೆರಳಿದ್ದ ಎಂದು ಈಕ್ವೆಡಾರ್ ರಾಯಭಾರ ಕಚೇರಿ ಹೇಳಿಕೆ ತಿಳಿಸಿದೆ. ಇದರಿಂದ ನಿತ್ಯಾನಂದ ಈಕ್ವೆಡಾರ್ನಲ್ಲಿ ಭೂಮಿ ಖರೀದಿ ಮಾಡಿ ಅಲ್ಲಿ 'ಕೈಲಾಸ' ದೇಶ ಸ್ಥಾಪಿಸಿದ್ದಾನೆ ಎಂಬ ಕಥೆಗಳಿಗೆ ಹೊಸ ತಿರುವು ಸಿಕ್ಕಿದೆ. ಈಗ ಆತ ಎಲ್ಲಿರಬಹುದು ಎಂಬ ಪ್ರಶ್ನೆ ಮತ್ತೆ ಉದ್ಭವಿಸಿದೆ.
ಕೈಲಾಸ ವೆಬ್ಸೈಟ್ ಸ್ಥಾಪನೆಯಾಗಿದ್ದು ದಕ್ಷಿಣ ಅಮೆರಿಕದ ದೇಶದಲ್ಲಿ ಎಂದು ಹೇಳಲಾಗಿದೆ. ಹೀಗಾಗಿ ಆತ ಈಕ್ವೆಡಾರ್ನಲ್ಲಿ ದ್ವೀಪವೊಂದನ್ನು ಖರೀದಿಸಿ ತನ್ನದೇ ಸಾಮ್ರಾಜ್ಯ ನಿರ್ಮಿಸಿಕೊಂಡಿದ್ದಾನೆ. ಅದನ್ನು ಏಕೈಕ ಹಿಂದೂ ರಾಷ್ಟ್ರ ಎಂದು ಕರೆದುಕೊಂಡಿದ್ದು, ಅದಕ್ಕೆ ಮಾನ್ಯತೆ ಪಡೆದುಕೊಳ್ಳಲು ಸಹ ಸಿದ್ಧತೆ ನಡೆಸಿದ್ದಾನೆ ಎಂದು ಹೇಳಲಾಗಿತ್ತು.

ಜಮೀನು ನೀಡಿಲ್ಲ, ಸಹಾಯ ಮಾಡಿಲ್ಲ
'ಸ್ವಯಂಘೋಷಿತ ಗುರು ನಿತ್ಯಾನಂದನಿಗೆ ಈಕ್ವೆಡಾರ್ ಆಶ್ರಯ ಕಲ್ಪಿಸಿದೆ, ದಕ್ಷಿಣ ಅಮೆರಿಕದಲ್ಲಿಯಾಗಲೀ ಅಥವಾ ಈಕ್ವೆಡಾರ್ನಿಂದ ದೂರದಲ್ಲಾಗಲೀ ಜಮೀನು ಅಥವಾ ದ್ವೀಪ ಖರೀದಿಗೆ ಈಕ್ವೆಡಾರ್ ಸರ್ಕಾರ ಸಹಾಯ ಮಾಡಿದೆ ಎಂದು ಪ್ರಕಟವಾಗಿರುವ ಸುದ್ದಿಗಳು ಮತ್ತು ಹೇಳಿಕೆಗಳನ್ನು ಈಕ್ವೆಡಾರ್ ರಾಯಭಾರ ಕಚೇರಿ ಸಾರಾಸಗಟಾಗಿ ತಳ್ಳಿಹಾಕುತ್ತದೆ' ಎಂದು ಹೇಳಿಕೆ ಸ್ಪಷ್ಟಪಡಿಸಿದೆ.

ನಿತ್ಯಾನಂದನ ಬೇಡಿಕೆ ತಿರಸ್ಕಾರ
'ಮುಖ್ಯವಾಗಿ ನಿತ್ಯಾನಂದ ಈ ಹಿಂದೆ ಸಲ್ಲಿಸಿದ್ದ ಅಂತಾರಾಷ್ಟ್ರೀಯ ವೈಯಕ್ತಿಕ ರಕ್ಷಣೆ (ಆಶ್ರಯ) ಬೇಡಿಕೆಯನ್ನು ಈಕ್ವೆಡಾರ್ ತಿರಸ್ಕರಿಸಿತ್ತು. ಬಳಿಕ ಆತ ಈಕ್ವೆಡಾರ್ಅನ್ನು ತ್ಯಜಿಸಿ ಹೈಟಿಗೆ ತೆರಳಿದ್ದ' ಎಂದು ರಾಯಭಾರ ಕಚೇರಿ ತಿಳಿಸಿದೆ.

ಈಕ್ವೆಡಾರ್ ಹೆಸರು ಬಳಸಿಕೊಳ್ಳಬೇಡಿ
ಭಾರತದ ಡಿಜಿಟಲ್ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಮಾಹಿತಿಯನ್ನು ನಿತ್ಯಾನಂದ ಅಥವಾ ಆತನ ಜತೆಗಾರರು ನಿರ್ವಹಿಸುತ್ತಿರಬಹುದಾದ ಕೈಲಾಸ.ಓಆರ್ಜಿ ವೆಬ್ಸೈಟ್ ಮೂಲದಿಂದ ಪಡೆದುಕೊಳ್ಳಲಾಗಿದೆ. ನಿತ್ಯಾನಂದನಿಗೆ ಸಂಬಂಧಿಸಿದ ಯಾವುದೇ ಮಾದರಿಯ ಮಾಹಿತಿಗಳನ್ನು ಪ್ರಕಟಿಸುವಾಗ ಈಕ್ವೆಡಾರ್ನ ಹೆಸರನ್ನು ಬಳಸದಂತೆ ಡಿಜಿಟಲ್ ಮತ್ತು ಮುದ್ರಣ ಮಾಧ್ಯಮಗಳಿಗೆ ಮನವಿ ಮಾಡುವುದಾಗಿ ಅದು ಹೇಳಿದೆ.

ವೆಬ್ಸೈಟ್ ಮಾಡುವುದಕ್ಕೂ ದೇಶ ಕಟ್ಟುವುದಕ್ಕೂ ವ್ಯತ್ಯಾಸವಿದೆ
'ಒಂದು ದೇಶವನ್ನು ನಿರ್ಮಿಸುವುದಕ್ಕಿಂತ ಒಂದು ವೆಬ್ಸೈಟ್ ನಿರ್ಮಿಸುವುದು ವಿಭಿನ್ನ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ಹೇಳಿದೆ.
'ನಾವು ಆತನ ಪಾಸ್ಪೋರ್ಟ್ಅನ್ನು ರದ್ದುಗೊಳಿಸಿದ್ದೆವು. ಆತನಿಗೆ ಪೊಲೀಸರ ಅನುಮತಿ ದೊರಕದ ಕಾರಣ ಹೊಸ ಪಾಸ್ಪೋರ್ಟ್ ಬೇಡಿಕೆಯನ್ನು ತಡೆಹಿಡಿಯಲಾಗಿತ್ತು. ನಾವು ನಮ್ಮ ಎಲ್ಲ ಕಚೇರಿಗಳಿಗೆ ಸೂಚನೆ ನೀಡಿದ್ದೇವೆ. ದೇಶಭ್ರಷ್ಟರು ಇರುವ ಸ್ಥಳವನ್ನು ಪತ್ತೆಹಚ್ಚುವುದು ಕಷ್ಟಕರ. ಆತನನ್ನು ಪತ್ತೆಹಚ್ಚುವುದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕೆಲಸವಲ್ಲ. ಆತನ ಬಗ್ಗೆ ಯಾವುದೇ ಮಾಹಿತಿ ಇದ್ದರೂ ನೀಡುವಂತೆ ವಿದೇಶಗಳ ಸರ್ಕಾರಗಳಿಗೆ ತಿಳಿಸಿದ್ದೇವೆ' ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದರು.











Click it and Unblock the Notifications